ಐಎಎಸ್, ಐಎಫ್ಎಸ್, ಕೆಎಎಸ್ ಅಧಿಕಾರಿಗಳ ವರ್ಗ| ಐಎಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿಯಲ್ಲಿನ ಏಳೂ ಮಂದಿ ವಿವಿಧ ಉಪ ವಿಭಾಗಗಳ ಸಹಾಯಕ ಆಯುಕ್ತ ಸ್ಥಾನಗಳಿಗೆ ವರ್ಗಾವಣೆ
ಬೆಂಗಳೂರು[ಅ.17]: ರಾಜ್ಯ ಸರ್ಕಾರವು ಐಎಎಸ್, ಐಎಫ್ಎಸ್ ಹಾಗೂ ಕೆಎಎಸ್ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆಸಿದೆ. ಬುಧವಾರ ಏಳು ಉಪ ವಿಭಾಗಗಳ ಸಹಾಯಕ ಆಯುಕ್ತರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಐಎಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿಯಲ್ಲಿನ ಏಳೂ ಮಂದಿ ವಿವಿಧ ಉಪ ವಿಭಾಗಗಳ ಸಹಾಯಕ ಆಯುಕ್ತ ಸ್ಥಾನಗಳಿಗೆ ವರ್ಗಾವಣೆಗೊಂಡಿದ್ದಾರೆ. ಶೇಖ್ ತನ್ವೀರ್ ಆಸಿಫ್ ಹೊಸಪೇಟೆ ಉಪ ವಿಭಾಗದ ಸಹಾಯಕ ಆಯುಕ್ತರಾಗಿ, ಡಾ. ವೈ. ನವೀನ್ ಭಟ್ ಅವರನ್ನು ಹಾಸನ ಉಪ ವಿಭಾಗದ ಸಹಾಯಕ ಆಯುಕ್ತರಾಗಿ, ಅಕ್ಷಯ್ ಶ್ರೀಧರ್ ಬೀದರ್ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ವರ್ಗಾವಣೆ ಆಗಿದ್ದಾರೆ.
ಉಳಿದಂತೆ ಲಿಂಗಸಗೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಡಾ. ದಿಲೇಶ್ ಶಸಿ, ಮಧುಗಿರಿ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಡಾ.ಕೆ. ನಂದಿನಿದೇವಿ, ಇಂಡಿ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಲೋಖಂಡೆ ಸ್ನೇಹಲ್ ಸುಧಾಕರ್, ಬಸವ ಕಲ್ಯಾಣ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಭನ್ವರ್ ಸಿಂಗ್ ಮೀನಾ ಅವರನ್ನು ನೇಮಿಸಿ ವರ್ಗಾಯಿಸಲಾಗಿದೆ.
ಐಎಫ್ಎಸ್ ವರ್ಗಾವಣೆ:
ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಎಸ್.ಆರ್. ನಟೇಶ್ ಅವರು ಪಶುಸಂಗೋಪನೆ ಇಲಾಖೆ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪಶುಸಂಗೋಪನೆ ಆಯುಕ್ತರಾಗಿದ್ದ ಉಪೇಂದ್ರ ಪ್ರತಾಪ್ಸಿಂಗ್ ಅವರು ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾವಣೆಯಾಗಿದ್ದು, ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ಎಸ್. ವೆಂಕಟೇಶನ್ ಅವರು ಅರಣ್ಯ ಇಲಾಖೆಯ ತಾಂತ್ರಿಕ ಕೋಶದ ವಿಶೇಷ ನಿರ್ದೇಶಕರಾಗಿ ವರ್ಗಾವಣೆ ಆಗಿದ್ದಾರೆ.
ಇದಲ್ಲದೆ ಮೂರು ಮಂದಿ ಕೆಎಎಸ್ ಅಧಿಕಾರಿಗಳೂ ವರ್ಗಾವಣೆಯಾಗಿದ್ದು, ಎಸ್. ರಂಗಪ್ಪ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆಯಾಗಿದ್ದಾರೆ. ಸಿ.ಎನ್. ಶ್ರೀಧರ್ ಅವರು ಚೆಸ್ಕಾಂ ಪ್ರಧಾನ ವ್ಯವಸ್ಥಾಪಕ (ಆಡಳಿತ ಮತ್ತು ಮಾನವ ಸಂಪನ್ಮೂಲ), ಡಾ.ಕೆ.ಎನ್. ಅನುರಾಧಾ ಅವರು ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ (ಬೆಂಗಳೂರು) ಹುದ್ದೆಗೆ ವರ್ಗಗೊಂಡಿದ್ದಾರೆ.