
ತುಮಕೂರು(ಜ.12): ತುಮಕೂರಿನಲ್ಲಿ ಮಹಾತ್ಮಾ ಗಾಂಧೀಜಿ ಹೆಸರಿದ್ದ ಕ್ರೀಡಾಂಗಣಕ್ಕೆ ಸಚಿವ ಜಿ. ಪರಮೇಶ್ವರ್ ಹೆಸರು ಮರುನಾಮಕರಣ ಮಾಡಿರುವುದು ಈಗ ರಾಜಕೀಯ ಕಿಚ್ಚು ಹಚ್ಚಿದೆ.
ಜಿಲ್ಲೆಯ ಪ್ರತಿಷ್ಠಿತ ಒಳಾಂಗಣ ಕ್ರೀಡಾಂಗಣದ ಹೆಸರು ಬದಲಾವಣೆ ವಿಚಾರ ಈಗ ಜಿಲ್ಲಾಡಳಿತ ಮತ್ತು ಬಿಜೆಪಿ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ದಶಕಗಳಿಂದ ಮಹಾತ್ಮಾ ಗಾಂಧೀಜಿ ಹೆಸರಿದ್ದ ಕ್ರೀಡಾಂಗಣಕ್ಕೆ ಈಗಿನ ಗೃಹ ಸಚಿವ ಡಾಜಿ ಪರಮೇಶ್ವರ್ ಅವರ ಹೆಸರಿಟ್ಟಿರುವುದು ಭಾರೀ ಆಕ್ರೋಶಕ್ಕೆ ಗುರಿಯಾಗಿದೆ.
ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಸರ್ಕಲ್ ಬಳಿಯಿರುವ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣಕ್ಕೆ ಇಂದು ಮಧ್ಯಾಹ್ನ ದಿಢೀರ್ ಗಾಂಧಿ ತೆಗೆದು ಪರಮೇಶ್ವರ್ ಎಂದು ಮರುನಾಮಕರಣ ಮಾಡಲಾಗಿದೆ. ಜಿಲ್ಲಾಡಳಿತವು 'ಮಹಾತ್ಮ ಗಾಂಧಿ' ಹೆಸರನ್ನು ತೆಗೆದುಹಾಕಿ, ಅದರ ಜಾಗದಲ್ಲಿ 'ಡಾ. ಜಿ. ಪರಮೇಶ್ವರ್ ಒಳಾಂಗಣ ಕ್ರೀಡಾ ಸಂಕೀರ್ಣ' ಎಂಬ ನಾಮಫಲಕವನ್ನು ಅಳವಡಿಸಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
ಮರುನಾಮಕರಣದ ವಿರುದ್ಧ ಕಿಡಿಕಾರಿದ ಬಿಜೆಪಿ ಕಾರ್ಯಕರ್ತರು, ಕ್ರೀಡಾಂಗಣದ ದ್ವಾರದಲ್ಲೇ ಧರಣಿ ಕುಳಿತರು. ಸಚಿವ ಪರಮೇಶ್ವರ್ ಅವರ ಹೆಸರು ಇರುವ ಹೊಸ ನಾಮಫಲಕವನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಒಂದು ಹಂತದಲ್ಲಿ ಕಾರ್ಯಕರ್ತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ತಳ್ಳಿ ಬೋರ್ಡ್ ಕಿತ್ತುಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ನೂಕಾಟ-ತಳ್ಳಾಟ ನಡೆಯಿತು.
ಕೆಎಸ್ಆರ್ಪಿ ತುಕಡಿ ನಿಯೋಜನೆ; ಪ್ರತಿಭಟನಾಕಾರರ ಬಂಧನ
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ವಹಿಸಿದರು. ಪ್ರತಿಭಟನೆಯಲ್ಲಿ ತೊಡಗಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದರು. ಎರಡು ಕೆಎಸ್ಆರ್ಪಿ (KSRP) ತುಕಡಿ ವಾಹನಗಳಲ್ಲಿ ಕಾರ್ಯಕರ್ತರನ್ನು ತುಂಬಿಕೊಂಡು ಸ್ಥಳದಿಂದ ತೆರವುಗೊಳಿಸಲಾಯಿತು. ಸದ್ಯ ಕ್ರೀಡಾಂಗಣದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಗಾಂಧೀಜಿಗೆ ಅಪಮಾನ ಮಾಡಿದ ಕಾಂಗ್ರೆಸ್: ಬಿಜೆಪಿ ಆಕ್ರೋಶ
ಸದಾ ಗಾಂಧೀಜಿ ಹೆಸರು ಜಪಿಸುವ ಕಾಂಗ್ರೆಸ್ ಪಕ್ಷವು, ಈಗ ಅವರ ಹೆಸರನ್ನೇ ಅಳಿಸಿ ತನ್ನ ನಾಯಕರ ಹೆಸರಿಟ್ಟುಕೊಳ್ಳಲು ಮುಂದಾಗಿದೆ. ದೇಶದ ರಾಷ್ಟ್ರಪಿತನಿಗಿಂತ ಪರಮೇಶ್ವರ್ ದೊಡ್ಡವರೇ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ. ಜಿಲ್ಲಾಡಳಿತವು ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಘೋಷಣೆಗಳನ್ನು ಕೂಗುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ