ಹರಿದ್ವಾರದಲ್ಲಿ ಪೇಜಾವರ ಶ್ರೀಗಳಿಗೆ ಉಮಾಭಾರತಿ ಗುರುಪೂಜೆ

By Suvarna NewsFirst Published Jul 24, 2021, 6:49 PM IST
Highlights

* ಹರಿದ್ವಾರದಲ್ಲಿ ಪೇಜಾವರ ಶ್ರೀಗಳಿಗೆ ಉಮಾಭಾರತಿ ಗುರುಪೂಜೆ
* ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ ಭಕ್ತಿ ನಮನ
* ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ  ಪಾದಪೂಜೆ 

 ಉಡುಪಿ, (ಜು.24): ಶನಿವಾರ ಗುರುಪೂರ್ಣಿಮೆಯ ಹಿನ್ನೆಲೆಯಲ್ಲಿ ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರಲ್ಲಿ ಮಂತ್ರದೀಕ್ಷೆ ಪಡೆದ ಮಾಜಿ ಕೇಂದ್ರ ಸಚಿವೆ ಸಾದ್ವಿ ಉಮಾಭಾರತಿ ಅವರು ಹರಿದ್ವಾರದಲ್ಲಿರುವ ಶ್ರೀ ಪೇಜಾವರ ಮಠದ ಶಾಖೆಯ ಮಧ್ವಾಶ್ರಮದಲ್ಲಿ ಗುರುಪೂಜೆ ಸಲ್ಲಿಸಿದರು.

ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ ಭಕ್ತಿ ನಮನ ಸಲ್ಲಿಸಿದರು.‌ ಬಳಿಕ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ  ಪಾದಪೂಜೆ ನೆರವೇರಿಸಿದರು.

ಇಂದು ಗುರು ಪೌರ್ಣಿಮೆ; ಹಿನ್ನಲೆ ಹಾಗೂ ಮಹತ್ವವಿದು..!

ಕಾರ್ಯಕ್ರಮದಲ್ಲಿ ಚಿತ್ರಕೂಟಾಶ್ರಮದ ಶ್ರೀ ರಾಮಕಿಶನ್ ಜೀ ಮಹಾರಾಜ್ ಅವರಿಗೂ ಗುರುನಮನ ಅರ್ಪಿಸಿದ ಉಮಾಭಾರತಿ ಅಲ್ಲಿನ ಹತ್ತಾರು ಸಾಧು ಸಂತರಿಗೂ ವಿಶೇಷ ಉಡುಗೊರೆ ನೀಡಿ ಗೌರವ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಆಶ್ರಮದಲ್ಲಿರುವ ಜಗದ್ಗುರು ಮಧ್ವಾಚಾರ್ಯರ ಶಿಲಾಪ್ರತಿಮೆಗೆ ವಿಶೇಷ ಅಭಿಷೇಕ ಪೂಜೆ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನೆರವೇರಿತು . ಆಶ್ರಮದ ವ್ಯವಸ್ಥಾಪಕ ಮನೋಜ್ ಕಾರ್ಯಕ್ರಮ ಸಂಯೋಜಿಸಿದರು.

 ಉಮಾಭಾರತಿಯವರ ಸಂಕಲ್ಪದಂತೆಶ್ರೀಮಧ್ವಾಶ್ರಮದಲ್ಲಿ ಎರಡು ದಿನಗಳಿಂದ ವಿದ್ವಾನ್ ಶಶಾಂಕ ಭಟ್ಟರ ನೇತೃತ್ವದಲ್ಲಿ ವಿಷ್ಣುಸಹಸ್ರನಾಮ ಯಾಗ ಸಂಪನ್ನಗೊಂಡಿತ್ತು. 
 
ಉಮಾಭಾರತಿ ಅವರು ಶ್ರೀ ವಿಶ್ವೇಶತೀರ್ಥರು ಇದ್ದಷ್ಟೂ ಕಾಲ ಪ್ರತೀವರ್ಷ ಆಷಾಢ ಪೂರ್ಣಿಮೆಯಂದು ಅವರಿದ್ದಲ್ಲಿ ತೆರಳಿ ವಿಶೇಷ ಕಾರ್ಯಕ್ರಮ ನೆರವೇರಿಸಿ ಗುರುವಂದನೆ ಸಲ್ಲಿಸುತ್ತಿದ್ದರು.
 
1992ರ ನ.17 ರಂದು ನರ್ಮದಾ ನದಿಯ ಉಗಮಸ್ಥಳ ಮಧ್ಯಪ್ರದೇಶದ ಅಮರಕಂಟಕ್ ನಲ್ಲಿ ಉಮಾಭಾರತಿಯವರು  ಶ್ರೀ ವಿಶ್ವೇಶತೀರ್ಥರಿಂದ ಮಂತ್ರದೀಕ್ಷೆ ಪಡೆದು ಸಾಧ್ವಿ ಶ್ರೀ ಉಮಾಭಾರತಿಯಾದರು.‌ 

click me!