
ನವದೆಹಲಿ (ಸೆ.10): ಪ್ರಧಾನಿ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಕರ್ನಾಟಕ ಸೇರಿ ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ 10,021 ಕೋಟಿ ರು. ಅಂದಾಜು ವೆಚ್ಚದ ಐದು ರೈಲ್ವೆ ಮಲ್ಟಿ ಟ್ರ್ಯಾಕಿಂಗ್ ಯೋಜನೆಗಳಿಗೆ ಬುಧವಾರ ಅನುಮೋದನೆ ನೀಡಿದೆ.
ಈ ಐದು ಯೋಜನೆಗಳು ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರ, ತೆಲಂಗಾಣ ರಾಜ್ಯಗಳ 17 ಜಿಲ್ಲೆಗಳ ಹಾಲಿ ಇರುವ ರೈಲ್ವೆ ಸಂಪರ್ಕ ಜಾಲವನ್ನು 540 ಕಿ.ಮೀ.ನಷ್ಟು ವಿಸ್ತರಿಸಲಿದೆ. ಈ ಬಹು ಟ್ರ್ಯಾಕಿಂಗ್ ಯೋಜನೆಗಳು 2,121 ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಿದ್ದು, 52 ಲಕ್ಷ ಜನರಿಗೆ ಅನುಕೂಲ ಮಾಡಿಕೊಡಲಿದೆ.
ಏನೇನು ಯೋಜನೆ?:
77 ಕಿ.ಮೀ. ಉದ್ದದ ಅರಕ್ಕೋಣಂ-ರೇಣಿಗುಂಟಾ ಮೂರನೇ ಮತ್ತು ನಾಲ್ಕನೇ ಪಥ, ವೈಟ್ಫೀಲ್ಡ್-ಬಂಗಾರಪೇಟೆ ನಡುವಿನ 47 ಕಿ.ಮೀ. ಉದ್ದದ 3ನೇ ಮತ್ತು ನಾಲ್ಕನೇ ಪಥ, 147ಕಿ.ಮೀ. ಉದ್ದದ ಹೊಸೂರು- ಒಮಾಲೂರು ಡಬ್ಲಿಂಗ್, 159 ಕಿ.ಮೀ. ಉದ್ದದ ಸೇಲಂ-ಕರೂರು-ದಿಂಡಿಗುಲ್ ನಡುವಿನ ಡಬ್ಲಿಂಗ್, 110 ಕಿ.ಮೀ. ಉದ್ದದ ಸಿಕಂದರಾಬಾದ್-ಕಾಝಿಪೇಟೆ ನಡುವಿನ ಮಾರ್ಗ ವಿಸ್ತರಣೆ ಇದರಲ್ಲಿ ಸೇರಿದೆ.
ಈ ರೈಲ್ವೆ ಮಾರ್ಗ ವಿಸ್ತರಣೆ ಹಾಗೂ ಪಥ ಮೇಲ್ದರ್ಜೆಗೇರಿಸುವ ಕಾರ್ಯದಿಂದ ಸಾರ್ವಜನಿಕ, ಸರಕು ಸಾಗಣೆಗೆ ನೆರವಾಗಲಿದೆ. 20209-30ರ ವೇಳೆಗೆ ಈ ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ.
ಈ ರೈಲು ಮಾರ್ಗಗಳಿಂದಾಗಿ ಪ್ರಮುಖ ಪ್ರವಾಸಿ ತಾಣಗಳಾದ ತಿರುಪತಿ, ಸುಬ್ರಹ್ಮಣ್ಯ ಸ್ವಾಮಿ ದೇಗುಲ(ತಿರುತ್ತನಿ), ಶ್ರೀ ಪದ್ಮಾವತಿ ಅಮ್ಮವಾರಿ ದೇವಸ್ಥಾನ (ತಿರುಚನೂರ್), ಕೋಟಿಲಿಂಗೇಶ್ವದ ದೇವಾಲಯ, ಶ್ರೀ ಸೀತಿ ಬೈರವೇಶ್ವರ ಸ್ವಾಮಿ ದೇವಸ್ಥಾನ, ಬಂಗಾರು ತಿರುಪತಿ, ಕೋಲಾರ ಚಿನ್ನದ ಗಣಿಗಳು, ಹೋಗೇನಕಲ್ ಫಾಲ್ಸ್, ಹೊಸೂರು ಕೋಟೆ, ಮೆಟ್ಟೂರು ಡ್ಯಾಂ, ಕೊಡೈಕೆನಾಲ್, ಸತ್ಯಮಂಗಲಂ ವನ್ಯಜೀವಿ ತಾಣ, ನಮಕ್ಕಲ್ ಆಂಜನೇಯ ದೇವಸ್ಥಾನ, ನಮಕ್ಕಲ್ ಕೋಟೆ, ಕಲ್ಯಾಣ ಪಶುಪತೇಶ್ವರ ದೇವಸ್ಥಾನ, ಯದಗಿರಿಗುಟ್ಟ ದೇವಸ್ಥಾನ, ಭೋಂಗಿರ್ ಕೋಟೆ, ಸುರೇಂದ್ರಪುರ ಮತ್ತು ಸ್ವರ್ಮಗಿರಿ ದೇವಸ್ಥಾನಗಳಿಗೆ ಸಂಪರ್ಕ ಸುಲಭವಾಗಲಿದೆ.
ಇದರ ಜತೆಗೆ ಕಲ್ಲಿದ್ದಲು, ಸಿಮೆಂಟ್, ಕಬ್ಬಿಣ, ಸ್ಟೀಲ್, ಕಂಟೈನರ್ಗಳು, ಅಟೋಮೊಬೈಲ್, ಆಹಾರ ಧಾನ್ಯಗಳು, ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ ಇತರೆ ವಸ್ತುಗಳ ಸಾಗಾಟವನ್ನೂ ಸುಲಭಗೊಳಿಸಲಿದೆ.
ಹೆಚ್ಚುವರಿ 47 ಎಂಟಿಪಿಎನಷ್ಟು ಸರಕುಗಳನ್ನು ಸಾಗಿಸಲು ರೈಲ್ವೆಗೆ ಈ ಯೋಜನೆಗಳಿಂದ ಸಾಧ್ಯವಾಗಲಿದ್ದು, 8 ಕೋಟಿ ಲೀಟರ್ನಷ್ಟು ಕಚ್ಚಾ ತೈಲದ ಆಮದು ಉಳಿತಾಯವಾಗಲಿದೆ ಮತ್ತು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣ 42 ಕೆ.ಜಿ.ಯಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ