
ನವದೆಹಲಿ(ಮೇ.28): ಪೆನ್ಡ್ರೈವ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ ತಾಂತ್ರಿಕ ಪಾಸ್ ಪೋರ್ಟ್ ಸವಲತ್ತು ಬಳಸಿಕೊಂಡು ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ಮೇ 31ರೊಳಗೆ ದೇಶಕ್ಕೆ ವಾಪಸ್ ಬರಲೇ ಬೇಕು ಎನ್ನುತ್ತಿದೆ ರಾಜತಾಂತ್ರಿಕ ಪಾಸ್ ಪೋರ್ಟ್ ನಿಯಮ.
ಸಂಸದರಿಗೆ 5 ವರ್ಷಗಳ ಅವಧಿಗೆ (ಸರ್ಕಾರದ ಅವಧಿಗೆ) ಪಾಸ್ ಪೋರ್ಟ್ ನೀಡಲಾಗಿರುತ್ತದೆ. ಈ ಸಂಸತ್ನ ಅವಧಿ ಈಗ ಮುಗಿಯುತ್ತಿದ್ದು, ಅದರಂತೆ ಪ್ರಜ್ವಲ್ ಮೇ 31 ರೊಳಗೆ ಭಾರತಕ್ಕೆ ಬರಬೇಕು. ಒಂದೊಮ್ಮೆ ಮೇ31ರ ಮಧ್ಯಾಹ್ನ 12 ಗಂಟೆಯೊಳಗೆ ಭಾರತಕ್ಕೆ ತಲುಪಲು ಆಗದಿದ್ದರೆ ಆ ದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಅನುಮತಿ ಪಡೆಯಬೇಕಾಗುತ್ತದೆ. ಈ ಮಧ್ಯೆ, ಈಗಾಗಲೇ ಪ್ರಜ್ವಲ್ ವಿರುದ್ಧ ಬ್ಲೂಕಾರ್ನರ್ ನೋಟಿಸ್ ಇನ್ನೂ ಮಾಡಲಾಗಿದೆ. ಇಂಟರ್ ಪೋಲ್ಗೂ ಮನವಿ ಮಾಡಲಾಗಿದೆ. ಹೀಗಾಗಿ, ರಾಯಭಾರಿ ಕಚೇರಿಯಿಂದ ಅನುಮತಿ ಪಡೆಯುವ ಪ್ರಕ್ರಿಯೆ ಸಂಕಷ್ಟಕ್ಕೆ ಈಡುಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ವಾಪಸ್ ಸಮಾಧಾನ ತಂದಿದೆ: ಕುಮಾರಸ್ವಾಮಿ
ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ಅವಧಿ ನವೆಂಬರ್ 30 ರತನಕ ಇದೆಯಾದರೂ, ಕೊನೆಯ ಆರು ತಿಂಗಳ ಅವಧಿ ತುರ್ತು ಕಾರ್ಯಗಳ ಸಲುವಾಗಿ ಇಟ್ಟಿರುವಂತದ್ದು. ತುರ್ತು ಕಾರ್ಯಗಳು ಇದ್ದಾಗ ಸರ್ಕಾರದ ಪೂರ್ವಾನುಮತಿ ಪಡೆದುಕೊಂಡು ಹೋಗಬಹುದು. ರಾಜತಾಂತ್ರಿಕ ಪಾಸ್ ಪೋರ್ಟ್ ಪಡೆಯುವಾಗ ಸಾಮಾನ್ಯ ಪಾಸ್ ಪೋರ್ಟ್ನ್ನು ಸರ್ಕಾರಕ್ಕೆ ವಾಪಸ್ ನೀಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಜರ್ಮನಿ, ಬ್ರಿಟನ್ ಸೇರಿ 34 ರಾಷ್ಟ್ರಗಳ ಜೊತೆ ಭಾರತ ವೀಸಾ ಒಪ್ಪಂದ ಮಾಡಿಕೊಂಡಿದೆ. ವೀಸಾ ಪಡೆಯದೆ 90 ದಿನಗಳ ಅವಧಿಗೆ ಈ 34 ದೇಶಗಳಿಗೆ ಭಾರತೀಯರು ಹೋಗಿ ಬರಬಹುದು.
ಬಂಧನದ ಭೀತಿ: ಭವಾನಿ ಜಾಮೀನಿಗಾಗಿ ಕೋರ್ಟಿಗೆ
ತಾವಿರುವ ಸ್ಥಳದ ಬಗ್ಗೆ ಬಾಯಿ ಬಿಡದ ಸಂಸದ ಪ್ರಜ್ವಲ್
ಬೆಂಗಳೂರು: ವಿಡಿಯೋ ಹೇಳಿಕೆ ಬಿಡುಗಡೆ ಬೆನ್ನಲ್ಲೇ ತಾವಿರುವ ದೇಶದ ಬಗ್ಗೆ ಬಾಯಿಡದೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ರಹಸ್ಯ ಕಾಪಾಡಿಕೊಂಡಿದ್ದಾರೆ. ತಮ್ಮ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳ ಸಂಬಂಧ ವಿದೇಶದ ಆಜ್ಞಾತ ಸ್ಥಳ ದಿಂದಲೇ ಸೋಮವಾರ 2.57 ನಿಮಿಷಗಳ ವಿಡಿಯೋಹೇಳಿಕೆಯನು ಪ್ರಜ್ವಲ್ ಬಿಡುಗಡೆಗೊಳಿಸಿದ್ದಾರೆ. ಆದರೆ ತಾವು ಯಾವ ದೇಶದಲ್ಲಿ ದೇನೆ ಎಂಬ ಮಾಹಿತಿಯನ್ನು ಮಾತ್ರ ಅವರು ಹೊರಹಾಕಿಲ್ಲ.
ಕಳೆದ ಏ.26 ರಂದು ವಿದೇಶಕ್ಕೆ ತೆರಳಿದ ನಂತರ ಸಾರ್ವಜನಿಕ ಸಂಪರ್ಕಕ್ಕೆ ಸಿಗದೆ ಅವರು ಆಜ್ಞಾತವಾಗಿದ್ದಾರೆ. ಹೀಗಿದ್ದರೂ ಮೇ 31 ರಂದು ಎಸ್ಐಟಿ ಮುಂದೆ ಹಾಜರಾಗುವುದಾಗಿ ಪ್ರಜ್ವಲ್ ಹೇಳಿದ್ದಾರೆ. ಹೀಗಾಗಿ ಶುಕ್ರವಾರ ಪ್ರಜ್ವಲ್ ಬರುವಿಕೆ ಕಡೆ ಎಲ್ಲರ ಚಿತ್ತ ಹರಿದಿದೆ.
ಪ್ರಜ್ವಲ್ ರೇವಣ್ಣ ದೇಶ ತೊರೆದು ಈಗ 1 ತಿಂಗಳು ಸಂಪೂರ್ಣ
ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಭಾಗಿಯಾಗಿ ಅತ್ಯಾಚಾರ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ಊರು ಬಿಟ್ಟು ಒಂದು ತಿಂಗಳಾಗಿದೆ. ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಏ.26 ರಂದು ಮತ ಚಲಾಯಿಸಿದ ಬಳಿಕ ಪ್ರಜ್ವಲ್ ರಾತ್ರೋರಾತ್ರಿ ವಿದೇಶಕ್ಕೆ ಪರಾರಿಯಾಗಿದ್ದರು. ಇದಾದ ಒಂದು ತಿಂಗಳ ಬಳಿಕ ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ವಿದೇಶದ ಅಜ್ಞಾತದ ಸ್ಥಳದಿಂದ ಅವರು ವಿಡಿಯೋ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ. ಲೋಕಸಭಾ ಚುನಾವಣೆ ಮತದಾನಕ್ಕೂ ಮುನ್ನ ಪ್ರಜ್ವಲ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ತುಂಬಿದ್ದ ಪೆನ್ ಡ್ರೈವ್ ಬಹಿರಂಗವಾಗಿತ್ತು. ಇದಾದ ನಂತರ ಪ್ರಜ್ವಲ್ ಪರಾರಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ