ಪರಿಸರ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗವೆಂದು ರಾಸೇಶ್ವರಿ ರಾಜಲಕ್ಷ್ಮಿ ಹೇಳಿದರು. ಮಳೆ ನೀರು ಕೊಯ್ಲು ಅಳವಡಿಸಿಕೊಂಡರೆ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಎಸ್. ಎನ್.ಪಾಂಡೆ ಅಭಿಪ್ರಾಯಪಟ್ಟರು.
ಪರಿಸರ ಸಂರಕ್ಷಣೆ ಎನ್ನುವುದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ನಮಗೆ ಜೀವಿಸಲು ಬೇಕಾದ ವಸ್ತುಗಳನ್ನು ಪ್ರಕೃತಿ ಉಚಿತವಾಗಿ ನೀಡುತ್ತದೆ ಅದಕ್ಕಾಗಿ ಉಪಕಾರ ಸ್ಮರಣೆ ದೃಷ್ಟಿಯಿಂದ ನಾವು ಪ್ರಕೃತಿಯ ಭಾಗವಾದ ಜಲವನ್ನು ಅತ್ಯಂತ ಗೌರವತವಾಗಿ ನೋಡಬೇಕು ಮತ್ತು ಮಿತ ಬಳಕೆ ಮಾಡಬೇಕು. ಉಪಕಾರ ಸ್ಮರಣೆ ಮಾಡದವರು ತಪ್ಪಿತಸ್ಥರು ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನೇ ಹೇಳಿದ್ದಾನೆ ಎಂದು ರಾಜಸ್ಥಾನದ ಜೈಸಲ್ಮೇರ್ ಮಹಾರಾಣಿ ರಾಸೇಶ್ವರಿ ರಾಜಲಕ್ಷ್ಮಿ ಹೇಳಿದರು. ಜಯನಗರದ ವಿಶ್ವ ಸರ್ ಎಂ ವಿಶ್ವೇಶ್ವರಯ್ಯ ರೇನ್ ವಾಟರ್ ಹಾರ್ವೆಸ್ಟಿಂಗ್ ಥೀಮ್ ಪಾರ್ಕ್ ನಲ್ಲಿ ಪರ್ಯಾವರಣ ಸಂರಕ್ಷಣ ಗತಿ ವಿಧಿ ಆಯೋಜಿಸಿದ ನಮ್ಮ ಪ್ಲಂಬರ್ ನಮ್ಮ ಹೀರೋ ಎನ್ನುವ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಸಂವಾದಕಿ ಆಗಿ ಮಾತನಾಡಿದರು.
ರಾಜಸ್ಥಾನದ ಜೈಸಲ್ಮೀರ್ ದಂತಹ ಅತ್ಯಂತ ಕಡಿಮೆ ನೀರಿರುವ ಪ್ರದೇಶದಲ್ಲಿ ನೀರಿನ ಸಂರಕ್ಷಣೆಯ ಯಶೋಗಾಥೆಯನ್ನು ತಿಳಿಸಿ ಪ್ರತಿಯೊಬ್ಬರಿಗೂ ಜಲ ಜಾಗೃತಿಗೆ ಪ್ರೇರೇಪಿಸಿದರರು.
ವರ್ಷದಿಂದ ವರ್ಷಕ್ಕೆ ದೇಶದ ಎಲ್ಲ ಮೆಟ್ರೋಪಾಲಿಟನ್ ನಗರಗಳಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತಿದೆ. ಪ್ರತಿ ಮನೆಯಲ್ಲೂ ಮಳೆ ನೀರು ಕೊಯ್ಲು ಅಳವಡಿಸಿಕೊಂಡರೆ ನೀರಿನ ಸಮಸ್ಯೆಗೆ ದೊಡ್ಡ ಪರಿಹಾರ ಸಿಗುತ್ತದೆ ಎಂದು ಕೇಂದ್ರ ಜಲ ಆಯೋಗದ ಮುಖ್ಯ ಅಭಿಯಂತರ ಎಸ್. ಎನ್.ಪಾಂಡೆ ಅಭಿಪ್ರಾಯಪಟ್ಟರು .
ಇದನ್ನೂ ಓದಿ: ಅಮೇಜಾನ್ ಕಾಡು ಕಡಿದು ಜಾಗತಿಕ ಪರಿಸರ ಸಮ್ಮೇಳನ!
ದೇಶದ ಬಹುತೇಕ ಮೆಟ್ರೋಪಾಲಿಟನ್ ನಗರಗಳಿಗೆ ಹೊರಗಡೆಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಬವಣೆ ತೀವ್ರವಾಗಿರುತ್ತದೆ. ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಿಕೊಂಡರೆ ಸಾಕಷ್ಟು ಪ್ರಮಾಣದಲ್ಲಿ ನೀರು ಶೇಖರಣೆ ಮಾಡಿಕೊಳ್ಳಬಹುದು. ದೇಶದ ಇತರೆ ಮಹಾನಗರಗಳನ್ನು ಹೋಲಿಸಿದರೆ ಬೆಂಗಳೂರಿನಲ್ಲಿ ಮಾತ್ರ ಹಿಂಗಾರು, ಮುಂಗಾರು ಅವಧಿಯಲ್ಲಿ ಮಳೆಯಾಗುತ್ತದೆ. ಹಾಗಾಗಿ, ಇಲ್ಲಿನ ನಿವಾಸಿಗಳು ಬೋರ್ವೆಲ್ ಅಥವಾ ಕಾವೇರಿ ನೀರಿನ ಮೇಲೆ ಅವಲಂಬಿತವಾಗದೆ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವುದು ಉತ್ತಮ ಎಂದರು.
ಇಂಡಿಯನ್ ಪ್ಲಂಬಿಂಗ್ ಅಸೋಸಿಯೇಷನ್ ಅಧ್ಯಕ್ಷ ಬಾಲಕೃಷ್ಣ ಮೆಹತಾ ಮಾತನಾಡಿ, ನೀರಿನ ಮೌಲ್ಯದ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕು. ಅನಗತ್ಯವಾಗಿ ನೀರು ಪೋಲು ಮಾಡಬಾರದು. ಸರ್ಕಾರ ಮಾತ್ರವಲ್ಲದೆ ನೀರು ಉಳಿಸಲು ಸಾರ್ವಜನಿಕರು ಮುಂದಾಗಬೇಕು. ಪ್ರತಿ ಹನಿ ನೀರು ಉಳಿಸುತ್ತೇನೆ ಎಂದು ಜನರು ಶಪಥ ಮಾಡಬೇಕು. ನಮ್ಮ ಸಂಸ್ಥೆಯಿಂದ ನೀರಿನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಭವಿಷ್ಯದಲ್ಲಿ ನೀರಿನ ಅಭಾವ ಜಾಸ್ತಿ
ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಇನ್ನಷ್ಟು ನೀರಿನ ಅಭಾವ ಎದುರಾಗಲಿದೆ.ಸಾಕಷ್ಟು ನೀರಿನ ಸಂಪನ್ಮೂಲಗಳಿದ್ದರೂ ಬೋರ್ವೇಲ್ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಬೋರ್ವೆಲ್ ನೀರು ಗುಣಮಟ್ಟವಲ್ಲ. ಕೆಲ ಪಟ್ಟಣಗಳಿಗೆ 70 ಕಿ.ಮೀ.ನಿಂದ 150 ಕಿ.ಮೀ.ವರೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯಿಂದ ರಾಜ್ಯದ 220 ಸ್ಥಳಿಯ ಸಂಸ್ಥೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಮಿತವಾಗಿ ನೀರನ್ನು ಬಳಸಬೇಕು. ಮಳೆ ನೀರು ಕೊಯ್ಲು ವ್ಯವಸ್ಥೆಯಿಂದಲೇ ನೀರಿನ ಸಮಸ್ಯೆಗೆ ಪರಿಹಾರ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಅಭಿಯಂತರ ಯು ನಳಿನಾಕ್ಷಿ ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂಜಲ ಸಂರಕ್ಷಣೆ ಭಾಗವಾಗಿ ಸಮಾಜವನ್ನು ಜಲ ಸಾಕ್ಷರರನ್ನಾಗಿ ಮಾಡುವ ಒಮ್ಮತದ ನಿರ್ಧಾರ ಸಂವಾದದಲ್ಲಿ ಮೂಡಿಬಂತು. ಪರ್ಯಾವರಣ ಸಂರಕ್ಷಣ ಗತಿವಿಧಿ ಜಲ ಆಯಾಮ ಪ್ರಮುಖರಾದ ಡಾಕ್ಟರ್ ಕೆ.ಆರ್ ಶ್ರೀ ಹರ್ಷ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. 150ಕ್ಕೂ ಅಧಿಕ ಪರಿಸರ ಆಸಕ್ತರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನೀರು ಪೋಲು ತಡೆಗೆ ವಿಶ್ವಜಲ ದಿನ ಪ್ರಯುಕ್ತ ಜಲ ಮಂಡಳಿ ಉಚಿತವಾಗಿ 10 ಲಕ್ಷ ಏರಿಯೇಟರ್ ವಿತರಿಸಲಿದೆ.
ಸನತ್ ಕುಮಾರ್ ಬೆಂಗಳೂರು ಜಲಮಂಡಳಿಯ ಮುಖ್ಯ ಅಭಿಯಂತರ.