
ಬೆಂಗಳೂರು (ಮಾ.3): ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ಟೀಕಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷವು ರಾಷ್ಟ್ರದ ಹಿತಾಸಕ್ತಿಗಿಂತ ತನ್ನ ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಭಾರತವು ಅಲಿಪ್ತ ನೀತಿಗೆ ತಿಲಾಂಜಲಿ ನೀಡಿದೆ ಎಂಬ ವಿಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, ಅಲಿಪ್ತ ನೀತಿ ಎಂಬುದು ಒಂದು ಕಾಲದಲ್ಲಿ ತೆಗೆದುಕೊಂಡ ನಿರ್ಣಯವೇ ಹೊರತು ಅದನ್ನು ಶಾಶ್ವತವಾಗಿ ಪಾಲಿಸಬೇಕು ಎಂದಿಲ್ಲ. ಗಾಂಧೀಜಿಯವರು ಅಹಿಂಸಾವಾದ ಎಂದಿದ್ದರು, ಹಾಗೆಂದು ನಾವು ಯುದ್ಧ ಮಾಡದಿದ್ದರೆ ಪಾಕಿಸ್ತಾನ ನಮ್ಮನ್ನು ಎಂದೋ ಹೊಡೆದುರುಳಿಸುತ್ತಿತ್ತು. ರಾಷ್ಟ್ರದ ಹಿತಾಸಕ್ತಿಗೆ ತಕ್ಕಂತೆ ಭಾರತ ಸರ್ಕಾರ ಕಾಲಕಾಲಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ವಿದೇಶಾಂಗ ನೀತಿಯ ವಿಚಾರದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಟೀಕೆಗಳನ್ನು ಅಲ್ಲಗಳೆದ ಸಿಟಿ ರವಿ, 'ಕಾಂಗ್ರೆಸ್ಗೆ ಭಾರತದ ಹಿತಾಸಕ್ತಿಗಿಂತ ತನ್ನ ಸ್ವಂತ ಹಿತಾಸಕ್ತಿ ಮತ್ತು ವೋಟ್ ಬ್ಯಾಂಕ್ ಮುಖ್ಯವಾಗಿದೆ. ಅವರು ಕೇವಲ ರಾಜಕೀಯ ದೃಷ್ಟಿ, ಪಕ್ಷದ ಲಾಭವನ್ನು ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ಆದರೆ ಬಿಜೆಪಿ ಯಾವತ್ತೂ ಭಾರತದ ಪರ ನಿಲುವು ತೆಗೆದುಕೊಳ್ಳುವ ಪಕ್ಷ. ರಾಷ್ಟ್ರದ ವಿಷಯ ಬಂದಾಗ ನಮ್ಮ ನಿರ್ಣಯಗಳು ಕಠಿಣವಾಗಿರುತ್ತವೆ ಎಂದು ತಿರುಗೇಟು ನೀಡಿದರು.
ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಮಾಹಿತಿ ನೀಡಿದ ಅವರು, ನಾಳೆಯ ನಂತರ ವಾತಾವರಣ ಸ್ವಲ್ಪ ತಿಳಿಯಾಗುವ ಸಾಧ್ಯತೆಯಿದೆ. ಈಗಾಗಲೇ ನಿನ್ನೆ ರಾತ್ರಿ ಕೆಲವು ವಿಮಾನಗಳು ಬಂದಿವೆ. ವಿದೇಶಾಂಗ ಇಲಾಖೆಯು ಎಸ್ಒಪಿ (SOP) ಬಿಡುಗಡೆ ಮಾಡಿದ್ದು, ಅಲ್ಲಿರುವವರು ಕಾನ್ಸುಲೇಟ್ ಸಂಪರ್ಕಿಸುವಂತೆ ಸೂಚಿಸಲಾಗಿದೆ. ಈ ಹಿಂದೆಯೂ ಸಿರಿಯಾ, ಇರಾಕ್ ಮತ್ತು ಆಫ್ರಿಕಾದಂತಹ ರಾಷ್ಟ್ರಗಳಿಂದ ನಮ್ಮವರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ ಎಂದರು.
ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಧೈರ್ಯ ತುಂಬಿದ ಸಿಟಿ ರವಿ, ಅಲ್ಲಿರುವವರು ಯಾವುದೇ ಆತಂಕಕ್ಕೆ ಒಳಗಾಗಬೇಡಿ. ಭಾರತ ಸರ್ಕಾರವು ಯುದ್ಧದ ಮಧ್ಯದಲ್ಲೂ ತನ್ನ ಜನರನ್ನ ಸುರಕ್ಷಿತವಾಗಿ ಕರೆತರುವ ಸಾಮರ್ಥ್ಯ ಹೊಂದಿದೆ. ತನ್ನೆಲ್ಲಾ ಶಕ್ತಿಯನ್ನು ಬಳಸಿ ಪ್ರತಿಯೊಬ್ಬ ಭಾರತೀಯನನ್ನು ತಾಯ್ನಾಡಿಗೆ ಕರೆತರಲಾಗುತ್ತಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ