
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಜ.12): ನಾಡಿನ ಶಕ್ತಿ ಕೇಂದ್ರಗಳಾದ ವಿಧಾನಸೌಧ, ಸುವರ್ಣ ಸೌಧ, ಮುಖ್ಯಮಂತ್ರಿ ಮನೆ ಹಾಗೂ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಗೂ ಪ್ರತಿಭಟನೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದರೆ ಇನ್ನು ಮುಂದೆ ಮಹಿಳೆಯರಿಂದಲೇ 'ಲಾಠಿಯೇಟು' ಗ್ಯಾರಂಟಿ..!
ಬಂದೋಬಸ್ತ್ ಕಾರ್ಯಗಳಿಗೆ ನಾರಿ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್ಆರ್ ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಉಮೇಶ್ ಕುಮಾರ್ ಮುಂದಾಗಿದ್ದು, ಈಗ ಪ್ರತಿ ಕೆಎಸ್ಆರ್ಪಿ ಬೆಟಾಲಿಯನ್ನಲ್ಲಿ 100 ಮಹಿಳಾ ಸಿಬ್ಬಂದಿ ಒಳಗೊಂಡ ತುಕಡಿ ಸ್ಥಾಪಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಶಾಂತಿಯುತ ಪರಿಸ್ಥಿತಿ ನಿಯಂತ್ರಣಕ್ಕೆ ಮಹಿಳಾ ತುಕಡಿಗಳನ್ನು ಬಳಸಲು ಅವರು ಮುಂದಾಗಿದ್ದಾರೆ.
2400 ಕೆಎಸ್ಆರ್ಪಿ ಪೊಲೀಸರ ನೇಮಕಕ್ಕೆ ಆದೇಶ
900 ಮಹಿಳಾ ಸಿಬ್ಬಂದಿ:
ಬಂದೋಬಸ್ತ್ ಕಾರ್ಯಗಳಲ್ಲಿ ಕೆಎಸ್ಆರ್ಪಿ ಪಡೆ ಮಹತ್ವದ ಪಾತ್ರವಹಿಸುತ್ತದೆ. ರಾಜ್ಯದಲ್ಲಿ 14 ಕೆಎಸ್ಆರ್ ಪಿ ಬೆಟಾಲಿಯನ್ ಗಳಿದ್ದು, ಪ್ರತಿ ಬೆಟಾಲಿಯನ್ನಲ್ಲಿ ತಲಾ 100 ಜನರ 9 ತುಕಡಿ ಗಳಿರುತ್ತವೆ. ಮೊದಲು ಬೆಳಗಾವಿ ಬೆಟಾಲಿಯನ್ನಲ್ಲಿ ಮಹಿಳಾತುಕಡಿ ಸ್ಥಾಪಿಸಲಾಯಿತು. ನಂತರ ಬೆಂಗಳೂರಿನಲ್ಲಿ ಎರಡು ತುಕಡಿಗಳು ಸ್ಥಾಪನೆಯಾದವು. ಈ ಮಹಿಳಾ ಪಡೆಗಳಿಗೆ ಭದ್ರತಾ ಕಾವ್ಯಗಳಲ್ಲಿ ಪ್ರಾಮು ಖ್ಯತೆ ನೀಡಲಾಗಿತ್ತು. ಶಾಂತಿ ಭಂಗ, ಗಲಾಟೆನಿಯಂತ್ರಿಸುವ ಕೆಲಸಗಳಲ್ಲಿ ಈ ತುಕಡಿಗಳ ಕಾರ್ಯನಿರ್ವಹಣೆ ಉತ್ತಮವಾಗಿರುವ ಕಾರಣ ಪ್ರತಿ ಬೆಟಾಲಿಯನ್ ನಲ್ಲೂ ಮಹಿಳಾ ತುಕಡಿ ರಚಿಸಲು ಎಡಿಜಿಪಿ ಉಮೇಶ್ ಕುಮಾರ್ಮುಂದಾಗಿದ್ದಾರೆ. ಹಾಗೆಯೇ ಮಹಿಳಾ ತುಕಡಿ ರಚಿಸುವ ಪ್ರಸ್ತಾವನೆಗೆ ಸರ್ಕಾರ ಸಹ ಸಮ್ಮತಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಆರ್ಥಿಕ ಹೊರೆ ಇಲ್ಲದೆ ತುಕಡಿ ರಚನೆ:
ಹೊಸದಾಗಿ ಮಹಿಳಾ ತುಕಡಿಗಳ ರಚನೆಯಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಬೀಳುವುದಿಲ್ಲ. ಈಗಾಗಲೇ ಬೆಟಾಲಿಯನ್ ಗಳಲ್ಲಿ ಮಂಜೂರಾತಿ ಇರುವ 9 ತುಕಡಿಗಳ ಪೈಕಿ 1 ತುಕಡಿಯನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ. ಹೊಸ ತುಕಡಿ ರಚನೆಯಾಗಿದ್ದರೆ ಹುದ್ದೆ ಮಂಜೂರಾತಿಗೆ ಆರ್ಥಿಕ ಇಲಾಖೆ ಅನುಮತಿ ಪಡೆಯಬೇಕಿತ್ತು. ಸದ್ಯ ಮಂಜೂರಾದ ಹುದ್ದೆ ನೇಮಕಕ್ಕೆ ಇಲಾಖೆ ತಕರಾರಿರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.
KSRP Police: ರಾಜ್ಯದ ದಢೂತಿ ಪೊಲೀಸರು ಈಗ ಫುಲ್ ಸ್ಲಿಮ್..!
ರಾಜಧಾನಿಗೆ ಕೆಎಸ್ಆರ್ಪಿ ಭದ್ರತಾ ಕೋಟೆ
ಬೆಂಗಳೂರಿನ ರಕ್ಷಣೆ ಸಲುವಾಗಿ ನೆರೆಹೊರೆ ಜಿಲ್ಲೆಗಳಲ್ಲಿ ಕೆಎಸ್ಆರ್ಪಿ ಬೆಟಾಲಿಯನ್ಗಳನ್ನು ಸ್ಥಾಪಿಸ ಲಾಗುತ್ತಿದೆ. ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅವನತಿ ಗ್ರಾಮದಲ್ಲಿ ಹೊಸದಾಗಿ ಕೆಎಸ್ಆರ್ಪಿ ಬೆಟಾಲಿಯನ್ ಆರಂಭವಾಗಿದ್ದು, ಮತ್ತೊಂದು ರಾಮನಗರ ಜಿಲ್ಲೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ತುಮಕೂರು ಹಾಗೂ ಕೋಲಾರದಲ್ಲಿ ಸಹ ಕೆಎಸ್ಆರ್.ಪಿ ಬೆಟಾಲಿಯನ್ ಗಳಿರುತ್ತವೆ. ಬೆಂಗಳೂರಿನಲ್ಲಿ ಏನಾದರೂ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾದರೆ ಕೂಡಲೇ ಭದ್ರತೆಗೆ ಕೆಎಸ್ಆರ್ಪಿ ಪಡೆಗಳು ಲಭ್ಯವಿರುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಎಡಿಜಿಪಿ ಉಮೇಶ್ ಕುಮಾರ್ ಹೇಳಿದ್ದಾರೆ.
ಪ್ರತಿ ಕೆಎಸ್ಆರ್ಪಿ ಬೆಟಾಲಿಯನ್ ನಲ್ಲಿ ಮಹಿಳಾ ತುಕಡಿ ರಚನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ತುಕಡಿಗಳಿಗೆ ಮಹಿಳೆಯರ ನೇಮಕಾತಿಗೆ ಅನುಮತಿ ಸಿಗಲಿದೆ ಎಂದು ಕೆಎಸ್ಆರ್ಪಿ ಎಡಿಜಿಪಿ ಉಮೇಶ್ ಕುಮಾರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ