
ಬೆಂಗಳೂರು (ಜೂ.04): ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೂ ಡಿ.ಕೆ. ಶಿವಕುಮಾರ್ ಅವರ ಪ್ರತಿಯೊಂದು ನಡೆ ಹಾಗೂ ನಿರ್ಧಾರಗಳು ಭಾರೀ ಕುತೂಹಲ ಮೂಡಿಸುತ್ತಿವೆ. ರಾಜಕೀಯ ತಂತ್ರಗಾರಿಕೆಯಲ್ಲಿ ಸೈ ಎನಿಸಿಕೊಂಡಿರುವ ಡಿಕೆಶಿ, ಇದೀಗ ತಮ್ಮ ಕಠಿಣ ವಾಸ್ತು ನಂಬಿಕೆಯಿಂದಾಗಿ ವಿಧಾನಸೌಧದ ಕಾರಿಡಾರ್ಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ. ಹೌದು, ಸಿಎಂ ಆದಾಗಿನಿಂದಲೂ ವಾಸ್ತು ಪ್ರಕಾರವೇ ಹೆಜ್ಜೆ ಇಡುತ್ತಿರುವ ಡಿ.ಕೆ. ಶಿವಕುಮಾರ್, ಇದೀಗ ಅಧಿಕೃತ ಸಭೆಗಳಲ್ಲೂ ತಮ್ಮ ಕುಳಿತುಕೊಳ್ಳುವ ದಿಕ್ಕನ್ನೇ ಬದಲಿಸಿದ್ದಾರೆ!
ಡಿ.ಕೆ. ಶಿವಕುಮಾರ್ ಅವರಿಗೆ ಮೊದಲಿನಿಂದಲೂ ಧಾರ್ಮಿಕ ನಂಬಿಕೆಗಳು ಹಾಗೂ ವಾಸ್ತುವಿನ ಮೇಲೆ ಅಪಾರ ಭಕ್ತಿ. ಸಿಎಂ ಆದ ತಕ್ಷಣವೇ ಅವರು ಮೊದಲು ಮಾಡಿದ್ದು ತಮ್ಮ ಆರಾಧ್ಯ ದೈವ 'ಅಜ್ಜಯ್ಯನ ಗದ್ದುಗೆ'ಯ ದರ್ಶನ. ಅಜ್ಜಯ್ಯನ ಆಶೀರ್ವಾದ ಪಡೆದೇ ಮುಂದಿನ ಹೆಜ್ಜೆ ಇಟ್ಟ ಅವರು, ವಿಧಾನಸೌಧಕ್ಕೆ ಪ್ರವೇಶಿಸುವಾಗಲೂ ವಾಸ್ತು ಪ್ರಕಾರ ಅತ್ಯಂತ ಶುಭ ಎನ್ನಲಾಗುವ 'ಉತ್ತರ ಬಾಗಿಲಿನ' ಮೂಲಕವೇ ಎಂಟ್ರಿ ಕೊಟ್ಟಿದ್ದರು. ಅಷ್ಟೇ ಅಲ್ಲದೇ, ತಮ್ಮ ಮುಖ್ಯಮಂತ್ರಿ ಕೊಠಡಿಗೂ ಅಜ್ಜಯ್ಯನ ವಿಶೇಷ ಆಶೀರ್ವಾದ ಮತ್ತು ವಾಸ್ತು ಪೂಜೆ ಮಾಡಿಸಿದ ಬಳಿಕವೇ ಅಧಿಕೃತ ಕಾರ್ಯಕಲಾಪಗಳನ್ನು ಆರಂಭಿಸಿದ್ದರು.
ಇತ್ತೀಚೆಗೆ ನಡೆದ ಕ್ಯಾಬಿನೆಟ್ (ಸಂಪುಟ) ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸುವಾಗಲೂ ಸಿಎಂ ಡಿ.ಕೆ. ಶಿವಕುಮಾರ್ ಅವರು ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಲು ಬಯಸಿದ್ದರು. ಈ ಸಂಬಂಧ ಅಲ್ಲಿನ ಅಧಿಕಾರಿಗಳಿಗೂ ತಕ್ಷಣವೇ ದಿಕ್ಕು ಬದಲಿಸಲು ಸೂಚನೆ ನೀಡಿದ್ದರು. ಆದರೆ, ಅಷ್ಟರಲ್ಲಾಗಲೇ ಮಾಧ್ಯಮದವರು ತಮ್ಮ ಲೈವ್ ಕ್ಯಾಮೆರಾಗಳನ್ನು ಹಳೇ ವ್ಯವಸ್ಥೆಯಂತೆಯೇ ಫಿಕ್ಸ್ ಮಾಡಿಕೊಂಡಿದ್ದರು. ತಕ್ಷಣಕ್ಕೆ ಎಲ್ಲವನ್ನೂ ಬದಲಾಯಿಸುವುದು ತಾಂತ್ರಿಕವಾಗಿ ಕಷ್ಟ ಎಂದು ಮಾಧ್ಯಮದವರು ಸಿಎಂ ಗಮನಕ್ಕೆ ತಂದಾಗ, 'ಹಾಗಾದರೆ ನಾಳೆಯಿಂದ ಕಡ್ಡಾಯವಾಗಿ ಬದಲಾವಣೆ ಮಾಡಿ' ಎಂದು ಡಿಕೆಶಿ ಸೂಚನೆ ನೀಡಿ ಅಲ್ಲಿಂದ ಹೊರಟಿದ್ದರು.
ಸಿಎಂ ನೀಡಿದ್ದ ಆ ಸೂಚನೆ ಇಂದು ಅಕ್ಷರಶಃ ಜಾರಿಯಾಗಿದೆ. ಇಂದು ವಿಧಾನಸೌಧದ ಅದೇ ಕಾನ್ಫರೆನ್ಸ್ ಹಾಲ್ನಲ್ಲಿ ಮಹತ್ವದ ಅಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಸಭೆಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪೂರ್ಣವಾಗಿ ದಿಕ್ಕು ಬದಲಿಸಿ ಕುಳಿತಿದ್ದಾರೆ. ಅಂದರೆ, ವಾಸ್ತು ಶಾಸ್ತ್ರದ ಪ್ರಕಾರ ಅತ್ಯಂತ ಶ್ರೇಷ್ಠ ಹಾಗೂ ಯಶಸ್ಸಿನ ಸಂಕೇತ ಎನ್ನಲಾಗುವ 'ಉತ್ತರ ದಿಕ್ಕಿಗೆ' ಮುಖ ಮಾಡಿ ಮುಖ್ಯಮಂತ್ರಿಗಳು ಕುಳಿತಿದ್ದು, ಅಧಿಕಾರಿಗಳು ಅವರ ಸಮ್ಮುಖದಲ್ಲಿ ಸಭೆ ನಡೆಸುತ್ತಿದ್ದಾರೆ.
ರಾಜ್ಯದ ಅತ್ಯುನ್ನತ ಹುದ್ದೆಯಲ್ಲಿದ್ದರೂ ವಾಸ್ತು ಮತ್ತು ಧಾರ್ಮಿಕ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರ ಈ ನಡೆ, ಸದ್ಯ ವಿಧಾನಸೌಧದಲ್ಲಿ ಮತ್ತು ರಾಜಕೀಯ ವಲಯದಲ್ಲಿ ಅಚ್ಚರಿ ಹಾಗೂ ತೀವ್ರ ಕುತೂಹಲ ಮೂಡಿಸಿರುವುದಂತೂ ಸುಳ್ಳಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ