ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಸಂಘರ್ಷ ನಿಶ್ಚಿತ: ಪ್ರಮೋದ್‌ ಮುತಾಲಿಕ್‌

By Govindaraj SFirst Published Nov 7, 2022, 3:20 AM IST
Highlights

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೋರಿದ್ದು ಖಂಡನೀಯ. ಒಂದು ವೇಳೆ ಅವಕಾಶ ಕೊಟ್ಟರೆ ಅದು ಸಂಘರ್ಷಕ್ಕೆ ದಾರಿಯಾಗುತ್ತದೆ. ಹು-ಧಾ ಮಹಾನಗರ ಪಾಲಿಕೆ ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಎಚ್ಚರಿಕೆ ನೀಡಿದ್ದಾರೆ. 

ಧಾರವಾಡ (ನ.07): ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೋರಿದ್ದು ಖಂಡನೀಯ. ಬಿಜೆಪಿ ಒಂದು ವೇಳೆ ಅವಕಾಶ ಕೊಟ್ಟರೆ ಅದು ಸಂಘರ್ಷಕ್ಕೆ ದಾರಿಯಾಗುತ್ತದೆ. ಹು-ಧಾ ಮಹಾನಗರ ಪಾಲಿಕೆ ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಎಚ್ಚರಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ಲಾಂನಲ್ಲಿ ಅಲ್ಲಾ ಬಿಟ್ಟರೆ ಬೇರೆ ಯಾರನ್ನೂ ಪೂಜಿಸುವುದಿಲ್ಲ. ಜಯಂತಿ ಮಾಡುವುದೂ ಒಂದು ಪೂಜೆಯೇ ಎಂದು ಪ್ರಶ್ನಿಸಿದ ಅವರು, ಮುಸ್ಲಿಮರೇ ಜಯಂತಿ ಒಪ್ಪುವುದಿಲ್ಲ. ಆದರೆ ಕಾಂಗ್ರೆಸ್‌ ಕುಮ್ಮಕ್ಕಿನಿಂದ ಟಿಪ್ಪು ಜಯಂತಿ ಆಗುತ್ತಿದೆ ಎಂದು ಟೀಕಿಸಿದರು. 

ಟಿಪ್ಪು ಸುಲ್ತಾನ್‌ ಮತಾಂಧ, ದೇಶದ್ರೋಹಿ. ಓರ್ವ ಮತಾಂಧನ ಜಯಂತಿ ಆಚರಣೆ ಮಾಡಲು ಬಿಡುವುದಿಲ್ಲ. ಬಿಜೆಪಿ ಈಗಾಗಲೇ ಟಿಪ್ಪು ಜಯಂತಿ ಬ್ಯಾನ್‌ ಮಾಡಿದೆ. ಇಂತಹ ಜಯಂತಿಗೆ ಬಿಜೆಪಿ ಹೇಗೆ ಅನುಮತಿ ಕೊಡುತ್ತದೆ? ಒಂದು ವೇಳೆ ಕೊಟ್ಟರೆ ಮತ್ತೆ ಸಂಘರ್ಷಕ್ಕೆ ದಾರಿ ಆಗುತ್ತದೆ. ನಾವು ಪ್ರತಿಭಟಿಸುವುದೂ ನಿಶ್ಚಿತ ಎಂದರು. ಟಿಪ್ಪು ಸುಲ್ತಾನ್‌ ಸ್ವಾತಂತ್ರ್ಯ ಹೋರಾಟಗಾರನೂ ಅಲ್ಲ, ಮೈಸೂರು ಹುಲಿನೂ ಅಲ್ಲ. ಮಂದಿರಗಳನ್ನು ಒಡೆದ ಆತನಿಗೆ ಕರ್ನಾಟಕದಲ್ಲಿ ಗೌರವ ಸಲ್ಲಿಸಬಾರದು. ಗಣೇಶೋತ್ಸವ ಧಾರ್ಮಿಕ ಆಚರಣೆ ಆಗಿದ್ದರಿಂದ ಈದ್ಗಾದಲ್ಲಿ ಅವಕಾಶ ನೀಡಿದ್ದರು. ನಮಾಜ್‌ ಸಹ ಧಾರ್ಮಿಕ ಆಚರಣೆ. ಆದರೆ, ಈಗ ಟಿಪ್ಪು ಜಯಂತಿ ಕೇಳಿದ್ದಾರೆ. 

ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ: ಪ್ರಮೋದ್‌ ಮುತಾಲಿಕ್‌

ಅನುಮತಿ ಕೊಟ್ಟರೆ ನಾವು ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್‌, ಶಿವಾಜಿ ಜಯಂತಿಗೂ ಮೈದಾನ ಕೇಳಬೇಕಾಗುತ್ತದೆ. ಇಂತಹ ಸಂಘರ್ಷಕ್ಕೆ ಮಾಡಿಕೊಡಬಾರದು ಎಂದರು. ಶಾಲೆಗಳ ಧ್ಯಾನಕ್ಕೆ ಕಾಂಗ್ರೆಸ್‌ ವಿರೋಧ ಕುರಿತು ಪ್ರತಿಕ್ರಿಯಿಸಿದ ಅವರು, ಧ್ಯಾನ ಮಾನಸಿಕ ಏಕಾಗ್ರತೆಗೆ ಅನುಕೂಲ. ಅದು ಯೋಗದ ಒಂದು ಭಾಗ. ಯಾವುದೇ ಧರ್ಮಕ್ಕೆ ಸೇರಿದ್ದಲ್ಲ. ಪ್ರತಿಯೊಬ್ಬರೂ ಐದು ನಿಮಿಷ ಧ್ಯಾನ ಮಾಡಬೇಕು. ಇದನ್ನು ವಿರೋಧಿಸುವ ಸಿದ್ದರಾಮಯ್ಯ, ಬುದ್ಧಿಜೀವಿಗಳಿಗೆ ಬುದ್ಧಿಯೇ ಇಲ್ಲ. ಸಿದ್ದರಾಮಯ್ಯ ಪ್ರತಿಯೊಂದಕ್ಕೂ ವಿರೋಧ ಮಾಡುವ ಮೂಲಕ ತಮ್ಮ ಗೌರವ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳ ಮನಸ್ಸು ಅರಳಿಸುವ ಪ್ರಕ್ರಿಯೆ ವಿರೋಧಿಸುವ ಇವರಂತಹ ನೀಚರು ಯಾರೂ ಇಲ್ಲ. ವಿರೋಧಕ್ಕೆ ವಿರೋಧ ಮಾಡುವ ಪ್ರಕ್ರಿಯೆ ನಿಲ್ಲಿಸಲಿ ಎಂದರು.

ಜೀವ ಬೆದರಿಕೆಗೆ ಹೆದರುವ ಜಾಯಮಾನ ನನ್ನದಲ್ಲ: ಯಾವ ಜೀವ ಬೆದರಿಕೆ ಕರೆಗಳಿಗೂ ಹೆದರುವ ಅಥವಾ ಬಗ್ಗುವ ಜಾಯಮಾನ ನನ್ನದಲ್ಲ. ನನಗೆ ಇದೇನು ಹೊಸದಲ್ಲ. ನಾನು ಬದುಕಿರುವವರೆಗೆ ಹಿಂದುತ್ವದ ವೃತ ನಿರಂತರವಾಗಿ ನಡೆಯುತ್ತಿರುತ್ತದೆ. ಶ್ರೀರಾಮಸೇನೆಯ ಸಂಘಟನೆಯ ಕಾರ್ಯಗಳನ್ನು ನಿಲ್ಲಿಸುವ ಹುನ್ನಾರ ಯಾರಿಂದಲೂ ಸಾಧ್ಯವಿಲ್ಲ ಎಂದು ಶ್ರೀರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ ಮುತಾಲಿಕ್‌ ಹೇಳಿದರು. ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಸ್ಲಿಂರೊಂದಿಗೆ ವ್ಯಾಪಾರ ರದ್ದುಗೊಳಿಸಿ: ಪ್ರಮೋದ್‌ ಮುತಾಲಿಕ್‌

2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಖಂಡಿತವಾಗಿ ಸ್ಪರ್ಧಿಸಲಿದ್ದೇನೆ. ಇದು ನನ್ನ ಕೊನೆ ಪ್ರಯತ್ನ. ಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಾಜ್ಯದಲ್ಲಿ ಯಾವುದಾದರೂ ಕ್ಷೇತ್ರದಿಂದ ತಮ್ಮ ಸ್ಪರ್ಧೆ ನಿಶ್ಚಿತ ಎಂದು ಹೇಳಿದರು. ಶ್ರೀರಾಮ ಸೇನೆ ಸಾಂಸ್ಕೃತಿಕ ಹಾಗೂ ಹಿಂದು ಸಂಘಟಣೆಯಾಗಿದ್ದು, ಶ್ರೀರಾಮ ಸೇನೆಯಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಬದಲಾಗಿ ಯಾವುದೇ ಪಕ್ಷದ ಟಿಕೆಟ್‌ ಪಡೆಯದೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದರು.

click me!