
ವಿಧಾನಸಭೆ (ಫೆ.4): ‘ವಿಬಿ-ಜಿ ರಾಮ್ ಜಿ’ ವಿರುದ್ಧ ನಿರ್ಣಯ ಮಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುವಾಗ ಪ್ರತಿ ಮಾತಿಗೂ ಕೆಲ ಬಿಜೆಪಿ ಸದಸ್ಯರು ಮೂದಲಿಸಿ ಲೇವಡಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸದನದಲ್ಲಿ ತೀವ್ರ ವಾಗ್ವಾದ ಸೃಷ್ಟಿಯಾಯಿತು.
ಪರಿಣಾಮ ಸ್ಪೀಕರ್ ಅವರು ಕೆಲವರನ್ನು ಸದನದಿಂದ ಹೊರ ಹಾಕುವುದಾಗಿ ಎಚ್ಚರಿಕೆ ನೀಡಿದ ಪ್ರಸಂಗವೂ ನಡೆಯಿತು.
ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ನಿರ್ಣಯ ಮಂಡಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ನಿರ್ಣಯ ಮಂಡಿಸಲು ಒಂದು ವಾರಕ್ಕಿಂತ ಮೊದಲು ನೋಟಿಸ್ ನೀಡಬೇಕಾಗಿತ್ತು ಎಂದು ಬಿಜೆಪಿ ಸದಸ್ಯರು ಮೊದಲು ಗದ್ದಲ ಸೃಷ್ಟಿಸಿದರು.
ಈ ವೇಳೆ ಸ್ಪೀಕರ್ ಯು.ಟಿ.ಖಾದರ್, ಸರ್ಕಾರ ನಿರ್ಣಯ ಮಂಡಿಸುವುದನ್ನು ಮೊದಲೇ ತಿಳಿಸುವ ಅಗತ್ಯವಿಲ್ಲ. ಇದು ಈಗಾಗಲೇ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿರುವ ವಿಷಯ ಎಂದು ನಿರ್ಣಯ ಮಂಡನೆಗೆ ರೂಲಿಂಗ್ ನೀಡಿದರು.
ಸಿದ್ದರಾಮಯ್ಯ ಅವರು, ನಿರ್ಣಯದ ಮೇಲೆ ಮಾತನಾಡಲು ಮುಂದಾದಾಗ ಪ್ರತಿಪಕ್ಷ ಸದಸ್ಯರು ತೀವ್ರ ಗದ್ದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕೆಲ ಕಾಲ ಸದನ ಮುಂದೂಡಿ ಸ್ಪೀಕರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಯಿತು.
ಬಳಿಕ ಶುರುವಾದ ಕಲಾಪದಲ್ಲಿ ಸಿದ್ದರಾಮಯ್ಯ ಅವರು ಮಾತನಾಡುವ ಪ್ರತಿ ಮಾತಿಗೂ ಹಿಂಬದಿ ಸಾಲಿನಲ್ಲಿದ್ದ ಬಿಜೆಪಿ ಸದಸ್ಯರು ಹೂ...ಆ... ಎಂದು ಮೂದಲಿಸಿ ಅಶಿಸ್ತಿನಿಂದ ನಡೆದುಕೊಂಡರು.
ಇದಕ್ಕೆ ಸಿದ್ದರಾಮಯ್ಯ ಅವರು, ‘ನಮಗೂ ವ್ಯಂಗ್ಯವಾಗಿ ಮಾನಾಡಲು ಬರುತ್ತದೆ. ಅಡಚಣೆ ಮಾಡಲು ಬರುತ್ತದೆ. ಪ್ರತಿ ಶಾಸಕರು 2 ಲಕ್ಷ ಜನರನ್ನು ಪ್ರತಿನಿಧಿಸುತ್ತೀರಿ. ನಿಮ್ಮ ಕ್ಷೇತ್ರದ ಜನತೆ ನಿಮ್ಮ ನಡವಳಿಕೆ ನೋಡುತ್ತಿರುತ್ತಾರೆ. ಹೂ...ಆ... ಎನ್ನುವುದೇನು? ಸೌಜನ್ಯ, ಜವಾಬ್ದಾರಿ ಇಲ್ಲವೇ?’ ಎಂದು ತರಾಟೆಗೆ ತೆಗೆದುಕೊಂಡರು.
ಸಚಿವ ಬೈರತಿ ಸುರೇಶ್ ಸೇರಿ ಆಡಳಿತಪಕ್ಷದ ಸದಸ್ಯರು, ‘ಸಭಾನಾಯಕರಿಗೆ ಹೂ.. ಎಂದು ಅವಮಾನಿಸುತ್ತಿರುವವರನ್ನು ಹೊರಗೆ ಹಾಕಿ, ಅವರು ಪ್ರಾಣಿಗಳಿಗಿಂತ ಕಡೆಯಾಗಿ ನಡೆದುಕೊಳ್ಳುತ್ತಿದ್ದಾರೆ. ಸಭಾನಾಯಕರು ಮಾತನಾಡುವಾಗ ಆ ಶಬ್ದಗಳೇನು? ಜೋಕರ್ಗಳಂತೆ ವರ್ತಿಸುತ್ತಿದ್ದಾರಾ? ನೀವು ಇದನ್ನು ನಿರ್ಲಕ್ಷ್ಯ ಮಾಡಬಾರದು’ ಎಂದು ಸ್ಪೀಕರ್ ಅವರನ್ನು ಒತ್ತಾಯಿಸಿದರು.
ಈ ವೇಳೆ ಸ್ಪೀಕರ್ ಯು.ಟಿ.ಖಾದರ್, ಹಿಂದೆ ಕುಳಿತ ಕೆಲವರು ಪ್ರತಿ ಪದಕ್ಕೂ ಹೂ..ಆ... ಎಂದು ಶಬ್ದ ಮಾಡುತ್ತಿದ್ದಾರೆ. ವಿರೋಧಪಕ್ಷದ ನಾಯಕರು ತಿಳಿವಳಿಕೆ ಹೇಳಬೇಕು. ಇಲ್ಲದಿದ್ದರೆ ಹೊರಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಅವರ ಪ್ರತಿ ಮಾತಿಗೆ ಆಸನದಲ್ಲಿ ಕುಳಿತೇ ಮೂದಲಿಸುತ್ತಿದ್ದ ಬಿಜೆಪಿ ಸದಸ್ಯ ರಾಜೇಶ್ ನಾಯಕ್ರನ್ನು ಸ್ಪೀಕರ್ ಯು.ಟಿ.ಖಾದರ್ ತರಾಟೆಗೆ ತೆಗೆದುಕೊಂಡರು. ಎಚ್ಚರಿಕೆ ನೀಡಿದರೂ ನಡವಳಿಕೆ ತಿದ್ದಿಕೊಳ್ಳದ ರಾಜೇಶ್ ನಾಯಕ್ರನ್ನು ಸದನದಿಂದ ಹೊರ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ