ಮಂಗಳೂರು- ಯಶವಂತಪುರ ವೀಕ್ಲಿ ರೈಲು ವೇಳಾಪಟ್ಟಿ ಪರಿಷ್ಕರಣೆ

By Kannadaprabha NewsFirst Published Mar 27, 2023, 10:02 PM IST
Highlights

ಮಂಗಳೂರು ಜಂಕ್ಷನ್‌- ಯಶವಂತಪುರ ಜಂಕ್ಷನ್‌ ನಡುವೆ ಪ್ರತಿ ಭಾನುವಾರ ಸಂಚರಿಸುವ ಸಾಪ್ತಾಹಿಕ ಎಕ್ಸ್‌ಪ್ರೆಸ್‌ (16540) ರೈಲಿನ ವೇಳಾಪಟ್ಟಿಪರಿಷ್ಕರಿಸಿ ನೈರುತ್ಯ ರೈಲ್ವೆ ವಲಯವು ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.

ಮಂಗಳೂರು (ಮಾ.27) : ಮಂಗಳೂರು ಜಂಕ್ಷನ್‌- ಯಶವಂತಪುರ ಜಂಕ್ಷನ್‌ ನಡುವೆ ಪ್ರತಿ ಭಾನುವಾರ ಸಂಚರಿಸುವ ಸಾಪ್ತಾಹಿಕ ಎಕ್ಸ್‌ಪ್ರೆಸ್‌ (16540) ರೈಲಿನ ವೇಳಾಪಟ್ಟಿಪರಿಷ್ಕರಿಸಿ ನೈರುತ್ಯ ರೈಲ್ವೆ ವಲಯವು ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಜುಲೈ 16ರಿಂದ ಈ ರೈಲು ಮಂಗಳೂರು ಜಂಕ್ಷನ್‌(Mangalore Junction)ನಿಂದ ಬೆಳಗ್ಗೆ 7 ಗಂಟೆಗೆ ಹೊರಡಲಿದ್ದು, ಯಶವಂತಪುರ(Yashvantapur railway station) (ಬೆಂಗಳೂರು)ಕ್ಕೆ ಸಂಜೆ 4.30ಕ್ಕೆ ತಲುಪಲಿದೆ.

ಪ್ರಯಾಣಿಕರ ದಟ್ಟಣೆ, ಮುರುಡೇಶ್ವರ- ಬೆಂಗಳೂರು ರೈಲು ಮತ್ತೆ 3 ತಿಂಗಳು ವಿಸ್ತರಣೆ

ಪ್ರಸ್ತುತ ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್‌- ಯಶವಂತಪುರ ಜಂಕ್ಷನ್‌ ಗೋಮಟೇಶ್ವರ ಎಕ್ಸಪ್ರೆಸ್‌(Gomateshwar express) ರೈಲು ಮಧ್ಯಾಹ್ನ 11:30ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 8:45ಕ್ಕೆ ಯಶವಂತಪುರ ಜಂಕ್ಷನ್‌ ತಲುಪುತ್ತಿದೆ. ರೈಲು ಸಂಖ್ಯೆ 16540 ಮಂಗಳೂರು- ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್‌(Mangalore-Yeshwantpur Weekly Express) ಭಾನುವಾರ ಮಂಗಳೂರಿನಿಂದ ಬೆಳಗ್ಗೆ 9:15ಕ್ಕೆ ಹೊರಟು ಯಶವಂತಪುರ ರಾತ್ರಿ 8:20ಕ್ಕೆ ತಲುಪುತ್ತಿದೆ.

ಇದರಿಂದ ಮಂಗಳೂರಿನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಊಟ ತಿಂಡಿಗೂ ಸಮಸ್ಯೆ ಆಗುತ್ತಿತ್ತು. ಯಶವಂತಪುರಕ್ಕೆ ರಾತ್ರಿ ತಲುಪುವುದರಿಂದ ಅಲ್ಲಿಂದ ಬೆಂಗಳೂರಿನ ಬೇರೆ ಭಾಗಗಳಿಗೆ ಹೋಗುವವರಿಗೆ ತಮ್ಮ ಗಮ್ಯ ಸ್ಥಾನ ತಲುಪುವಾಗ ತಡರಾತ್ರಿಯಾಗುತ್ತಿದೆ. ರಾತ್ರಿ ಹೊತ್ತು ಯಶವಂತಪುರ ಮೂಲಕ ಹಲವಾರು ರೈಲುಗಳು ಹಾದು ಹೋಗುವುದರಿಂದ ಕ್ರಾಸಿಂಗ್‌, ಪ್ಲಾಟ್‌ಫಾಮ್‌ರ್‍ ಲಭ್ಯತೆಗೋಸ್ಕರ ಯಶವಂತಪುರ ರೈಲು ನಿಲ್ದಾಣದ ಹೊರಭಾಗದಲ್ಲಿ ಈ ರೈಲುಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಈ ರೈಲುಗಳು ಯಶವಂತಪುರ ರೈಲು ನಿಲ್ದಾಣ ತಲುಪುವಾಗ ಇನ್ನೂ ತಡವಾಗುತ್ತಿದೆ. ರೈಲು ಸಂಖ್ಯೆ 16540 357 ಕಿ.ಮೀ. ಕ್ರಮಿಸಲು ಪ್ರಸ್ತುತ 11 ಗಂಟೆ 5 ನಿಮಿಷ ತೆಗೆದುಕೊಳ್ಳುತ್ತಿದೆ.

ಸುಬ್ರಹ್ಮಣ್ಯ- ಸಕಲೇಶಪುರ ಘಾಟಿ ಪ್ರದೇಶದಲ್ಲಿ ಸಕಲೇಶಪುರ ಕಡೆಯಿಂದ ಬರುವ ರೈಲುಗಳ ಜತೆಗೆ ಕ್ರಾಸಿಂಗ್‌ ಮಾಡಲು ಘಾಟಿ ಪ್ರದೇಶದಲ್ಲಿ ಈಗ ಒಂದು ಘಂಟೆ ನಿಲ್ಲಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರ ಅಮೂಲ್ಯ ಸಮಯ, ಒಂದು ದಿನ ಸಂಪೂರ್ಣ ವ್ಯರ್ಥವಾಗುತ್ತಿದೆ. ಹಾಗಾಗಿ ಈ ಎರಡು ರೈಲುಗಳನ್ನು ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಬೆಂಗಳೂರಿಗೆ ಸಂಜೆ ಬೇಗ ತಲುಪುವ ಹಾಗೆ ಮಾಡಬೇಕೆಂದು ಮಂಗಳೂರಿನ ಪಶ್ಚಿಮ ಕರಾವಳಿ ರೈಲು ಯಾತ್ರಿಕರ ಸಂಘವು ಸಂಸದ ನಳಿನ್‌ ಕುಮಾರ್‌ ಕಟೀಲು ಅವರಿಗೆ ಮನವಿ ಮಾಡಿತ್ತು.

ಸಂಸದರು ರೈಲಿನ ವೇಳಾಪಟ್ಟಿಬದಲಿಸುವಂತೆ ನೈರುತ್ಯ ರೈಲ್ವೆ ವಲಯ ಹಾಗೂ ದಕ್ಷಿಣ ರೈಲ್ವೆ ವಲಯಕ್ಕೆ ಪತ್ರ ಬರೆದು ಮನವಿ ಮಾಡಿದ್ದರು. ಈ ಬಗ್ಗೆ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಸದಸ್ಯರು ಹುಬ್ಬಳ್ಳಿಯ ನೈರುತ್ಯ ರೈಲ್ವೆ ಕಚೇರಿಗೆ ಕಳೆದ ಫೆಬ್ರವರಿಯಲ್ಲಿ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವರಿಕೆ ಮಾಡಿ ಲಿಖಿತ ಮನವಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿಪರಿಷ್ಕರಣೆಗೆ ರೈಲ್ವೆ ಇಲಾಖೆ ನಿರ್ಧಾರ ಕೈಗೊಂಡಿದೆ.

 

Yashwanthpur Railway Station: ಡ್ರಮ್‌ನಲ್ಲಿ ಯುವತಿ ಶವ ಪತ್ತೆ: ಬೆಚ್ಚಿಬಿದ್ದ ಪ್ರಯಾಣಿಕರು

ವಾರದಲ್ಲಿ ಮೂರು ದಿನ ಸಂಚರಿಸುವ ಮಂಗಳೂರು ಜಂಕ್ಷನ್‌- ಯಶವಂತಪುರ ಜಂಕ್ಷನ್‌ ಗೋಮಟೇಶ್ವರ ಎಕ್ಸಪ್ರೆಸ್‌ ರೈಲು (16576) ಕೂಡ ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 7ಕ್ಕೆ ಹೊರಟು ಯಶವಂತಪುರ ಸಂಜೆ 4.30ಕ್ಕೆ ತಲುಪುವಂತೆ ವೇಳಾಪಟ್ಟಿಪರಿಷ್ಕರಣೆಗೆ ನೈರುತ್ಯ ರೈಲ್ವೆಯ ಮೈಸೂರು, ಬೆಂಗಳೂರು ಮತ್ತು ದಕ್ಷಿಣ ರೈಲ್ವೆಯ ಪಾಲಕ್ಕಡ್‌ ವಿಭಾಗಗಳು ಈಗಾಗಲೇ ಒಪ್ಪಿಗೆ ನೀಡಿದ್ದು, ನೈರುತ್ಯ ರೈಲ್ವೆ ವಲಯ ಕಚೇರಿಯಿಂದ ಕೂಡ ಶೀಘ್ರ ಒಪ್ಪಿಗೆ ದೊರೆಯುವ ನಿರೀಕ್ಷೆ ಇದೆ ಎಂದು ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್‌ ತಿಳಿಸಿದ್ದಾರೆ.

click me!