
ರಾಯಚೂರು (ಮೇ.5): ಪ್ರೀತಿ-ಪ್ರೇಮದ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ಯುತ್ತಿದ್ದ ವೇಳೆ ಯುವಕರನ್ನು ಪ್ರಶ್ನಿಸಿದ್ದ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಯಾಪಲದಿನ್ನಿ ಗ್ರಾಮದಲ್ಲಿ ನಡೆದಿದ್ದು ಇಡೀ ಜಿಲ್ಲೆಯೇ ಬೆಚ್ಚಿಬಿದ್ದಿದೆ.
ಯಾಪಲದಿನ್ನಿ ಗ್ರಾಮದ ಈಶಪ್ಪ (30) ಕೊಲೆಯಾದ ದುರ್ದೈವಿ. ಘಟನೆ ನಡೆದ ರಾತ್ರಿ ಈಶಪ್ಪ ತಮ್ಮ ಮನೆಯ ಮಾಳಿಗೆಯ ಮೇಲೆ ಮಲಗಿದ್ದರು. ಈ ವೇಳೆ ಅನ್ಯ ಧರ್ಮದ ಯುವಕ ಅಸ್ಲಂ ಮತ್ತು ಆತನ ಸ್ನೇಹಿತರು ಸೇರಿ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ಯುತ್ತಿರುವುದನ್ನು ಈಶಪ್ಪ ಗಮನಿಸಿದ್ದಾರೆ.
ಅನ್ಯಕೋಮಿನ ಯುವಕರು ಕರೆದೊಯ್ಯುತ್ತಿರುವ ಅಪ್ರಾಪ್ತೆ ತನ್ನ ಸ್ನೇಹಿತ ಆಂಜನೇಯನ ತಮ್ಮನ ಮಗಳಾಗಿದ್ದರಿಂದ, ಈಶಪ್ಪ ತಕ್ಷಣ ಮಾಳಿಗೆಯಿಂದ ಕೆಳಗಿಳಿದು ಬಂದು ಯುವಕರನ್ನು ತಡೆದು, 'ಬಾಲಕಿಯನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದೀರಿ?' ಎಂದು ಪ್ರಶ್ನಿಸಿದ್ದರು.
ಈ ವೇಳೆ ತಮ್ಮ ಕೃತ್ಯಕ್ಕೆ ಅಡ್ಡಿಯಾದ ಈಶಪ್ಪನ ಮೇಲೆ ಆಕ್ರೋಶಗೊಂಡ ಅಸ್ಲಂ ಮತ್ತು ಆತನ ಗ್ಯಾಂಗ್, ಹಗ್ಗ ಅಥವಾ ವೈರ್ನಿಂದ ಈಶಪ್ಪನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಸದ್ಯ ಅನ್ಯಕೋಮಿನ ಯುವಕರಿಂದ ಕಿಡ್ನಾಪ್ ಆಗಿರೋ ಬಾಲಕಿಯ ಮನೆಯ ಮುಂದೆಯೇ ಈಶಪ್ಪನ ಮೃತದೇಹವನ್ನಿಟ್ಟು ಕುಟುಂಬಸ್ಥರು, ನ್ಯಾಯಕ್ಕಾಗಿ ಪಟ್ಟು ಹಿಡಿದಿದ್ದಾರೆ. ತಪ್ಪಿತಸ್ಥರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಘಟನಾ ಸ್ಥಳದಲ್ಲೇ ಪ್ರತಿಭಟನೆ ಮುಂದುವರಿಸಿದ್ದಾರೆ.
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಯಾಪಲದಿನ್ನಿ ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ