Siddeshwara Swamiji: ಕೊಪ್ಪಳ ಗವಿಮಠಕ್ಕೂ ಉಂಟು ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ನಂಟು

By Sathish Kumar KHFirst Published Jan 3, 2023, 3:08 PM IST
Highlights

ನಡೆದಾಡುವ ದೇವರೆಂದು ಖ್ಯಾತಿ ಪಡೆದಿದ್ದ ಹಾಗೂ ನಾಡು ಕಂಡ ಶ್ರೇಷ್ಠ ಸಂತ ಪೂಜ್ಯ ಸಿದ್ದೇಶ್ವರ ಶ್ರೀಗಳು ನಮ್ಮನ್ನಗಲಿದ್ದಾರೆ. ಇನ್ನು ಸಿದ್ದೇಶ್ವರ ಶ್ರೀಗಳು ಕೊಪ್ಪಳದ ಗವಿಮಠದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ವರದಿ- ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಪ್ಪಳ (ಜ.03): ನಡೆದಾಡುವ ದೇವರೆಂದು ಖ್ಯಾತಿ ಪಡೆದಿದ್ದ ಹಾಗೂ ನಾಡು ಕಂಡ ಶ್ರೇಷ್ಠ ಸಂತ ಪೂಜ್ಯ ಸಿದ್ದೇಶ್ವರ ಶ್ರೀಗಳು ನಮ್ಮನ್ನಗಲಿದ್ದಾರೆ. ಇನ್ನು ಸಿದ್ದೇಶ್ವರ ಶ್ರೀಗಳು ಕೊಪ್ಪಳದ ಗವಿಮಠದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಹಾಗಾದ್ರೆ ಬನ್ನಿ ಕೊಪ್ಪಳದ‌ ಗವಿಮಠದೊಂದಿಗೆ ಸಿದ್ದೇಶ್ವರ ಶ್ರೀಗಳ ನಂಟು ಹೇಗಿತ್ತು ಅನ್ನೋದನ್ನ ನೋಡೋಣ.

ಕೊಪ್ಪಳದ‌ ಗವಿಸಿದ್ದೇಶ್ವರ ಜಾತ್ರೆ ಧಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದಿದೆ.‌ ಇಂತಹ ಪ್ರಸಿದ್ಧ ಜಾತ್ರೆಯನ್ನು ಪ್ರತಿವರ್ಷ ಒಬ್ಬೊಬ್ಬ ಸಾಧಕರು ಉದ್ಘಾಟನೆ ಮಾಡುತ್ತಾರೆ.‌ಅದೇ ರೀತಿ 2017 ರ‌ ಜಾತ್ರೆಯನ್ನು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಉದ್ಘಾಟಿಸಿದ್ದರು. ಈ ವೇಳೆ ಶ್ರೀಗಳ ಜೊತೆಗೆ ಮಾಜಿ ಪ್ರಧಾನಿ ದೇವೆಗೌಡರು ಸಹ ಜಾತ್ರೆಗೆ ಚಾಲನೆ ನೀಡಿದ್ದರು. ಸಿದ್ದೇಶ್ವರ ಶ್ರೀಗಳು ಗವಿಮಠದ ಜಾತ್ರೆಗೆ ಮಾತ್ರ ಗವಿಮಠಕ್ಕೆ ಬಂದಿದ್ದಿಲ್ಲ. ಬದಲಾಗಿ ಇದಕ್ಕೂ ಪೂರ್ವದಲ್ಲಿ 2000 ವಿದ್ಯಾರ್ಥಿಗಳ ಉಚಿತ ವಸತಿ ನಿಲಯದ ಎರಡನೇ ಮಹಡಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದರು. ಇದರ ಜೊತೆಗೆ ಸಿದ್ದೇಶ್ವರ ಶ್ರೀಗಳು ಶಿಕ್ಷಣ ಕ್ಷೇತ್ರದ ವಿಚಾರ ಸಂಕಿರಣಕ್ಕೂ ಆಗಮಿಸಿದ್ದರು. ಈ ವೇಳೆ ತಮ್ಮ ಜ್ಞಾನದ ಮಾತುಗಳಿಂದ ನೆರೆದಿದ್ದ ಸಭಿಕರನ್ನು ಸಂತಸ ಪಡಿಸಿದ್ದರು.

 

ಸಮಾಧಿ, ಪ್ರತಿಮೆ ಬೇಡ, 8 ವರ್ಷದ ಹಿಂದೆ ಶ್ರೀಗಳು ಬರೆದಿದ್ದ ಪತ್ರದಂತೆ ಅಂತ್ಯಕ್ರಿಯೆ!

ಶತಮಾನದ ವ್ಯಕ್ತಿಗಳಿಗೆ ಹೋಲಿಕೆ: ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನಲೆಯಲ್ಲಿ ಅವರ ಬಗ್ಗೆ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಗಳು ಮಾತನಾಡಿ, ಸಿದ್ದೇಶ್ವರ  ಅಪ್ಪಾಜಿ ಅವರು ಈ ಶತಮಾನದ ವ್ಯಕ್ತಿಗಳು, ಯುಗಪುರುಷರು, ಅವರಿಗೆ ಯಾವುದೇ ಪಂತಗಳಿರಲಿಲ್ಲ, ಯಾವುದೇ ಗ್ರಂಥಕ್ಕೆ ಅಂಟಿಕೊಳ್ಳಲಿಲ್ಲ. ಆದರೆ ಜನರ ಹೃದಯ ಗ್ರಂಥಿಗಳಲ್ಲಿ ಸದಾ ಉಳಿದ ಸಂತ ವಸಂತರಾಗಿ ಸಿದ್ದೇಶ್ವರ ಅಪ್ಪಾಜಿ ಉಳಿದಿದ್ದಾರೆ. ಸಿದ್ದೇಶ್ವರ ಶ್ರೀಗಳು ಸುಳಿದೆಡೆಯಲ್ಲ ಸಂಯಮ, ಶಾಂತಿ, ಸಮಾಧಾನ ನೆಲೆಸುತ್ತಿತ್ತು. ಅವರ ನಿಂತ ನಿಲುವು ಸತ್ಯದ ಒಲವು, ಭ್ರಮೆಯಿಲ್ಲದ ಭಾವ, ಲೋಕವನ್ನು ಪ್ರೀತಿಸಿ, ಲೋಕಾಂತವನ್ನು ಪ್ರೀತಿಸಿ ತಾವು ಏಕಾಂತವಾಗಿ ಉಳಿದವರು. ಚಿಂತಗಳ ಮಧ್ಯೆ ನಿಶ್ಚಿಂತರಾಗಿ, ಜೀವನದಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ಸಿದ್ದೇಶ್ವರ ಶ್ರೀಗಳು ಕಲಿಸಿದ್ದಾರೆ ಎಂದು ಹೇಳಿದ್ದರು.

ಶ್ರೀಗಳ ಭೇಟಿಯ ಮೆಲುಕು: ಸಿದ್ದೇಶ್ವರ ಶ್ರೀಗಳ ಆರೋಗ್ಯ ಸರಿಯಿಲ್ಲದ ವೇಳೆಯಲ್ಲಿ ಗವಿಸಿದ್ದೇಶ್ವರ ಶ್ರೀಗಳು ಆರೋಗ್ಯ ವಿಚಾರಿಸಲು  ಹೋಗಿದ್ದರು. ಈ ವೇಳೆ ಅವರು ಎಲ್ಲ‌ ಸಾಧಕರನ್ನು  ಕೂಡಿಸಿಕೊಂಡರು. ಈ ವೇಳೆ ಹಲವು ವಿಮರ್ಶೆಗಳನ್ನು ಗುರುಗಳು ಮಾಡಿದರು. ಸಿದ್ದೇಶ್ವರ ಅಪ್ಪಾಜಿ ಅವರು ನನಗೆ ಏನಾದ್ರೂ ಹೇಳು ಅಂತಾ ಕೇಳಿದಾಗ ನಾನು ಕವಿಯೊಬ್ಬರ ಬಗ್ಗೆ ಎರಡು ಸಾಲು ಹೇಳಿದೆ. ಆ ಎರಡು ಸಾಲುಗಳ ಮೇಲೆ ಎಲ್ಲರೊಂದಿಗೆ ಒಂದೂವರೆ ತಾಸು ವಿಮರ್ಶೆ ಮಾಡಿದರು ಎಂದು ಗವಿಸಿದ್ದೇಶ್ವರ ಶ್ರೀಗಳು ನೆನೆಸಿಕೊಂಡರು.

Siddeshwara Swamiji: ‘ಬೇಕು’ ಎಂಬುದನ್ನೇ ಮರೆತು ‘ಬೇಡ’ ಎನ್ನುತ್ತಲೇ ಬದುಕಿದ ಸಂತ..!

ನಿತ್ಯ ಜ್ಞಾನದ ಕಾರ್ತಿಕೋತ್ಸವ ಆಚರಣೆ: ಸಿದ್ದೇಶ್ವರ ಶ್ರೀಗಳು ಸದಾ ಜ್ಞಾನವನ್ನು ಪ್ರೀತಿಸಿ ಜನರ ಮನಸ್ಸಿನಲ್ಲಿ ಜ್ಞಾನದ ದೀಪವನ್ನು ಹಚ್ಚಿದ್ದಾರೆ. ಅವರ ದೇಹ ದೂರವಾಗಿರಬಹುದು, ಅವರ ದೇಹ ಮಣ್ಣಿನಲ್ಲಿ ಮರೆಯಾದರೂ ಈ ನಾಡಿನ ಜನರ ಅಂತರಂಗದಲ್ಲಿ ಹಚ್ಚಿದ ದೀಪ ಶಾಂತವಾಗುವುದಿಲ್ಲ. ನಾವು ವರ್ಷಕ್ಕೊಮ್ಮೆ ಕಾರ್ತಿಕೋತ್ಸವ ಮಾಡಿದ್ದೇವೆ. ಆದರೆ ಸಿದ್ದೇಶ್ವರರು ಪ್ರತಿನಿತ್ಯ ಜ್ಞಾನದಾರತಿ ಮಾಡಿದ್ದಾರೆ. ಈ ಅವರು ಹೋದೆಡೆಯಲ್ಲಾ ಲಕ್ಷ ಲಕ್ಷ ಜನರು ಸೇರುತ್ತಿದ್ದರು. ಅವರು ಲಕ್ಷ ಜ್ಞಾನೋತ್ಸವ ಮಾಡುತ್ತಿದ್ದರು. ಅವರ ಬದುಕು ಒಂದು ನಿತ್ಯ ಕಾರ್ತಿಕೋತ್ಸವ ಆಗಿತ್ತು. 

ದೇವನ ಜಾತ್ರೆಗೆ ಅತಿಥಿಗಳಾಗಿ ಆಗಮನ: ಸಿದ್ದೇಶ್ವರರು ನಮ್ಮ ಕೊಪ್ಪಳ ಮಠದ ಜಾತ್ರೆಗೆ ಬಂದಾಗ ತುಂಬ ಸಂತೋಷ ಪಟ್ಟಿದ್ದರು. ಜಾತ್ರೆ ಬಗ್ಗೆ ಮಾತನಾಡಿದ್ದ ಅವರು ಈ ವಿಶ್ವವು ಸಹ ಒಂದು ದೇವನ ಜಾತ್ರೆ, ಈ ದೇವನ ಜಾತ್ರೆಗೆ ನಾವೆಲ್ಲ ಅತಿಥಿಗಳಾಗಿ ಬಂದಿದ್ದೀವಿ ಎಂದು ಕವಿ ರವೀಂದ್ರನ ಮಾತು ನೆನೆಪಿಸಿದರು. ನಮ್ಮೆಲ್ಲರ ಹುಟ್ಟು ಈ ಜಾತ್ರೆಯಲ್ಲಿ ದೇವನು ಕೊಟ್ಟ ಆಮಂತ್ರಣವಾಗಿದೆ. ಗವಿಸಿದ್ದೇಶ್ವರ ಎನ್ನುವುದು ಕೇವಲ ಗವಿಯಲ್ಲ ಜನರ ಹೃದಯವಿದು ಎಂದು ಸಿದ್ದೇಶ್ವರ ಅಪ್ಪಾಜಿ ವಿಸ್ತೃತವಾಗಿ ತಿಳಿಸಿದ್ದ ಘಟನೆಗಳ ಬಗ್ಗೆ ಕೊಪ್ಪಳ ಗವಿಮಠದ ಅಭಿನವ ಸ್ವಾಮೀಜಿ ಮೆಲುಕು ಹಾಕಿದರು

click me!