
ಬ್ಯಾಟರಾಯನಪುರ : ರಾಜ್ಯ ಕಾಂಗ್ರೆಸ್ ಸರ್ಕಾರದ ತೆರಿಗೆ ಹೊರೆ ಮತ್ತು ರಸ್ತೆ ಗುಂಡಿಗಳಿಂದಾಗಿ ಸಂಕ್ರಾಂತಿಯ ಹಿಗ್ಗಿನ ಸುಗ್ಗಿಯ ಕಾಲದಲ್ಲೂ ರಾಜ್ಯದ ಜನತೆ ಕುಗ್ಗಿ ನಡೆಯುವಂತಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ವ್ಯಂಗ್ಯವಾಡಿದ್ದಾರೆ.
ಸಮೀಪದ ವಿದ್ಯಾರಣ್ಯಪುರದ ಎನ್.ಟಿಐ. ಮೈದಾನದಲ್ಲಿ ಬಿಜೆಪಿ ಮುಖಂಡ ಎ. ರವಿ ಅವರ ನೇತೃತ್ವದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ''''ಸಂಕ್ರಾಂತಿ ಸಂಭ್ರಮ'''' ಅವರೆ ಬೇಳೆ ಮೇಳ ಉದ್ಘಾಟಿಸಿ ಮಾತನಾಡಿದ ಅವರು ''''ಸಂಕ್ರಾಂತಿ ವಿಶೇಷವಾಗಿ ರೈತರ ಹಬ್ಬ, ರೈತರು ತಾವು ಬೆಳೆದ ಧಾನ್ಯಗಳನ್ನು ರಾಶಿ ಹಾಕಿ ಸಂಭ್ರಮಿಸುವ ಹಬ್ಬ. ಎತ್ತುಗಳನ್ನು ಸಿಂಗಾರ ಮಾಡಿ ಕಿಚ್ಚು ಹಾಯಿಸಿ ಖುಷಿ ಪಡುವ ಕಾಲ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ತೆರಿಗೆ ಹೊರೆ, ರಸ್ತೆ ಗುಂಡಿಗಳು, ಬೆಲೆ ಏರಿಕೆಯ ಪರಿಣಾಮದಿಂದಾಗಿ ಇಂತಹ ಸಂಭ್ರಮದ ಹಿಗ್ಗಿನ ಸಂಕ್ರಾಂತಿಯ ಸುಗ್ಗಿ ಕಾಲದಿಂದಲೂ ರಾಜ್ಯದ ರೈತರು ಕುಗ್ಗಿ ನಡೆಯುವಂತಾ ಗಿರುವುದು ವಿಷಾದನೀಯ ಸಂಗತಿ ಎಂದರು.
ಮುಖಂಡ ರವಿ ಅವರು ವಿದ್ಯಾರಣ್ಯಪುರದ ಜನತೆ ಸಂಕ್ರಾಂತಿಯ ಸಡಗರ, ಸಂಭ್ರಮ ಆಚರಿಸುವಂತೆ ಮಾಡಲು ''''ಸಂಕ್ರಾಂತಿ ಸಂಭ್ರಮ'''' ಕಾರ್ಯಕ್ರಮ ಏರ್ಪಡಿಸಿ, ನಮ್ಮ ಸಂಸ್ಕೃತಿ, ಪರಂಪರೆಯನ್ನು ಸ್ಮರಿಸಿಕೊಳ್ಳುವಂತೆ ಮಾಡಿರುವುದು ಸಂತೋಷದ ಸಂಗತಿ. ಅವರಿಗೆ ಜನತೆಯ ಸಹಕಾರ, ಬೆಂಬಲ ಹೀಗೆಯೇ ಇರಲಿ ಎಂದು ಶುಭ ಹಾರೈಸಿದರು.
ಬಿಜೆಪಿ ಮುಖಂಡ ಎ.ರವಿ ಮಾತನಾಡಿ ''''ಸಂಕ್ರಾಂತಿ ಹಬ್ಬದ ಪ್ರಯುಕ್ತ ನಾಲ್ಕು ದಿನಗಳ ಸಂಕ್ರಾಂತಿ ಸಂಭ್ರಮ ಮತ್ತು ಅವರೆ ಬೇಳೆ ಮೇಳ ಆಯೋಜಿಸಿದ್ದು, ಈ ಕಾರ್ಯಕ್ರಮದ ಸಂಪೂರ್ಣ ಯಶಸ್ಸು ನನ್ನ ನೆಚ್ಚಿನ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಲ್ಲುತ್ತದೆ. ನನ್ನ ಸೋಲು, ಗೆಲವು ಎರಡರಲ್ಲೂ ಜೊತೆಗಿದ್ದು, ನನ್ನನ್ನು ಹುರಿದುಂಬಿಸುತ್ತಿರುವ ನನ್ನ ಮುಖಂಡರು, ಕಾರ್ಯಕರ್ತರು ಮತ್ತು ಬ್ಯಾಟರಾಯನಪುರ ಕ್ಷೇತ್ರದ ಜನತೆಗೆ ಸದಾ ಅಭಾರಿಯಾಗಿರುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ವಿದ್ಯಾರಣ್ಯಪುರದ ಶ್ರೀ ದುರ್ಗಾಪರಮೇಶ್ವರಿ ದೇಗುಲದ ಫ್ರಧಾನ ಅರ್ಚಕ ವಸಂತಕುಮಾರ್ ಶಾಸ್ತ್ರಿ, ಬಿಜೆಪಿ ಮುಖಂಡರಾದ ಅಶ್ವತ್ಥ ನಾರಾಯಣಗೌಡ, ಪಿಳ್ಳಪ್ಪ, ಎನ್.ಟಿ. ಮಹೇಶ್, ಟಿ.ಪಿ. ಪ್ರಕಾಶ್, ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ