ದಾಖಲೆಯ 30 ಲಕ್ಷ ಮಂದಿಗೆ ಇಂದು ಲಸಿಕೆ ನೀಡುವ ಗುರಿ

Kannadaprabha News   | Asianet News
Published : Sep 17, 2021, 07:22 AM IST
ದಾಖಲೆಯ 30 ಲಕ್ಷ ಮಂದಿಗೆ ಇಂದು ಲಸಿಕೆ ನೀಡುವ ಗುರಿ

ಸಾರಾಂಶ

*   ಬೃಹತ್‌ ಮೇಳಕ್ಕೆ ಕಲಬುರಗಿಯಲ್ಲಿಂದು ಸಿಎಂ ಚಾಲನೆ *  ರಾಜ್ಯಾದ್ಯಂತ 12,700 ಸರ್ಕಾರಿ ಕೋವಿಡ್‌ ಲಸಿಕಾ ಕೇಂದ್ರ *  ರಾಜ್ಯದಲ್ಲಿ ಈವರೆಗೆ ಒಟ್ಟು 4.8 ಕೋಟಿ ಡೋಸ್‌ ಲಸಿಕೆ ವಿತರಣೆ

ಬೆಂಗಳೂರು(ಸೆ.17): ರಾಜ್ಯದಲ್ಲಿ ಶುಕ್ರವಾರ 30 ಲಕ್ಷ ಮಂದಿಗೆ ಕೋವಿಡ್‌ ಲಸಿಕೆ ನೀಡುವ ದಾಖಲೆಯ ಗುರಿಯೊಂದಿಗೆ ಬೃಹತ್‌ ಲಸಿಕಾ ಮೇಳ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲಬುರಗಿಯಲ್ಲಿ ಲಸಿಕಾ ಮೇಳಕ್ಕೆ ಚಾಲನೆ ನೀಡಲಿದ್ದಾರೆ.

ಲಸಿಕಾ ಮೇಳಕ್ಕೆ ರಾಜ್ಯಾದ್ಯಂತ 12,700 ಸರ್ಕಾರಿ ಕೋವಿಡ್‌ ಲಸಿಕಾ ಕೇಂದ್ರ, 300 ಖಾಸಗಿ ಲಸಿಕಾ ಕೇಂದ್ರಗಳು ಮತ್ತು 14,666 ಲಸಿಕಾ ಶಿಬಿರಗಳನ್ನು ಗುರುತಿಸಲಾಗಿದ್ದು ಒಟ್ಟು ಸುಮಾರು 27 ಸಾವಿರ ಕೇಂದ್ರದಲ್ಲಿ ಲಸಿಕೆ ವಿತರಣೆ ನಡೆಯಲಿದೆ. ಒಟ್ಟು 34 ಲಕ್ಷ ಡೋಸ್‌ ಲಸಿಕೆಯನ್ನು ಜಿಲ್ಲೆಗಳಿಗೆ ಹಂಚಲಾಗಿದೆ.

ರಾಜ್ಯದಲ್ಲಿ ಈವರೆಗೆ ಒಂದೇ ದಿನ ಗರಿಷ್ಠ 12 ಲಕ್ಷ ಲಸಿಕೆ ವಿತರಣೆ ನಡೆದಿದ್ದು ಈ ದಾಖಲೆಯನ್ನು ಮೀರಿ ಲಸಿಕಾಕರಣ ನಡೆಸಲು ರಾಜ್ಯ ಆರೋಗ್ಯ ಇಲಾಖೆ ಸಜ್ಜಾಗಿದೆ. ಲಸಿಕೆ ಪಡೆಯಲು ಬಾಕಿ ಇರುವ ಫಲಾನುಭವಿಗಳ ಸಂಖ್ಯೆಗಳಿಗೆ ಅನುಗುಣವಾಗಿ ಪ್ರತಿ ಜಿಲ್ಲೆಗೆ ಗುರಿ ನಿಗದಿ ಪಡಿಸಲಾಗಿದೆ. ಹಾಗೆಯೇ ಆದ್ಯತಾ ಗುಂಪುಗಳಿಗೆ ವಿಶೇಷ ಒತ್ತು ನೀಡುವಂತೆ ಆರೋಗ್ಯ ಇಲಾಖೆ ಜಿಲ್ಲಾಡಳಿತಗಳಿಗೆ ತಿಳಿಸಿದೆ. ವೈದ್ಯಕೀಯ ವಿದ್ಯಾಲಯ, ನರ್ಸಿಂಗ್‌ ಶಾಲೆಗಳು ಮತ್ತು ಖಾಸಗಿ ಕೋವಿಡ್‌ -19 ಲಸಿಕಾ ಕೇಂದ್ರಗಳ ಬೆಂಬಲವು ದೊರೆಯಲಿದೆ.

ಲಸಿಕಾ ಅಭಿಯಾನ ಅಮೆರಿಕ, ಜಪಾನ್ ಸೇರಿ 18 ದೇಶಗಳನ್ನು ಹಿಂದಿಕ್ಕಿದ ಭಾರತ!

ರಾಜ್ಯದಲ್ಲಿ ಈವರೆಗೆ ಒಟ್ಟು 4.8 ಕೋಟಿ ಡೋಸ್‌ ಲಸಿಕೆ ವಿತರಣೆಯಾಗಿದೆ. 18 ವರ್ಷ ಮೇಲ್ಪಟ್ಟವರಲ್ಲಿ ಶೇ.73 ಮಂದಿ ಮೊದಲ ಡೋಸ್‌ ಮತ್ತು ಶೇ.27 ಮಂದಿ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಎರಡನೇ ಡೋಸ್‌ ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ವಿತರಣೆಯಾಗುತ್ತಿದೆ.

ನವೆಂಬರ್‌ ಅಂತ್ಯದ ಹೊತ್ತಿಗೆ ರಾಜ್ಯದಲ್ಲಿನ 18 ವರ್ಷ ಮೇಲ್ಪಟ್ಟಎಲ್ಲರಿಗೂ ಕೋವಿಡ್‌ ಲಸಿಕೆಯ ಎರಡೂ ಡೋಸ್‌ ನೀಡಬೇಕು ಎಂಬ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ 5 ಲಕ್ಷ ಲಸಿಕೆ ವಿತರಿಸಲು ಗುರಿ ಹೊಂದಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ