ಬಹುತೇಕ ಎಲ್ಲವೂ ಸಾರ್ವಜನಿಕ ಸೇವೆಗೆ ಮುಕ್ತ: ಎಲ್ಲಿಯೇ ಹೋದ್ರು ಇದನ್ನ ಮಾತ್ರ ಮರೆಯಬೇಡಿ

By Suvarna NewsFirst Published Jun 7, 2020, 9:26 PM IST
Highlights

ಸೋಮವಾರ (ಜೂ.8) ದಿಂದ ಬಹುತೇಕ ಎಲ್ಲವೂ ಸಾರ್ವಜನಿಕ ಸೇವೆಗೆ ಮುಕ್ತವಾಗುತ್ತಿದೆ. ಹೋಟೆಲ್, ರೆಸ್ಟೋರೆಂಟ್, ದೇವಸ್ಥಾನ, ಪ್ರವಾಸಿ ತಾಣಗಳು ಹೀಗೆ ಎಲ್ಲ ಕಡೆಯೂ ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ಕೊಡಲಾಗಿದೆ. ಎಲ್ಲರು ಹೇಗಿರಬೇಕೆಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಅದು ಈ ಕೆಳಗಿನಂತಿದೆ.

ಬೆಂಗಳೂರು, (ಜೂನ್.07): ಕಳೆದ ಮೂರು ತಿಂಗಳಿನಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ಕೋವಿಡ್-19 ಎಂಬ ಸೋಂಕು ಎಂಬ ಕೊರೋನಾ ಮಹಾಮಾರಿ ಎಲ್ಲರೂ ತಲ್ಲಣಗೊಳಿಸಿದೆ. ಎಲ್ಲರಿಗೂ ಜೀವನದ ದೊಡ್ಡ ಸವಾಲನ್ನು ಹಾಕಿದ್ದಲ್ಲದೆ, ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಈಗ ದೇಶ ಸಂಪೂರ್ಣ ಲಾಕ್‌ಡೌನ್ ಮುಕ್ತವಾಗಿದೆ. ಆದರೆ, ನೆನಪಿಡಿ ಕೊರೋನಾದಿಂದ ನಾವಿನ್ನೂ ಮುಕ್ತವಾಗಿಲ್ಲ. ಸದ್ಯಕ್ಕೆ ಈ ಸೋಂಕು ತೊಲಗುವ ಲಕ್ಷಣಗಳೂ ಕಾಣುತ್ತಿಲ್ಲ. ಹೀಗಾಗಿ ಇದರೊಂದಿಗೆ ಬದುಕುವುದನ್ನು ನಾವು ಅಭ್ಯಾಸ ಮಾಡಿಕೊಳ್ಳಬೇಕು. 

ಈಗ ಸೋಮವಾರ (ಜೂ.8) ದಿಂದ ಬಹುತೇಕ ಎಲ್ಲವೂ ಸಾರ್ವಜನಿಕ ಸೇವೆಗೆ ಮುಕ್ತವಾಗುತ್ತಿದೆ. ಹೋಟೆಲ್, ರೆಸ್ಟೋರೆಂಟ್, ದೇವಸ್ಥಾನ, ಪ್ರವಾಸಿ ತಾಣಗಳು ಹೀಗೆ ಎಲ್ಲ ಕಡೆಯೂ ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ಕೊಡಲಾಗಿದೆ. ಇದೇ ಹಿನ್ನೆಲೆಯಲ್ಲಿ ಮೈಸೂರಿನಲ್ಲಿಯೂ ಚಾಮುಂಡಿ ಬೆಟ್ಟ, ನಂಜನಗೂಡು, ಮೃಗಾಲಯ ಹಾಗೂ ವಿಶ್ವವಿಖ್ಯಾತ ಮೈಸೂರು ಅರಮನೆ ಸಹ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗುತ್ತಿದೆ. ಇಂತಹ ಸಂದರ್ಭದಲ್ಲಿಯೇ ನಾವು-ನೀವೆಲ್ಲ ಜವಾಬ್ದಾರಿಯುತವಾಗಿ ಹೆಜ್ಜೆ ಇಡಬೇಕಿದೆ.

ಯವ ನಟ ಚಿರಂಜೀವಿ ಸರ್ಜಾ ನಿಧನ, ಕೋರ್ಟ್ ವಿಚಾರಣೆ ವೇಳೆ ವೃದ್ಧನ ಮರಣ; ಜೂ.7ರ ಟಾಪ್ 10 ಸುದ್ದಿ!

ಕೊರೋನಾ ಸಂಕಷ್ಟದ ಕಾಲದಿಂದಲೂ ಸರ್ಕಾರ ನಾಗರಿಕರ ಜೊತೆಗಿದ್ದು, ಕಾಳಜಿ ವಹಿಸಿದೆ. ಅಂತಾರಾಜ್ಯ ಪ್ರವೇಶ ನಿರ್ಬಂಧ, ವಿಮಾನ, ಸಾರಿಗೆ ಪ್ರಯಾಣ ನಿಷೇಧ ಸೇರಿ ಲಾಕ್ ಡೌನ್ ನಂತಹ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ. ಆದರೆ, ಈಗ ಸರ್ಕಾರ ಒಂದು ಹಂತದ ಜವಾಬ್ದಾರಿಯನ್ನು ನಿಮ್ಮ ಕೈಗೆ ವಹಿಸಿದ್ದು, ನಾಗರಿಕರ ಬದ್ಧತೆ ಮತ್ತು ಕಾಳಜಿ ಇನ್ನು ಮುಂದೆ ಬಹಳ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಿದೆ. 

ಇನ್ನು ಮನೆಯಿಂದ ಹೊರ ಹೋಗಬೇಕೆಂದಿದ್ದರೆ ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಿಯೇ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಆಗಾಗ ಕೈಯನ್ನು ಸ್ವಚ್ಛವಾಗಿ ಸಾಬೂನಿನಿಂದ ತೊಳೆದುಕೊಳ್ಳುತ್ತಿರಬೇಕು. ಎಲ್ಲ ಸಮಯದಲ್ಲೂ ಇದು ಸಾಧ್ಯವಾಗದಿದ್ದರೆ ಹ್ಯಾಂಡ್ ಸ್ಯಾಣಿಟೈಸರ್ ಅನ್ನಾದರೂ ಬಳಸುವುದು ಉತ್ತಮ. ಈ ಮೂಲಕ ನಾನು ನಾಡಿನ ಹಾಗೂ ಮೈಸೂರಿನ ಜನತೆಯಲ್ಲಿ ಕೇಳಿಕೊಳ್ಳುವುದೇನೆಂದರೆ, “ಎಲ್ಲಿಯೇ ಹೋಗಿ, ಸ್ವಚ್ಛವಾಗಿರಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ’’.
ಎಸ್.ಟಿ.ಸೋಮಶೇಖರ್
ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ

click me!