
ಬೆಂಗಳೂರು(ಮೇ 05): ರಾಜಕೀಯ ವಲಯದಲ್ಲಿ ಸದಾ ಸಕ್ರಿಯರಾಗಿರುವ ಸಚಿವ ಜಮೀರ್ ಅಹಮದ್ ಖಾನ್ ಅವರ ಕುಟುಂಬದ ಆಪ್ತ ಸಂಬಂಧಿಕರೇ ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಚಿವರ ತಾಯಿಯ ರಕ್ತಸಂಬಂಧಿಯೇ ಈ ಕೃತ್ಯ ಎಸಗಿರುವುದು ಈಗ ಎಲ್ಲರನ್ನೂ ಬೆರಗಾಗಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಸೈಯದ್ ಅಮೀರ್ ಮತ್ತು ಅಮಿರ್ ಅಹ್ಮದ್ ಎಂದು ಗುರುತಿಸಲಾಗಿದೆ. ಇವರಲ್ಲಿ ಸೈಯದ್ ಅಮೀರ್ ಸಚಿವ ಜಮೀರ್ ಅಹಮದ್ ಅವರ ತಾಯಿಯ ಹತ್ತಿರದ ಸಂಬಂಧಿಯಾಗಿದ್ದಾನೆ. ಸೈಯದ್ ಅಮೀರ್ ಜೊತೆಗೆ ಟ್ರಾವೆಲ್ಸ್ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದ ಅಮಿರ್ ಅಹ್ಮದ್ ಕೂಡ ಈ ಕಳ್ಳತನದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಆರೋಪಿಗಳು ಟ್ರಾವೆಲ್ ಬ್ಯುಸಿನೆಸ್ ನಡೆಸುತ್ತಿದ್ದರು. ಆದರೆ ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಇವರ ವ್ಯವಹಾರ ತೀವ್ರ ನಷ್ಟಕ್ಕೆ ಸಿಲುಕಿತ್ತು. ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಮತ್ತು ಸಾಲ ತೀರಿಸಲು ಇವರು ಹಣದ ಹಪಹಪಿಯಲ್ಲಿದ್ದರು. ಎಲ್ಲಿಯೂ ಫೈನಾನ್ಸ್ ಅಥವಾ ಸಾಲ ಸಿಗದಿದ್ದಾಗ, ಅಂತಿಮವಾಗಿ ತಮ್ಮದೇ ಸಂಬಂಧಿಯಾದ ಸಚಿವರ ಮನೆಯ ಮೇಲೆ ಕಣ್ಣು ಹಾಕಿದ್ದಾರೆ. ಕದ್ದ ಚಿನ್ನಾಭರಣಗಳನ್ನು ಅಡವಿಟ್ಟು ಆ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ದುರಾಲೋಚನೆ ಇವರದ್ದಾಗಿತ್ತು.
ಸೈಯದ್ ಅಮೀರ್ ರಕ್ತಸಂಬಂಧಿಯಾಗಿದ್ದರಿಂದ ಪ್ರತಿದಿನ ಜಮೀರ್ ಅವರ ಮನೆಗೆ ಬಂದು ಹೋಗುತ್ತಿದ್ದ. ಮನೆಯವರೊಂದಿಗೆ ಅತ್ಯಂತ ಆತ್ಮೀಯವಾಗಿ, 'ಒಳ್ಳೆಯವನಂತೆ' ನಟಿಸುತ್ತಿದ್ದ. ಇದೇ ನಂಬಿಕೆಯನ್ನು ಬಳಸಿಕೊಂಡು 2023 ರಿಂದಲೇ ಸಣ್ಣ ಸಣ್ಣದಾಗಿ ಚಿನ್ನಾಭರಣಗಳನ್ನು ಕದಿಯಲು ಶುರು ಮಾಡಿದ್ದ. ಒಟ್ಟು 1 ಕೆಜಿ 200 ಗ್ರಾಂ ಚಿನ್ನಾಭರಣಗಳನ್ನು ಈ ಖದೀಮರು ಎಗರಿಸಿದ್ದರು.
ಕಳ್ಳತನದ ವಿಷಯ ಮನೆಯವರಿಗೆ ತಿಳಿಯುತ್ತಿದ್ದಂತೆಯೇ ಸೈಯದ್ ಅಮೀರ್ ತನ್ನ ನಡವಳಿಕೆಯನ್ನು ಬದಲಿಸಿಕೊಂಡಿದ್ದ. ಪ್ರತಿದಿನ ಮನೆಗೆ ಬರುತ್ತಿದ್ದವನು ದಿಢೀರನೇ ಬರುವುದನ್ನು ನಿಲ್ಲಿಸಿದ್ದ. ಮನೆಯವರು ಫೋನ್ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಯಾವಾಗ ಆತನ ಮೊಬೈಲ್ ಸ್ವಿಚ್ ಆಫ್ ಆಯಿತೋ, ಪೊಲೀಸರಿಗೆ ಆತನ ಮೇಲೆ ಗಟ್ಟಿ ಅನುಮಾನ ಬಂದಿತು. ತಾಂತ್ರಿಕ ಕಾರ್ಯಾಚರಣೆ ನಡೆಸಿದ ಶಿವಾಜಿನಗರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂದಿದೆ.
ಬಂಧಿತರಿಂದ ಪೊಲೀಸರು ಸುಮಾರು 1 ಕೋಟಿ 13 ಲಕ್ಷ ರೂಪಾಯಿ ಮೌಲ್ಯದ 759 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇಷ್ಟು ದಿನ ಸಚಿವರ ಮನೆಯಲ್ಲೇ ಇದ್ದು ಕನ್ನ ಹಾಕಿದ ಈ 'ನಂಬಿಕೆ ದ್ರೋಹಿ'ಯ ಕೃತ್ಯ ಈಗ ಶಿವಾಜಿನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಿಖೆ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ