ಕಾಂಗ್ರೆಸ್ ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ಕೆ.ಎಚ್. ಮುನಿಯಪ್ಪ ಅವರ ನಡುವೆ ಬಹಿರಂಗವಾಗಿ ಜಟಾಪಟಿ ನಡೆದಿದೆ.
ಬೆಂಗಳೂರು : ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಹೋರಾಟ ನಡೆಸುವ ಕುರಿತಂತೆ ಕಾಂಗ್ರೆಸ್ ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ಕೆ.ಎಚ್. ಮುನಿಯಪ್ಪ ಅವರ ನಡುವೆ ಬಹಿರಂಗವಾಗಿ ಜಟಾಪಟಿ ನಡೆದಿದೆ.
ಉಳಿಯುವವರಿದ್ದಾರೆ ಎಂದು ಮುನಿಯಪ್ಪ ಅವರ ಹೆಸರು ಹೇಳದೇ ಪರೋಕ್ಷವಾಗಿ ಟೀಕಿಸಿದ್ದಾರೆ. ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಆದಿ ಜಾಂಬವ ನಿಗಮ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೆಲವರು ಸದಾಶಿವ ಆಯೋಗ ಜಾರಿ ತರಬೇಕು ಎಂದು ಘೋಷಣೆ ಕೂಗಿದರು. ನಂತರ ಇದೇ ವಿಷಯ ಈ ಇಬ್ಬರು ನಾಯಕರ ನಡುವಿನ ಮಾತಿನ ಏಟು-ಪ್ರತಿಏಟಿಗೆ ಕಾರಣವಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಕೆ.ಎಚ್. ಮುನಿಯಪ್ಪ, ಕೇಂದ್ರ ಸರ್ಕಾರ ಮೇಲ್ವರ್ಗದ ಬಡವರಿಗೆ ಶೇ.೧೦ರಷ್ಟು ಮೀಸಲಾತಿ ನೀಡಿರುವುದು ಚುನಾವಣಾ ರಾಜ ಕೀಯ. ಕಳೆದ ನಾಲ್ಕು ವರ್ಷದಿಂದ ಅಧಿಕಾದಲ್ಲಿದ್ದರೂ ಈಗ ಮೀಸಲಾತಿ ಕೊಟ್ಟಿದೆ. ಇದು ಮೂಗಿಗೆ ತುಪ್ಪ ಸವರುವ ಕೆಲಸ. ಆದರೂ ಕೇಂದ್ರದ ನಿರ್ಧಾರ ಸ್ವಾಗತಾರ್ಹ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಆದಿ ಜಾಂಬವ ಸಮುದಾಯದ ಅನೇಕರು ಏಕಾಏಕಿ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸತೊಡಗಿದರು. ಇದರಿಂದ ಇರಿಸುಮುರುಸುಗೊಂಡ ಮುನಿಯಪ್ಪ ಅವರು, ಸದಾಶಿವ ಆಯೋಗದ ವರದಿ ಜಾರಿ ಮಾಡಲು ತಮ್ಮ ಆಗ್ರಹವೂ ಇದೆ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರ ಮುಂದಾಳತ್ವದಲ್ಲಿ ಹೋರಾಟ ಮಾಡುತ್ತೇವೆ. ಹೋರಾಟದ ಕೀರ್ತಿ ಖರ್ಗೆಯವರಿಗೆ ಸೇರಲಿ. ಇದರಿಂದ ಅನೇಕ ವರ್ಷಗಳಿಂದ ತುಳಿತಕ್ಕೊಳಗಾಗಿರುವ ಸಮುದಾ ಯಗಳು ಸಮಾಜದಲ್ಲಿ ಮುನ್ನೆಲೆಗೆ ಬರಲು ಸಾಧ್ಯ ವಾಗುತ್ತದೆ ಎಂದರು.
ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಲು ವೇದಿಕೆಗೆ ಬಂದಾಗಲೂ ಕೆಲವರು ಸದಾಶಿವ ಆಯೋಗದ ವರದಿಗೆ ಆಗ್ರಹಿಸಿ ಘೋಷಣೆ ಕೂಗತೊಡಗಿದರು. ಇದರಿಂದ ಅಸಮಾಧಾನಗೊಂಡ ಖರ್ಗೆ ಅವರು, ಐದು ನಿಮಿಷ ಸುಮ್ಮನಿದ್ದರು. ನಂತರ ನಾಲ್ಕು ನಿಮಿಷ ಭಾಷಣ ಮಾಡಿ ಹೊರಡುತ್ತೇನೆ ಎಂದು ತಮ್ಮ ಭಾಷಣ ಮುಂದುವರೆಸಿದರು.
ಎಲ್ಲವನ್ನೂ ಖರ್ಗೆ ಮಾಡ್ತಾರೆ, ಖರ್ಗೆ ಮಾಡ್ತಾರೆ ಎಂಬುವವರು ಇದ್ದಾರೆ. ನನ್ನನ್ನು ಮುಂದೆ ನೂಕಿ ಹಿಂದೆ ಉಳಿಯುವವರೂ ಇದ್ದಾರೆ. ಪ್ರತಿಯೊಂದಕ್ಕೂ ತಮ್ಮ ಹೆಸರು ಮಧ್ಯೆ ತರುತ್ತಾರೆ, ಇದು ಯಾಕೆ ಅಂತ ಗೊತ್ತಿಲ್ಲ. ನಾನೇನು ಪರಮಾತ್ಮನಲ್ಲ. ಎಲ್ಲರೂ ಒಟ್ಟಿಗೆ ಹೋಗಬೇಕು. ತಾವೊಬ್ಬರೇ ಮುಂದೆ ನಿಂತರೆ ಕೆಲಸ ಆಗಲ್ಲ. ತಾವು ಅಧಿಕಾರಕ್ಕಾಗಿ ಎಂದೂ ಪ್ರತ್ಯೇಕ ಸಭೆ ಮಾಡಿಲ್ಲ. ಜಾತಿ ಆಧಾರದಲ್ಲಿ ರಾಜಕೀಯ ಮಾಡಿದವನಲ್ಲ. ಪದೇ ಪದೇ ತಮ್ಮ ಹೆಸರನ್ನು ದಯಮಾಡಿ ತರಬೇಡಿ ಎಂದು ಹೆಸರು ಹೇಳದೆ ಕೆ.ಎಚ್.ಮುನಿಯಪ್ಪಗೆ ತಿರುಗೇಟು ನೀಡಿದರು.
ಸಮುದಾಯದ ಪ್ರತಿಯೊಬ್ಬರೂ ಸಂವಿಧಾನ ಬದ್ಧವಾಗಿ ಒಟ್ಟಿಗೆ ಹೋರಾಟ ಮಾಡೋಣ. ಯಾರೂ ಸಮುದಾಯ ಒಡೆಯುವ ಕೆಲಸ ಮಾಡಬಾರದು. ನಾವು ಎಲ್ಲಿವರೆಗೆ ಒಟ್ಟಿಗೆ ಹೋಗುವುದಿಲ್ಲವೋ ಅಲ್ಲಿವರೆಗೆ ನಮಗೆ ಅಧಿಕಾರ ಸಿಗುವುದಿಲ್ಲ. ಇದನ್ನು ಪ್ರತಿ ಯೊಬ್ಬರೂ ಅರ್ಥ ಮಾಡಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಖರ್ಗೆ ಮುನಿಸು: ಭಾಷಣ ಮುಗಿಸಿ ವೇದಿಕೆಗೆ ಹಿಂದಿರುಗಿ ಕುಳಿತ ಮೇಲೂ ಮಲ್ಲಿಕಾರ್ಜುನ ಖರ್ಗೆ ಅವರ ಮುನಿಸು ಕಡಿಮೆ ಆಗಲಿಲ್ಲ. ತಮ್ಮ ಪಕ್ಕದಲ್ಲೇ ಕುಳಿತಿದ್ದ ಕೆ.ಎಚ್. ಮುನಿಯಪ್ಪ ಮಾತನಾಡಿಸಲು ಮುಂದಾದರೂ ಮುಖ ಕೊಟ್ಟು ಖರ್ಗೆ ಅವರು ಮಾತನಾಡಲಿಲ್ಲ.