
ಬೆಂಗಳೂರು (ಡಿ. 05): ಬೆಂಗಳೂರಿನ ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿ ಇತ್ತೀಚೆಗೆ ಅಕ್ರಮ ಚಟುವಟಿಕೆಗಳು ಹಾಗೂ ಕೈದಿಗಳು ಮೊಬೈಲ್ ಬಳಸುತ್ತಿರುವ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ, ಸಜಾಬಂಧಿ ಕೈದಿ, ಕುಖ್ಯಾತ ರೇಪಿಸ್ಟ್ ಉಮೇಶ್ ರೆಡ್ಡಿ ಅವರನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡುವಂತೆ ಆತನೇ ಜೈಲು ಅಧೀಕ್ಷಕರಿಗೆ ಪತ್ರ ಬರೆದಿರುವುದು ಹೊಸ ತಿರುವು ನೀಡಿದೆ.
ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಯಲಿಗೆ ತಂದ ವಿಡಿಯೋಗಳ ವೈರಲ್ ಘಟನೆಯ ನಂತರ, ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಹಾಗೂ ಜೈಲಿನ ಹೈಪವರ್ ಕಮಿಟಿಯಿಂದ ತನಿಖೆ ತೀವ್ರಗೊಂಡಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಉಮೇಶ್ ರೆಡ್ಡಿ, ಶಂಕಿತ ಉಗ್ರ ಮತ್ತು ಮತ್ತೊಬ್ಬ ಆರೋಪಿ ತರುಣ್ ರಾಜ್ ಸೇರಿದಂತೆ ಹಲವರನ್ನು ಪೊಲೀಸರು ಮತ್ತು ಜೈಲು ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಈ ವಿಚಾರಣೆ ಮತ್ತು ಆಂತರಿಕ ತನಿಖೆಗಳ ಒತ್ತಡದ ನಡುವೆಯೇ, ಉಮೇಶ್ ರೆಡ್ಡಿ ಜೈಲು ಅಧೀಕ್ಷಕರಿಗೆ ಪತ್ರ ಬರೆದಿದ್ದು, ತನ್ನನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬೇರೆ ಜೈಲಿಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾನೆ. ಅದರಲ್ಲಿ, ತನ್ನ ತಾಯಿ ಚಿತ್ರದುರ್ಗದಲ್ಲಿ ನೆಲೆಸಿದ್ದು, ಅವರಿಗೆ ಅನಾರೋಗ್ಯದ ಸಮಸ್ಯೆ ಇರುವುದರಿಂದ ಚಿತ್ರದುರ್ಗಕ್ಕೆ ಹತ್ತಿರದಲ್ಲಿರುವ ಬಳ್ಳಾರಿ ಅಥವಾ ಶಿವಮೊಗ್ಗ ಜೈಲಿಗೆ ತನ್ನನ್ನು ಶಿಫ್ಟ್ ಮಾಡುವಂತೆ ಮನವಿ ಮಾಡಿದ್ದಾನೆ. ಈ ಕೋರಿಕೆಯು ವಿಡಿಯೋಗಳ ವೈರಲ್ ಆದ ಬಳಿಕ ಕೇಳಿಬಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಈ ಅಕ್ರಮ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ, ರಾಜ್ಯ ಕಾರಾಗೃಹಗಳ ಡಿಐಜಿ ದಿವ್ಯಾಶ್ರೀ ಅವರು ಈಗಾಗಲೇ ರಾಜ್ಯದ ಎಲ್ಲಾ ಕಾರಾಗೃಹಗಳಿಗೆ ಪತ್ರ ಬರೆದು, ಕೈದಿಗಳ ವಿಚಾರಣೆ ಮತ್ತು ಭದ್ರತೆ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಸದ್ಯ, ಉಮೇಶ್ ರೆಡ್ಡಿ ಮತ್ತು ಇತರ ಆರೋಪಿಗಳ ಮೇಲಿನ ಆಂತರಿಕ ಮತ್ತು ಪೊಲೀಸ್ ತನಿಖೆಗಳು ಪ್ರಗತಿಯಲ್ಲಿವೆ. ಜೈಲು ಅಧಿಕಾರಿಗಳು ಉಮೇಶ್ ರೆಡ್ಡಿ ಮನವಿಯನ್ನು ಪರಿಗಣಿಸುವ ಮುನ್ನ, ಸಂಪೂರ್ಣ ತನಿಖೆ ಮುಕ್ತಾಯವಾಗುವವರೆಗೆ ಕಾಯುವ ಸಾಧ್ಯತೆ ಇದೆ. ತನಿಖೆ ಮುಗಿದ ಬಳಿಕ ಭದ್ರತಾ ಕಾರಣಗಳಿಗಾಗಿ ಅಥವಾ ಆಡಳಿತಾತ್ಮಕ ಕಾರಣಗಳಿಗಾಗಿ ಆತನನ್ನು ಬೇರೆ ಜೈಲಿಗೆ ವರ್ಗಾಯಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
ಪರಪ್ಪನ ಅಗ್ರಹಾರ ಜೈಲು ರಾಜ್ಯದಲ್ಲಿಯೇ ದೊಡ್ಡದಾಗಿದ್ದು, ಅತ್ಯಂತ ಸೂಕ್ಷ್ಮ ಕೈದಿಗಳನ್ನು ಹೊಂದಿದೆ. ಇಂತಹ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ನಡೆದಿರುವುದು, ಅದರಲ್ಲೂ ಕುಖ್ಯಾತ ಅಪರಾಧಿಗಳು ಮೊಬೈಲ್ ಬಳಸಿರುವುದು ಮತ್ತು ಈಗ ತನಿಖೆಯ ಒತ್ತಡದಲ್ಲಿ ಅದೇ ಕೈದಿ ಬೇರೆಡೆ ಶಿಫ್ಟ್ಗೆ ಮನವಿ ಮಾಡಿರುವುದು, ಜೈಲಿನ ಆಂತರಿಕ ಭದ್ರತೆ ಮತ್ತು ಆಡಳಿತದ ಮೇಲೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ. ಉಮೇಶ್ ರೆಡ್ಡಿಯ ಮನವಿ ಮತ್ತು ಆತನ ಮೇಲಿನ ವಿಚಾರಣೆಯ ಮುಂದಿನ ಹಂತಗಳು ತೀವ್ರ ಕುತೂಹಲ ಕೆರಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ