ಕಾಂಗ್ರೆಸಿಗರ ಮೇಲೆ ಕೇಸಿಗೆ ಸಿದ್ದು, ಡಿಕೆಶಿ ಕಿಡಿ

By Kannadaprabha NewsFirst Published Oct 15, 2020, 10:11 AM IST
Highlights

ಕಾಂಗ್ರೆಸಿಗರ ಮೇಲೆ ಪ್ರಕರಣ ದಾಖಲಾಗಿರುವ ಸಂಬಂಧ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ,

ಬೆಂಗಳೂರು (ಅ.15): ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್‌ನವರ ಪಾತ್ರ ಏನೂ ಇಲ್ಲ. ರಾತ್ರೋರಾತ್ರಿ ಪ್ರಕರಣದಲ್ಲಿ ಕೆಲ ಕಾಂಗ್ರೆಸ್ಸಿಗರ ಹೆಸರು ಸೇರಿಸಿ ವಿಚಾರಣೆಗೆ ಕರೆಸಿ ಬಿಜೆಪಿ ಸರ್ಕಾರ ಬೆದರಿಸುವ ತಂತ್ರ ಮಾಡುತ್ತಿದೆ. ಇದಾವುದಕ್ಕೂ ಜಗ್ಗುವುದಿಲ್ಲ ಎಂದು ಕಾಂಗ್ರೆಸ್‌ ನಾಯಕರು ಕಿಡಿ ಕಾರಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ರೀತಿಯ ಬೆದರಿಕೆ ತಂತ್ರ ಹೆಚ್ಚುದಿನ ನಡೆಯುವುದಿಲ್ಲ. ಇಂತಹದ್ದಕ್ಕೆಲ್ಲಾ ಹೆದರುವುದಿಲ್ಲ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಮುನಿರತ್ನ ಆಸ್ತಿ ಮೊತ್ತ ಎಷ್ಟಿದೆ..? ಕ್ರಿಮಿನಲ್ ಕೇಸು ಇದೆ ..

ಡಿ.ಕೆ.ಶಿವಕುಮಾರ್‌ ಮಾತನಾಡಿ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಾಟೆಯಲ್ಲಿ ಕಾಂಗ್ರೆಸ್ಸಿಗರ ಪಾತ್ರವಿಲ್ಲ. ಕಾಂಗ್ರೆಸ್ಸೇತರರಿಂದ ನಡೆದಿರುವ ಈ ಗಲಾಟೆ ಪ್ರಕರಣದಲ್ಲಿ ರಾತ್ರೋರಾತ್ರಿ ಕಾಂಗ್ರೆಸ್ಸಿಗರ ಹೆಸರು ಸೇರಿಸಿ ವಿಚಾರಣೆಗೆ ಕರೆಸಲಾಗಿದೆ. ಆ ಮೂಲಕ ಬಿಜೆಪಿ ಸರ್ಕಾರ ಬೆದರಿಕೆ ತಂತ್ರ ಅನುಸರಿಸುತ್ತಿದೆ. ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದರು.

ಗಲಭೆ ಪ್ರಕರಣಕ್ಕೆ ಪೊಲೀಸರ ವೈಫಲ್ಯವೇ ಕಾರಣ. ಫೇಸ್ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿದ್ದ ನವೀನ್‌ನನ್ನು ಕೂಡಲೇ ಬಂಧಿಸಿ ಎಫ್‌ಐಆರ್‌ ಹಾಕಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ. ಎಫ್‌ಐಆರ್‌ ಮಾಡಲು ವಿಳಂಬ ಮಾಡಿದ್ದರಿಂದ ಜನ ರೊಚ್ಚಿಗೆದ್ದು ಸ್ಥಳ​ದಲ್ಲಿ ನಡೆಸಿದ ಘಟನೆ ಅದು. ಇದಕ್ಕೆ ಬೇರೆ ಬಣ್ಣ ಕಟ್ಟುವುದು ಸರಿಯಲ್ಲ ಎಂದರು.

ಸಿದ್ದರಾಮಯ್ಯ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ನಡೆದ ಬಳಿಕ ನಮ್ಮ ಪಕ್ಷದ ಶಾಸಕರಾದ ರಿಜ್ವಾನ್‌ ಅರ್ಷದ್‌ ಮತ್ತು ಜಮೀರ್‌ ಅಹ್ಮದ್‌ ಖಾನ್‌ ಅವರು ಗಲಭೆ ದಿನ ಸ್ಥಳಕ್ಕೆ ಹೋಗಿದ್ದರು ಎಂಬ ಕಾರಣಕ್ಕೆ ಎನ್‌ಐಎನವರು ಕರೆಸಿ ಹೇಳಿಕೆ ಪಡೆದಿರಬಹುದು. ಗಲಭೆಗೂ ಕಾಂಗ್ರೆಸ್ಸಿಗರಿಗೂ ಸಂಬಂಧವಿಲ್ಲ. ಗಲಭೆ ನಡೆದ ದಿನ ಆ ಇಬ್ಬರು ಶಾಸಕರಿಗೆ ಸ್ಥಳಕ್ಕೆ ಹೋಗಲು ಫೋನ್‌ ಮಾಡಿ ಹೇಳಿದವರು ಗೃಹ ಸಚಿವ ಬಸವರಾಜ ಬೊಮ್ಮಾಯಿ. ಸ್ಥಳಕ್ಕೆ ಹೋಗಿ ಉದ್ರಿಕ್ತ ಜನರನ್ನು ಸಮಾಧಾನ ಮಾಡಿ ಎಂದು ಕರೆ ಮಾಡಿದ್ದಕ್ಕೆ ಅವರು ಹೋಗಿದ್ದರು. ಇಲ್ಲ ಎಂದು ಬೊಮ್ಮಾಯಿ ಹೇಳಲಿ ಎಂದರು.

ಪೊಲೀ​ಸರ ವೈಫ​ಲ್ಯ ಕಾರಣ

ಗಲಭೆಗೆ ಪೊಲೀಸರ ವೈಫಲ್ಯವೇ ಕಾರಣ. ಫೇಸ್ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿದ್ದ ನವೀನ್‌ನನ್ನು ಕೂಡಲೇ ಬಂಧಿಸಿ ಎಫ್‌ಐಆರ್‌ ಹಾಕಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ.

- ಡಿ.ಕೆ.​ಶಿ​ವ​ಕು​ಮಾರ್‌, ಕೆಪಿ​ಸಿಸಿ ಅಧ್ಯಕ್ಷ

ಬೊಮ್ಮಾಯಿ ಕಳು​ಹಿ​ಸಿ​ದ್ದ​ರು

ಗಲಭೆ ದಿನ ಇಬ್ಬರು ಶಾಸಕರಿಗೆ ಸ್ಥಳಕ್ಕೆ ಹೋಗಲು ಹೇಳಿದವರು ಗೃಹ ಸಚಿವ ಬಸವರಾಜ ಬೊಮ್ಮಾಯಿ. ಉದ್ರಿಕ್ತರನ್ನು ಸಮಾಧಾನ ಮಾಡಿ ಎಂದು ಕರೆ ಮಾಡಿದ್ದಕ್ಕೆ ಅವರು ಹೋಗಿದ್ದರು.

- ಸಿದ್ದ​ರಾ​ಮಯ್ಯ, ವಿರೋಧ ಪಕ್ಷದ ನಾಯ​ಕ

click me!