
ಬೆಂಗಳೂರು : ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಡಿಜಿಪಿ ಸಿ.ದಿನಕರನ್ (70) ಅವರು ಚಿಕಿತ್ಸೆ ಫಲಿಸದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ.
ಬಹು ಅಂಗಾಂಗ ವೈಫಲ್ಯ ಹಿನ್ನೆಲೆಯಲ್ಲಿ ದಿನಕರನ್ ಅವರನ್ನು ಹತ್ತು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರಾತ್ರಿ 12 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಮೃತರು ಇಬ್ಬರು ಮಕ್ಕಳು, ಕುಟುಂಬದವರು ಹಾಗೂ ಅಪಾರ ಸ್ನೇಹಿತರನ್ನು ಅಗಲಿದ್ದಾರೆ. ಗುರುವಾರ ಸಂಜೆ ಕಲ್ಲಪ್ಪಳ್ಳಿ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಡಿಜಿಪಿ ನೀಲಮಣಿ ಎನ್. ರಾಜು ಸೇರಿದಂತೆ ಹಿರಿಯ-ಕಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ದಿನಕರನ್ ಅವರು ಮೂಲತಃ ತಮಿಳುನಾಡಿನ ಚೆಂಗಡಿಯವರು. 1963ನೇ ಸಾಲಿನ ಐಪಿಎಸ್ ಅಧಿಕಾರಿಯಾದ ಅವರು, ನಾಲ್ಕು ದಶಕಗಳ ಕಾಲ ರಾಜ್ಯ ಪೊಲೀಸ್ ಇಲಾಖೆಯ ಅತ್ಯುನ್ನತ ಡಿಜಿ-ಐಜಿ ಪದವಿ ಸೇರಿದಂತೆ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬಳಿಕ ಇಂದಿರಾನಗರದಲ್ಲಿ ತಮ್ಮ ಕುಟುಂಬದ ಜತೆ ನೆಲೆಸಿದ್ದರು. 2003ರಲ್ಲಿ ಡಿಜಿ-ಐಜಿ ನೇಮಕಾತಿ ವಿಚಾರವಾಗಿ ದಿನಕರನ್ ಅವರು ನಡೆಸಿದ ಕಾನೂನು ಹೋರಾಟವು ದೇಶದ ಪೊಲೀಸ್ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿತ್ತು. ಸೇವಾ ಹಿರಿತನ ಬದಿಗೊತ್ತಿದ ಸರ್ಕಾರದ ನಿಲುವು ಪ್ರಶ್ನಿಸಿದ್ದ ದಿನಕರ್ ಅವರಿಗೆ ನ್ಯಾಯಾಲಯದಲ್ಲಿ ಗೆಲುವು ಸಿಕ್ಕಿತ್ತು. ಇಂದಿಗೂ ಡಿಜಿಪಿ ನೇಮಕಾತಿಯಲ್ಲಿ ದಿನಕರನ್ ಪ್ರಕರಣವನ್ನು ಸರ್ಕಾರವು ನೆನಪಿಸಿಕೊಳ್ಳುತ್ತದೆ. ಅವರು ಡಿಜಿಪಿ ಆಗಿದ್ದಾಗಲೇ ಛಾಪಾ ಕಾಗದ ಹಗರಣ ಹೊರಬಂದಿತ್ತು. ಡಾ
ರಾಜ್ಕುಮಾರ್ ಅಪಹರಣ ಪ್ರಕರಣ ನಡೆದಿತ್ತು.
ನಿವೃತ್ತಿ ನಂತರ ಕನ್ನಡದ ವರ ನಟ ಡಾ. ರಾಜ್ಕುಮಾರ್ ಅಪಹರಣ ಪ್ರಕರಣದ ಕುರಿತು ಇಂಗ್ಲಿಷ್ನಲ್ಲಿ ವೀರಪ್ಪನ್ಸ್ ಪ್ರೈಜ್ಕ್ಯಾಚ್ ಎಂಬ ಪುಸಕ್ತ ಬರೆದಿದ್ದರು. ಇದರಲ್ಲಿ ಕಾಡುಗಳ್ಳ ವೀರಪ್ಪನ್ ವಿರುದ್ಧ ಕಾರ್ಯಾಚರಣೆ ಕುರಿತು ರೋಚಕ ಸಂಗತಿ ಹೊರಚೆಲ್ಲಿದ್ದರು. ಈ ಪುಸ್ತಕವು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಭಾಷಾಂತರವಾಗಿ ತೀವ್ರ ಚರ್ಚೆ ಹುಟ್ಟುಹಾಕಿತ್ತು. ನೇರವಂತಿಕೆ, ದಿಟ್ಟತನಕ್ಕೆ ಹೆಸರಾಗಿದ್ದ ಅವರು, ಆಳುವ ಸರ್ಕಾರದ ತಾಳಕ್ಕೆ ಬಗ್ಗದೆ ನಿಷ್ಠುರವಾಗಿ ಆಡಳಿತ ನಡೆಸುವುದಕ್ಕೆ ಹೆಸರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ