ಆರೋಗ್ಯ ಸಮೀಕ್ಷೆಗೆಂದು ತೆರಳಿದ್ದ ಕೊರೋನಾ ವಾರಿಯರ್ಸ್‌ ಮೇಲೆ ಹಲ್ಲೆ

By Kannadaprabha NewsFirst Published Aug 17, 2020, 7:36 AM IST
Highlights

ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಮನೆ ಮನೆ ಆರೋಗ್ಯ ಸಮೀಕ್ಷೆಗೆಂದು ತೆರಳಿದಾಗ ಘಟನೆ| ಸಹೋದರ-ಸಹೋದರಿಯಿಂದ ಸಮೀಕ್ಷೆಗೆ ಅಡ್ಡಿ|  ಮೊಬೈಲ್‌ ಕಸಿದು ಹಲ್ಲೆ| ಸಮೀಕ್ಷೆಗೆ ಹೋದ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಂದಿಸಿದ ಕೆ.ಆರ್‌.ನವ್ಯಾ ಹಾಗೂ ಆಕೆಯ ಸಹೋದರ| 

ಬೆಂಗಳೂರು(ಆ.17): ಸರ್ಕಾರ ಸಾಕಷ್ಟು ಎಚ್ಚರಿಕೆ ನೀಡುತ್ತಿದ್ದರೂ ಕೊರೋನಾ ನಿಯಂತ್ರಣಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ಕೊರೋನಾ ವಾರಿಯರ್‌ಗಳ ಮೇಲೆ ಹಲ್ಲೆ ಮುಂದುವರೆದಿದ್ದು, ಮನೆ-ಮನೆ ಆರೋಗ್ಯ ಸಮೀಕ್ಷೆಗೆಂದು ತೆರಳಿದ್ದ ಕೊರೋನಾ ವಾರಿಯರ್ಸ್‌ ಮೇಲೆ ಹಲ್ಲೆ ನಡೆಸಿದ ಘಟನೆ ಚಿಕ್ಕಪೇಟೆ ವಾರ್ಡ್‌ನಲ್ಲಿ ಭಾನುವಾರ ನಡೆದಿದೆ. ಈ ಸಂಬಂಧ ಹಲಸೂರು ಗೇಟ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊರೋನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶದಂತೆ ಬೂತ್‌ ಮಟ್ಟದ ಅಧಿಕಾರಿ, ಶಿಕ್ಷಕರು, ಕಂದಾಯ ವಸೂಲಿಗಾರರು, ಕಂದಾಯ ಪರಿವೀಕ್ಷಕರ ತಂಡ ಚಿಕ್ಕಪೇಟೆ ವಾರ್ಡ್‌ನ ಕಬ್ಬನ್‌ಪೇಟೆಯ 18ನೇ ಅಡ್ಡರಸ್ತೆಯಲ್ಲಿ ಮನೆ ಮನೆ ಆರೋಗ್ಯ ಸಮೀಕ್ಷೆ ನಡೆಸಲು ಮುಂದಾಗಿದ್ದರು.

ಕೊರೋನಾ ಎಫೆಕ್ಟ್: ಟ್ರಾವೆಲ್ಸ್‌ ಉದ್ಯಮ ತತ್ತರ, ಬಿಸಿನೆಸ್‌ ಇಲ್ಲದೇ ಭಾರೀ ನಷ್ಟ

ಈ ವೇಳೆ ಮನೆ ಸಂಖ್ಯೆ14/2ರ ಮನೆಯ ಮಾಲೀಕರ ಮಗಳು ಕೆ.ಆರ್‌.ನವ್ಯಾ ಹಾಗೂ ಆಕೆಯ ಸಹೋದರ ಸಮೀಕ್ಷೆಗೆ ಹೋದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಂದಿಸಿದ್ದಾರೆ. ಅಲ್ಲದೇ ಗುಂಡಪ್ಪ ಹಾಗೂ ಮನೋಜ್‌ ಎಂಬ ಸಿಬ್ಬಂದಿ ಮೇಲೆ ಹಲ್ಲೆ ಸಹ ನಡೆಸಿದಿದ್ದಾರೆ. ಜತೆಗೆ ಘಟನೆಯ ಚಿತ್ರೀಕರಣ ನಡೆಸಿದ ಮೊಬೈಲ್‌ ಫೋನ್‌ ಸಹ ಕಿತ್ತುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗೆ ಸಮೀಕ್ಷೆಗೆ ಅಡ್ಡಿ ಪಡಿಸಿದ ಹಾಗೂ ಹಲ್ಲೆ ನಡೆಸಿದವರ ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

click me!