
ದಾವಣಗೆರೆ (ಆ.18): ವೀರಶೈವ ಲಿಂಗಾಯತ ಹಿಂದೂ ಧರ್ಮದ ಭಾಗ ಎಂದಿದ್ದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಮ್ಮ ಹೇಳಿಕೆಯನ್ನು ಪುನಃ ಸಮರ್ಥಿಸಿಕೊಂಡರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಹಿಂದೂ ಲಿಂಗಾಯತ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಾವು ಮೊದಲು ಹಿಂದು ನಂತರ ಲಿಂಗಾಯತ ವೀರಶೈವ. ಸಾವಿರ ವರ್ಷಗಳ ಇತಿಹಾಸ ಇರುವುದು, ಎಲ್ಲರನ್ನೂ ಒಳಗೊಂಡಿರುವುದೆ ಹಿಂದೂ ಧರ್ಮ. ಅಲ್ಲಿ ಜೈನ, ಬೌದ್ಧ, ಇಸ್ಲಾಂ, ಸಿಖ್, ಲಿಂಗಾಯತ್, ಪಾರ್ಸಿ, ವೈಷ್ಣವ ಇದೆ. ಸನಾತನ ಧರ್ಮ ಎಲ್ಲ ಪರಂಪರೆಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದರು.
ಹಿಂದೂ ಎಂದರೆ ಒಂದು ಶ್ರೇಷ್ಠವಾದ ಭೂಮಿ. ನಿಮಗೆ ಏನು ಬೇಕು ಅದನ್ನು ಬೆಳೆಯಿರಿ ಎಂದು ಎಲ್ಲರಿಗೂ ಅವಕಾಶ ಕೊಟ್ಟ ಧರ್ಮ. ಧರ್ಮ ಸಂಸ್ಥಾಪಕರಿಗೆ ತಮ್ಮ ವಿಚಾರಗಳನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟಿದ್ದು ಹಿಂದೂ ಧರ್ಮ. ಎಲ್ಲವೂ ಹಿಂದೂ ಧರ್ಮದಲ್ಲೇ ಹುಟ್ಟಿ ಇದೇ ಧರ್ಮದಲ್ಲಿ ಬೆಳೆದು ನಂತರ ಹಿಂದೂ ಧರ್ಮದಲ್ಲೇ ಲೀನವಾಗಬೇಕು. ನಮ್ಮದು ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ. ಇಲ್ಲಿನವರಿಗೆ ಅವರದೇ ಆದ ದೇವರು ಇದೆ. ಅದನ್ನು ಅವರು ನಂಬಿ ಪೂಜೆ ಮಾಡ್ತಾರೆ. ಅವರ ನಂಬಿಕೆ ಮತ್ತು ನಿಷ್ಠೆಗಳಿಗೆ ಘಾಸಿ ಆಗುವ ಕೆಲಸ ಮಾಡಬೇಡಿ, ಹಿಂದೂಗಳ ಭಾವನೆಗಳ ಜೊತೆ ಚೆಲ್ಲಾಟ ಆಡಬೇಡಿ ಎಂದರು.
ಭಾರತದಲ್ಲಿರುವ ಮುಸ್ಲಿಂರೂ ಹಿಂದೂಗಳೇ: ವಚನಾನಂದ ಶ್ರೀ
ಶರಣರಿಗೆ ಸಹ ಅವರ ದೇವರು ಇದ್ದರು. ಏಕದೇವೋಪಾಸನೆಯನ್ನು ಬಸವಣ್ಣ ಒತ್ತಿ ಹೇಳಿದ್ದಾರೆ. ಯಾವ ದೇವರನ್ನೇ ನಂಬಿ ಆದರೆ ಒಬ್ಬ ದೇವರನ್ನೇ ನಂಬಿ ಎಂದಿದ್ದಾರೆ. ಪೂಜೆ ಮಾಡುವವರಿಎ ತೊಂದರೆ ಆಗಿಲ್ಲ ಅಂದ್ರೆ ನಿಮಗೇಕೆ ತೊಂದರೆ ಎಂದು ಹಿಂದೂ ಧರ್ಮ ವಿರೋಧಿಸುವವರಿಗೆ ಖಾರವಾಗಿ ಪ್ರಶ್ನಿಸಿದರು. ನಿಮ್ಮ ಲಿಂಗಪೂಜೆ ನೀವು ಮಾಡಿ, ಅದರ ಕುರಿತು ಯಾವ ಅಬ್ಜೆಕ್ಸನ್ ಇಲ್ಲ. ನಿಮ್ಮ ವಿಚಾರ ನೀವು ಹೇಳಿ ಅದನ್ನ ಬಿಟ್ಟು ಮತ್ತೊಬ್ಬರ ವಿಚಾರಗಳಿಗೆ ಘಾಸಿ ಮಾಡಬೇಡಿ ಎಂದರು.
ಹಿಂದೂ ಅಂದ್ರೆ ಬ್ರಾಹ್ಮಣ ಮಾತ್ರ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಹಿಂದೂ ಅಂದ್ರೆ ಬ್ರಾಹ್ಮಣರಷ್ಟೇ ಅಲ್ಲ, ಬೌದ್ಧ, ಜೈನ, ವೀರಶೈವ, ಲಿಂಗಾಯತ ಎಲ್ಲರೂ ಹಿಂದೂಗಳೇ. ಕೆಲವರು ಮಾತೆತ್ತಿದರೆ ಬ್ರಾಹ್ಮಣರನ್ನ ಬೈಯುತ್ತಾರೆ. ಆದರೆ ನಮ್ಮನ್ನು ಉದ್ಧಾರ ಮಾಡಲು ಅದೇ ಸಮುದಾಯದ ಬಸವಣ್ಣ ಬರಬೇಕಾಯಿತು. ಅವರು ಬಾರದೆ ಇದ್ದರೆ ನಾವಿನ್ನೂ ಚಾತುರ್ವರ್ಣದಲ್ಲೇ ಇರುತ್ತಿದ್ದೆವು. ಬ್ರಾಹ್ಮಣರಂತೆ ನಿಮ್ಮ ನಡೆ ನುಡಿ ಆಗುವಂತೆ ಮಾಡಿದರು. ನಾವಿಂದು ಸ್ವಾತಂತ್ರ್ಯ ಭಾರತದಲ್ಲಿ ಬದುಕುತ್ತಿದ್ದೇವೆ. ಎಲ್ಲರನ್ನೂ ಜೊತೆಗೂಡಿಸಿ ಬಸವತತ್ವ ಹೇಳಬೇಕೆ ಹೊರತು ಧರ್ಮ ಒಡೆಯುವ ಕೆಲಸ ಮಾಡಬಾರದು ಎಂದರು.
ಇನ್ನು ವೀರಶೈವ ಮತ್ತು ಲಿಂಗಾಯತರಲ್ಲಿ ತಾತ್ವಿಕ ವ್ಯತ್ಯಾಸವಿದೆ. ಸಾಮಾಜಿಕವಾಗಿ ವೀರಶೈವ ಲಿಂಗಾಯತ ಎರಡೂ ಒಂದೇ . ವೀರಶೈವ ಲಿಂಗಾಯತ ಅಳಿಸಲು ನೂರಾರು ವರ್ಷಗಳಿಂದ ಸಾಕಷ್ಟು ಪ್ರಯತ್ನಗಳು ನಡೆದಿವೆ ಅದಿನ್ನೂ ಸಾಧ್ಯವಾಗಿಲ್ಲ. ನಾನೇನು ಲಿಂಗಾಯತ ಧರ್ಮ ವಿರೋಧ ಅಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಆಗುವುದರ ವಿರೋಧಿಯೂ ಅಲ್ಲ. ಆದರೆ ಹಿಂದೂಗಳನ್ನು ಜರಿಯಬಾರದು. ಅವರಿಗೆ ಅವರಾದೇ ಆದ ನಂಬಿಕೆಗಳಿವೆ. ಅವರ ನಂಬಿಕೆ, ದೇವರುಗಳಿಗೆ ಬೈಯುವ ಕೆಲಸ ಮಾಡಬಾರದು.
ಹಿಂದೂ ಧರ್ಮವೇ ಅಲ್ಲ, ಇದೊಂದು ಆನೈತಿಕ, ಅನಾಚಾರ: ಪಂಡಿತರಾಧ್ಯ ಶ್ರೀ
ಪ್ರತ್ಯೇಕ ಧರ್ಮವಾಗಿರುವ ಸಿಖ್, ಬೌದ್ಧ, ಜೈನರು ಯಾರೂ ನಾವು ಹಿಂದೂಗಳಲ್ಲ ಎಂದು ಹೇಳುವುದಿಲ್ಲ. ಸ್ವತಂತ್ರ ಧರ್ಮವಾದರೂ ಅವರು ಯಾವತ್ತೂ ಹಿಂದೂ ತತ್ವಗಳನ್ನು ವಿರೋಧ ಮಾಡಿಲ್ಲ, ಬೈದಿಲ್ಲ. ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿ ಮಾನ್ಯತೆ ಪಡೆದುಕೊಳ್ಳಬೇಕು. ಮಾನ್ಯತೆ ಕೊಡುವ ರಾಜನ ಸಂಸ್ಥಾನದಲ್ಲಿ ಇದ್ದು ಆತನ ಪ್ರೀತಿಯಿಂದ ನಾವು ಅವಕಾಶ ಪಡೆದುಕೊಳ್ಳಬೇಕು. ಆ ರಾಜನನ್ನು ಬೈದುಕೊಂಡು ಟೀಕೆ ಮಾಡಿಕೊಂಡು ಹೋದರೆ ಆತ ನಮಗೆ ಅವಕಾಶ ಕೊಡ್ತಾನಾ? ನೀವು ಕಲ್ಲು ದೇವರು ದೇವರಲ್ಲ ಅಂತೀರಿ. ಆಗಿದ್ರೆ ನೀವು ಕೊರಳಲ್ಲಿ ಕಟ್ಟಿಕೊಂಡ ಲಿಂಗ ಕಲ್ಲು ಅಲ್ಲವೇ? ಎಂದು ಪ್ರಶ್ನಿಸಿದರು. ದೇವರ ಮೂರ್ತಿ ಕೆತ್ತಿದವನು, ಲಿಂಗ ಮಾಡಿದವನು ಮನುಷ್ಯ. ಎರಡು ಕಲ್ಲು ಆದರೆ ಅದಕ್ಕೆ ಸಂಸ್ಕಾರ ಕೊಡಬೇಕು, ಈ ದೇಶ ನಿಂತಿದ್ದು ಭಾವನೆ, ನಂಬಿಕೆಗಳ ಮೇಲೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ