
ಬೆಂಗಳೂರು (ಜು.05): ಕೊರೋನಾ 2 ನೇ ಅಲೆಯ ಲಾಕ್ಡೌನ್ ವೇಳೆ ಮುಚ್ಚಲ್ಪಟ್ಟಿದ್ದ ರಾಜ್ಯದ ಪ್ರಮುಖ ತೀರ್ಥಕ್ಷೇತ್ರಗಳು ಮತ್ತು ಪ್ರವಾಸಿತಾಣಗಳು ಇದೀಗ ಅನ್ಲಾಕ್ ಹಿನ್ನೆಲೆಯಲ್ಲಿ ಸೋಮವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ತೆರೆದುಕೊಳ್ಳಲಿದ್ದು ಅದಕ್ಕಾಗಿ ಭರದಿಂದ ಸಿದ್ಧತೆಗಳು ನಡೆದಿವೆ.
ಈ ಹಿನ್ನೆಲೆಯಲ್ಲಿ ನಾಡಿನ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕದ್ರಿ, ಕುದ್ರೋಳಿ, ಕಟೀಲು, ಉಡುಪಿ ಜಿಲ್ಲೆಯ ಕೊಲ್ಲೂರು, ಮೈಸೂರಿನ ಚಾಮುಂಡಿ ಬೆಟ್ಟ, ನಂಜನಗೂಡು, ಮಂಡ್ಯದ ಮೇಲುಕೋಟೆ, ಶ್ರೀರಂಗಪಟ್ಟಣ, ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಹೊರನಾಡು, ಕಳಸ, ಉತ್ತರ ಕನ್ನಡದ ಗೋಕರ್ಣ, ಇಡಗುಂಜಿ, ಮುರ್ಡೇಶ್ವರ, ಶಿರಸಿ, ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ, ಬಾದಾಮಿ, ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿ ಬೆಟ್ಟ, ಹುಲಿಗೆ, ಬಳ್ಳಾರಿ ಜಿಲ್ಲೆಯ ಹಂಪಿ ಮೈಲಾರ, ಕೊಟ್ಟೂರು ಸೇರಿದಂತೆ ಎಲ್ಲ ಎ ದರ್ಜೆ, ಬಿ ದರ್ಜೆಯ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ನಡೆದಿದ್ದು ಸಂಪೂರ್ಣ ಸ್ಯಾನಿಟೈಸೇಶನ್ ಮಾಡಲಾಗಿದೆ. ಭಕ್ತರ ಪ್ರವೇಶಕ್ಕಾಗಿ ಸರದಿ ಸಾಲಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
"
ಧರ್ಮಸ್ಥಳ-ಕುಕ್ಕೆ ದೇಗುಲಗಳು ಓಪನ್ : ಯಾವಾಗಿನಿಂದ ಭಕ್ತರಿಗೆ ಪ್ರವೇಶ
ಸೋಮವಾರದಿಂದ ಸರ್ಕಾರಿ ಆದೇಶದಂತೆ ದರುಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಯಾವುದೇ ಸೇವೆಗಳು ನಡೆಯುವುದಿಲ್ಲ. ಅನ್ನ ಪ್ರಸಾದವೂ ಇರುವುದಿಲ್ಲ. ಪ್ರಾರ್ಥನೆ ಮತ್ತು ಆರತಿ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ನಿಯಮಗಳನ್ನು ಅನುಸರಿಸಿ ಭಕ್ತರಿಗೆ ದೇಗುಲ ಪ್ರವೇಶಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ.
"
ಮೈಸೂರು ಅರಮನೆಗೆ ಪ್ರವೇಶಾವಕಾಶ: ಏ.24 ರಿಂದ ವಿಶ್ವ ವಿಖ್ಯಾತ ಮೈಸೂರು ಅರಮನೆಯ ಪ್ರವೇಶವನ್ನು ಪ್ರವಾಸಿಗರಿಗೆ ನಿರ್ಬಂಧಿಸಲಾಗಿತ್ತು. ಜು.5 ರಿಂದ ಪ್ರವಾಸಿಗರಿಗೆ ಮೈಸೂರು ಅರಮನೆಯ ವೀಕ್ಷಣೆಗೆ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಅವಕಾಶ ಕಲ್ಪಿಸಲಾಗಿದ್ದು ಪ್ರವಾಸಿಗರು ಡಿಡಿಡಿ.ಞysಟ್ಟಛಿpa್ಝa್ಚಛಿ.ಜಟv.ಜ್ಞಿ ವೆಬ್ಸೈಟ್ನಲ್ಲಿ ಟಿಕೆಟ್ ಖರೀದಿಸಬಹುದು.
ಉಡುಪಿ, ಸವದತ್ತಿಗೆ ಸದ್ಯಕ್ಕಿಲ್ಲ ಪ್ರವೇಶ
ಸರ್ಕಾರ ಎಲ್ಲ ದೇವಾಲಯಗಳನ್ನು ತೆರೆಯಲು ಆದೇಶ ನೀಡಿದ್ದರೂ, ಉಡುಪಿಯ ಶ್ರೀಕೃಷ್ಣಮಠ ಮತ್ತು ಸವದತ್ತಿ ಯಲ್ಲಮ್ಮ ದೇವಸ್ಥಾನ, ಇಂಚಲ ಮಾಯಕ್ಕ ದೇವಸ್ಥಾನಗಳು ಸೋಮವಾರದಂದು ತೆರೆಯುವುದಿಲ್ಲ. ಹೊರ ರಾಜ್ಯ, ಇತರೆಡೆಗಳಿಂದ ಭಕ್ತಾದಿಗಳನ್ನು ಗಮನದಲ್ಲಿಟ್ಟುಕೊಂಡು ಇನ್ನೂ ಒಂದು ವಾರ ಕಾಲ ಕೃಷ್ಣ ಮಠಕ್ಕೆ ಭಕ್ತರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದ್ದರೆ, ಇನ್ನು ಯಲ್ಲಮ್ಮನ ದೇವಸ್ಥಾನಕ್ಕೆ ಮಹಾರಾಷ್ಟ್ರದಿಂದಲೂ ಭಕ್ತರು ಬರುವ ಸಾಧ್ಯತೆ ಇರುವದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ