
ಬೆಂಗಳೂರು(ಆ.18): ದಿ ನ್ಯೂ ಇಂಡಿಯನ್ ಟೈಮ್ಸ್ (ಟಿಎನ್ಐಟಿ) ಸಂಸ್ಥೆ ವತಿಯಿಂದ ಕೊಡಮಾಡುವ 2024ನೇ ಸಾಲಿನ ದಕ್ಷಿಣ ಭಾರತೀಯ ಮಾಧ್ಯಮ ಪ್ರಶಸ್ತಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ನ ನಾಲ್ವರು ಪತ್ರಕರ್ತರು ಭಾಜನರಾಗಿದ್ದಾರೆ.
ಶನಿವಾರ ಅರಮನೆ ಮೈದಾನದಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ (ಟಿಎನ್ಐಟಿ) ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತೀಯ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ನ ಶ್ವೇತಾ ಆಚಾರ್ಯ ಉತ್ತಮ ಆ್ಯಂಕರಿಂಗ್ ವಿಭಾಗ, ಬಿ.ಎನ್. ವಿದ್ಯಾಶ್ರೀ - ಉತ್ತಮ ಮೆಟ್ರೊ ಪತ್ರಕರ್ತೆ, ಆರ್.ಜಿ. ಮಧುಸೂಧನರಾವ್ - ಉತ್ತಮ ವಿಡಿಯೋ ಎಡಿಟರ್, ಔಟ್ಪುಟ್ ಎಡಿಟರ್ ವಿಭಾಗದಲ್ಲಿ ಅಶ್ವತ್ ಹೆಗ್ಡೆ ಅವರಿಗೆ ಪ್ರಶಸ್ತಿ ಲಭಿಸಿದೆ. ಜೊತೆಗೆ, ಉತ್ತಮ ಹಿನ್ನೆಲೆ ಧ್ವನಿ ಹಾಗೂ ಬೆಸ್ಟ್ ನ್ಯೂಸ್ ಚಾನಲ್ ಪ್ರಶಸ್ತಿಗೆ ಏಷ್ಯಾನೆಟ್ ನ್ಯೂಸ್ ಕೇರಳ ಸುದ್ದಿ ವಾಹಿನಿ ಭಾಜನವಾಗಿದೆ. ಇದೇ ವೇಳೆ ದಕ್ಷಿಣ ಭಾರತದ ವಿವಿಧ ದೃಶ್ಯ ಮಾಧ್ಯಮಗಳ 40ಕ್ಕೂ ಹೆಚ್ಚು ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ನಟ ರಿಷಬ್ ಶೆಟ್ಟಿ, ಸಿನಿಮಾ ಹಾಗೂ ಕಲಾವಿದರನ್ನು ಜಗತ್ತಿಗೆ ಗುರುತಿಸುವಲ್ಲಿ ಮಾಧ್ಯಮ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ರಂಗ ಕಲಾವಿದರು ಹಾಗೂ ಚಲನಚಿತ್ರ ಕಲಾವಿದರ ಜೀವನ ಹಾಗೂ ಸಾಧನೆ ಪ್ರತಿಯೊಬ್ಬರಿಗೂ ತಲುಪಿಸುವ ಮಾಧ್ಯಮಗಳಕಾರ್ಯ ಶ್ಲಾಘನೀಯ. ಸಾಮಾಜಿಕ ಮಾಧ್ಯಮಗಳಿಂದ ತೀವ್ರ ಸ್ಪರ್ಧೆ ಇದ್ದರೂ ಅತ್ಯಂತ ಜವಾಬ್ದಾರಿಯುತವಾಗಿ, ಸಮಯದ ಮಿತಿಯಿಲ್ಲದೇ ನಿರಂತರವಾಗಿ ಸುದ್ದಿ ತಲುಪಿಸುವ ಮಹತ್ವದ ಕೆಲಸಗಳನ್ನು ಮುಖ್ಯವಾಹಿನಿ ಮಾಧ್ಯಮಗಳು ಮಾಡುತ್ತಿವೆ ಎಂದರು.
ವಿಶ್ವ ಸಂವಾದ ಕೇಂದ್ರದ ವತಿಯಿಂದ ಕಾರ್ಯಕ್ರಮ: ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ಗೆ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ಕಲಾವಿದರಾದ ನಟಿ ತಾರಾ, ನೆನಪಿರಲಿ ಪ್ರೇಮ್, ಅನಿರುದ್ಧ ಜಾತ್ಕರ್, ವಿಜಯ್ ರಾಘವೇಂದ್ರ, ಪ್ರಿಯಾಂಕಾ ಉಪೇಂದ್ರ, ನಟಿ ಮಾಲಾಶ್ರೀ, ವಚನಾನಂದಸ್ವಾಮೀಜಿ, ದಿ ನ್ಯೂ ಇಂಡಿಯನ್ ಟೈಮ್ಸ್ (ಟಿಎನ್ಐಟಿ) ಸಂಸ್ಥೆ ಮುಖ್ಯಸ್ಥರಘು ಭಟ್, ಹಿರಿಯ ಪತ್ರಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ