
ಗುಂಡ್ಲುಪೇಟೆ[ನ.24]: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಡೀಪುರ ಉದ್ಯಾನ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಎರಡು ಹುಲಿಗಳ ಶವ ಪತ್ತೆಯಾಗಿದೆ. ಇವುಗಳಲ್ಲಿ ಒಂದು ಹುಲಿ ಸಹಜವಾಗಿ ಹಾಗೂ ಮತ್ತೊಂದು ಹುಲಿ ಕಾದಾಟದ ವೇಳೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಬಂಡೀಪುರ ಉದ್ಯಾನವನದ ಹಂಗಳ ಗ್ರಾಮದ ಬಳಿ ಹುಲಿಯೊಂದು ಕಾಣಿಸಿಕೊಂಡು ಸಾಕಷ್ಟುಆತಂಕ ಸೃಷ್ಟಿಸಿತ್ತು. ಈ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದರು.
ಶುಕ್ರವಾರ ಮಧ್ಯಾಹ್ನ ಗೋಪಾಲಸ್ವಾಮಿ ಬೆಟ್ಟವಲಯದ ಕಾಳಯ್ಯನಕಟ್ಟೆಅರಣ್ಯದಲ್ಲಿ ಆನೆಗಳ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದ ಸಿಬ್ಬಂದಿಗೆ ಈ ಹುಲಿ ಶವ ಪತ್ತೆಯಾಗಿದೆ. ಈ ಹುಲಿ ಮೇಲ್ನೋಟಕ್ಕೆ ಸ್ವಾಭಾವಿಕವಾಗಿ ಮೃತಪಟ್ಟಿದೆ ಎನ್ನಲಾಗಿದೆ. ಇನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಲ್ಲಾಳ ವಲಯ ವ್ಯಾಪ್ತಿಯಲ್ಲಿ ಗಂಡು ಹುಲಿಯ ಶವ ಗುರುವಾರ ರಾತ್ರಿ ಪತ್ತೆಯಾಗಿದೆ.
ವಲಯದ ಮೂರ್ಕಲ್ ಬೀಟ್ನ ಗಂಡಗೂರು ಸೆಕ್ಷನ್ ಬಳಿ ಸುಮಾರು 9 ರಿಂದ 10 ವರ್ಷ ವಯಸ್ಸಿನ ಹುಲಿಯ ಶವ ಪತ್ತೆಯಾಗಿದೆ. ಈ ಹುಲಿಯ ಮೈಮೇಲಿನ ಗಾಯಗಳನ್ನು ನೋಡಿದರೆ ಮತ್ತೊಂದು ಹುಲಿಯೊಂದಿಗಿನ ಕಾದಾಟದಲ್ಲಿ ಈ ಹುಲಿ ಸತ್ತಿರಬಹುದು ಎಂದು ಎಸಿಎಫ್ ಎಸ್.ಆರ್. ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ