Siddeshwara Swamiji: ಶ್ರೀಗಳ ಅಂತಿಮ ದರ್ಶನ ಮುಕ್ತಾಯ: ಅಂತ್ಯಕ್ರಿಯೆಗೆ ಕ್ಷಣಗಣನೆ

By Sathish Kumar KHFirst Published Jan 3, 2023, 5:48 PM IST
Highlights

ಶತಮಾನದ ಸಂತ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಕ್ಷಣದಿಂದಲೂ ಲಕ್ಷೋಪಲಕ್ಷ ಭಕ್ತರು ಮಠದತ್ತ ಧಾವಿಸಿ ಬಂದು ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಸರ್ಕಾರದ ವಿಧಿ ವಿಧಾನಗಳ ಅನ್ವಯ ಗೌರವ ಸಮರ್ಪಣೆ ಮಾಡಲಾಗಿದೆ. ಸಂಜೆ 7 ಗಂಟೆಯ ಒಳಗಾಗಿ ಅಂತ್ಯಕ್ರಿಯೆ ನೆರವೇರಿಸಲು ಮಠದ ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಿಜಯಪುರ (ಜ.03): ಶತಮಾನದ ಸಂತ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಕ್ಷಣದಿಂದಲೂ ಲಕ್ಷೋಪಲಕ್ಷ ಭಕ್ತರು ಮಠದತ್ತ ಧಾವಿಸಿ ಬಂದು ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಇಂದು ಬೆಳಗ್ಗೆಯಿಂದ ವಿಜಯಪುರ ಸೈನಿಕ ಶಾಲೆ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಸಂಜೆ 5 ಗಂಟೆ ವೇಳೆ ಸರ್ಕಾರದ ವಿಧಿ ವಿಧಾನಗಳ ಅನ್ವಯ ಗೌರವ ಸಮರ್ಪಣೆ ಮಾಡಲಾಗಿದೆ. ಸಂಜೆ 7 ಗಂಟೆಯ ಒಳಗಾಗಿ ಅಂತ್ಯಕ್ರಿಯೆ ನೆರವೇರಿಸಲು ಮಠದ ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇಂದು ಬೆಳಗ್ಗೆಯಿಂದಲೂ ಲಕ್ಷಾಂತರ ಭಕ್ತರು ಬಂದು ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಮಾಡಿದ್ದು, ಸಂಜೆ ವೇಳೆ ಪ್ರವೇಶ ದ್ವಾರವನ್ನು ಬಂದ್‌ ಮಾಡಿ ಸರ್ಕಾರಿ ವಿಧಿ ವಿಧಾನಗಳ ಅನ್ವಯ ಗೌರವ ಸಮರ್ಪಣೆ (ಹಾಡ್‌ ಆಫ್‌ ಹಾನರ್) ಮಾಡಲಾಯಿತು. ನಂತರ ಶ್ರೀಗಳ ದೇಹದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ತೆಗೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೌರವ ಧ್ವಜವನ್ನು ಮಠದ ಅಧ್ಯಕ್ಷರಿಗೆ ಹಸ್ತಾಂತರ ಮಾಡಿದರು. ನಂತರ ಸೈನಿಕ ಶಾಲೆಯ ಆವರಣದಿಂದ ಶ್ರೀಗಳ ದೇಹವನ್ನು ಜ್ಞಾನಯೋಗೇಶ್ವರ ಮಠದ ಆವರಣದವರೆಗೆ ಮೆರವಣಿಗೆ ಮಾಡಲಾಗುತ್ತದೆ. ನಂತರ ಅಲ್ಲಿ ಸರಳವಾಗಿ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Sri Siddeshwar swamiji: ಪ್ರವಚನದಿಂದ ಸನ್ಮಾರ್ಗ ತೋರಿದ ಮಹಾ ಸಂತ

ಶ್ರೀಗಳ ಇಚ್ಛೆಯಂಥೆ ಅಂತ್ಯಕ್ರಿಯೆ:  ಸಿದ್ದೇಶ್ವರ ಶ್ರೀಗಳು ಕಳೆದ 8 ವರ್ಷಗಳ ಹಿಂದೆಯೇ ತಮ್ಮ ಅಂತ್ಯಕ್ರಿಯೆ ಹೇಗಿರಬೇಕು ಎಂದು ಅಭಿವಂದನಾ ಪತ್ರವನ್ನು ಬರೆದಿಟ್ಟಿದ್ದರು. ಶ್ರೀಗಳ ಇಚ್ಛೆಯಂತೆ ಯಾವುದೇ ಸ್ಥಾವರ, ಗದ್ದುಗೆ ನಿರ್ಮಾಣ ಇಲ್ಲ. ಈಗ ಅಂತ್ಯಕ್ರಿಯೆಗಾಗಿ ತಾತ್ಕಾಳಿಕವಾಗಿ ಗದ್ದುಗೆ ನಿರ್ಮಾಣ ಮಾಡಿದ್ದು, ಅಂತ್ಯ ಸಂಸ್ಕಾರದ ಬಳಿಕ ಗದ್ದುಗೆ ತೆರವು ಮಾಡಲು ನಿರ್ಧರಿಸಲಾಗಿದೆ. ಶ್ರೀಗಳ ಕೋರಿಕೆಯಂತೆಯೇ ಅಂತಿಮ ವಿಧಿ ನಡೆಸಲು‌ ಸಿದ್ಧತೆ ಮಾಡಲಾಗಿದೆ. ಈಗ ಭಕ್ತರು ನಿರ್ಮಿಸಿರುವ ತಾತ್ಕಾಲಿಕ ಗದ್ದುಗೆಯ ಬಳಿ ರಂಗೋಲಿ ಬಿಡಿಸಿ ಗದ್ದುಗೆ ಅಂದಗೊಳಿಸಲಾಗಿದೆ.

ಗೋವಿನ ಕುಳ್ಳು ಸಂಗ್ರಹ: ಶ್ರೀಗಳ ಅಂತ್ಯ ಸಂಸ್ಕಾರಕ್ಕಾಗಿ ದೇಸಿ ಗೋವಿನ ತುಪ್ಪ, ಕುಳ್ಳುಗಳನ್ನು ತಂದು ಸಂಗ್ರಹ ಮಾಡಲಾಗಿದೆ. ಸುತ್ತಲೂ ಗೋಮೂತ್ರವನ್ನು ಸಿಂಪಡಣೆ ಮಾಡಲಾಗಿದೆ.  ಇನ್ನು ಅಂತ್ಯ ಕ್ರಿಯೆಗೆ ತಂದಿರುವ ದೇಸಿ ಹಸುವಿನ ಉತ್ಪನ್ನನ್ನು ಶ್ರೀಗಳ ಸಲಹೆಯಂತೆ ಉತ್ಪಾದನೆ ಮಾಡಲಾಗುತ್ತಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವೆ, ಸಚಿವರಾದ ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ, ಸ್ಪೀಕರ್ ಬಸವರಾಜ್ ಹೊರಟ್ಟಿ, ಮಾಜಿ ಸಚಿವ ಹೆಚ್.ಕೆ. ಪಾಟೀಲ್, ಡಿ.ಕೆ. ಶಿವಕುಮಾರ್, ಬಸವನಗೌಡ ಪಾಟೀಲ್‌ ಯತ್ನಾಳ್‌ ಸೇರಿ ಹಲವು ಜನಪ್ರತಿನಿಧಿಗಳು ಹಾಗೂ ನಾಡಿನ ವಿವಿಧ ಮಠಾಧೀಶರು ಹಾಜರಿದ್ದರು.

'ಮಾತು ಕಡಿಮೆಯಾಗಿದ್ದರೂ ಗೌರವ ಹೆಚ್ಚುವಂತಿರಬೇಕು' ಸಿದ್ದೇಶ್ವರ ಶ್ರೀ ಮಾತು ಮಾಣಿಕ್ಯ

ಮನಸಿಗೆ ನಾಟುವಂತೆ ಪ್ರವಚನ: ವೇದಗಳ ಸಾರವನ್ನು, ಬಸವಾದಿ ಶರಣರ ವಚನಗಳ ಆಶಯವನ್ನು ಕಥೆಗಳ ಮೂಲಕ ವಿವರಿಸಿ ಮಹಾನ್‌ ಉದಾತ್ತ ಚಿಂತನೆಗಳು, ಆದರ್ಶಗಳು ಮನಸಿಗೆ ನಾಟುವಂತೆ ಮಾಡುವ ಅದ್ಭುತ ಶಕ್ತಿ ಶ್ರೀಗಳಲ್ಲಿತ್ತು. ಆಡುಭಾಷೆಯಲ್ಲಿ, ಅತ್ಯಂತ ಸ್ಪಷ್ಟಉಚ್ಚಾರಣೆಯಲ್ಲಿ ಪ್ರವಚನ ನೀಡುತ್ತಿದ್ದ ಸಿದ್ದೇಶ್ವರರು ಭಕ್ತರು ತಲ್ಲೀನರಾಗುವಂತೆ ಮಾಡುತ್ತಿದ್ದರು. ದೃಷ್ಟಿಹರಿಸಿದಾಗ ಸಾಕ್ಷಾತ್‌ ದೈವಸ್ವರೂಪ, ಶಾಂತಸ್ವರೂಪ. ಅವರಿಂದ ದಿವ್ಯ ಮಾತುಗಳು ಮೊಳಗಿದಾಗಲಂತೂ ಸೂಜಿ ಬಿದ್ದರೂ ಸಪ್ಪಳಾಗದÜಂತೆ ಭಕ್ತಾದಿಗಳು ಶಾಂತ ಚಿತ್ತರಾಗಿರುತ್ತಿದ್ದರು. ವೇದ, ಉಪನಿಷತ್‌ಗಳ ಸಾರವನ್ನು ಸಹ ಕಥೆಯ ಮೂಲಕವೇ ಸರಳವಾಗಿ ಅರ್ಥೈಸುವ ಅದ್ಭುತ ಶಕ್ತಿಯನ್ನು ಶ್ರೀಗಳು ಹೊಂದಿದ್ದರು.

click me!