ಬೆಟ್ಟ ಕುರುಬ ಸಮುದಾಯ STಗೆ ಸೇರ್ಪಡೆ: ತುಂಬು ಹೃದಯದಿಂದ ಸ್ವಾಗತಿಸಿದ ಸಿದ್ದು, ಬಿಎಸ್‌ವೈ

By Ramesh BFirst Published Sep 14, 2022, 10:43 PM IST
Highlights

ರಾಜ್ಯದ ಬೆಟ್ಟ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಇನ್ನು ಈ ತೀರ್ಮಾನಕ್ಕೆ ಸಿದ್ದರಾಮಯ್ಯ, ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು ಹೀಗೆ...

ನವದೆಹಲಿ, (ಸೆಪ್ಟೆಂಬರ್.14): ಕರ್ನಾಟಕದ ಬೆಟ್ಟ ಕುರುಬ ಸಮುದಾಯ ಸೇರಿದಂತೆ ಒಟ್ಟು 12 ಜಾತಿಗಳನ್ನು  ಪರಿಶಿಷ್ಟ ಪಂಗಡದ (Scheduled Tribe) ಪಟ್ಟಿಗೆ ಸೇರಿಸಲು ಕೇಂದ್ರ ಸಚಿವ ಸಂಪುಟ ಇಂದು(ಬುಧವಾರ) ಒಪ್ಪಿಗೆ ಸೂಚಿಸಿದೆ. 

ಇದೇ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ಸಿರ್ಮೌರ್ ಪ್ರದೇಶದಲ್ಲಿ ವಾಸಿಸುತ್ತಿರುವ ಹಟ್ಟಿ ಸಮುದಾಯ, ತಮಿಳುನಾಡಿನ ನಾರಿಕುರವರ್ ಸೇರಿದಂತೆ ಒಟ್ಟು ಐದು ರಾಜ್ಯಗಳ ಅಧಿಸೂಚಿತ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಹಲವು ಬುಡಕಟ್ಟುಗಳನ್ನು ಸೇರಿಸುವ ಪ್ರಸ್ತಾವವನ್ನೂ ಒಪ್ಪಿಕೊಂಡಿದೆ. 

ವಾಲ್ಮೀಕಿ ಸಮುದಾಯಕ್ಕೆ ಶೀಘ್ರ ಸಿಹಿ ಸುದ್ದಿ: ಸಚಿವ ರಾಮುಲು

ಸಿದ್ದರಾಮಯ್ಯ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ್ದು, ಬೆಟ್ಟ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿರುವ ಕೇಂದ್ರ ಸರ್ಕಾರದ ನಿರ್ಣಯವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಈ ಸಮುದಾಯದ ಬಹುಕಾಲದ ಬೇಡಿಕೆಯಂತೆ ನಮ್ಮ ಸರ್ಕಾರ ಮೈಸೂರಿನ ಬುಡಕಟ್ಟು ಅಧ್ಯಯನ ಸಂಸ್ಥೆಯಿಂದ ಕುಲಶಾಸ್ತ್ರೀಯ ಅಧ್ಯಯನ ನಡೆಸಿತ್ತು. ಅದರ ಶಿಫಾರಸಿನ ಆಧಾರದಲ್ಲಿ ಕಾಡು ಕುರುಬ ಜಾತಿ ಸೂಚಕಕ್ಕೆ ಸಮನಾರ್ಥ ಹೊಂದಿರುವ ಬೆಟ್ಟಕುರುಬರನ್ನು ಕೂಡಾ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಸುಮಾರು ಎರಡುವರೆ ವರ್ಷಗಳ ನಂತರ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.
 
 ಇಲ್ಲಿಯ ವರೆಗೆ ಮೀಸಲಾತಿ ಸೌಲಭ್ಯದಿಂದಲೇ ವಂಚಿತರಾಗಿದ್ದ ಬೆಟ್ಟ ಕುರುಬ ಸಮುದಾಯದ ಜನ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯ ಲಾಭ ಪಡೆದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅವಕಾಶ-ಪ್ರಾತಿನಿಧ್ಯ ಪಡೆದು ಬೆಳೆಯಲಿ ಎಂದು ಆಶಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡದಿದ್ದರೆ ಸರ್ಕಾರಕ್ಕೆ ತಕ್ಕ ಪಾಠ: ಕೂಡಲ ಶ್ರೀ

ಮೋದಿಗೆ ಬಿಎಸ್‌ವೈ ಅಭಿನಂದನೆ
ರಾಜ್ಯದ ಬೆಟ್ಟಕುರುಬ(Betta Kuruba) ಸೇರಿದಂತೆ ಒಟ್ಟು 12 ಜಾತಿಗಳನ್ನು ಪರಿಶಿಷ್ಟ ಪಂಗಡಗಳ ವರ್ಗಕ್ಕೆ ಸೇರ್ಪಡೆಗೊಳಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ  ಟ್ವೀಟ್‌ ಮಾಡಿ  ಮಹತ್ವದ ನಿರ್ಧಾರವನ್ನು ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ(Narendra Modi) ಸರ್ಕಾರವನ್ನು ಅಭಿನಂದಿಸಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ, ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸಂಪುಟ ಸಭೆಯಲ್ಲಿ ನಮ್ಮ ರಾಜ್ಯದ ಬೆಟ್ಟಕುರುಬ ಸೇರಿದಂತೆ ಒಟ್ಟು 12 ಜಾತಿಗಳನ್ನು ಪರಿಶಿಷ್ಟ ಪಂಗಡಗಳ ವರ್ಗಕ್ಕೆ ಸೇರ್ಪಡೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿರುವುದು ಸ್ವಾಗತಾರ್ಹ. ಆ ಮೂಲಕ ಸಮುದಾಯಗಳ ಬಹುದಿನಗಳ ಬೇಡಿಕೆ ಈಡೇರಿಸಿದಂತಾಗಿದ್ದು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಇಂದು ಪ್ರಧಾನಿ ಶ್ರೀ ರವರ ನೇತೃತ್ವದ ಸಂಪುಟ ಸಭೆಯಲ್ಲಿ ನಮ್ಮ ರಾಜ್ಯದ ಬೆಟ್ಟಕುರುಬ ಸೇರಿದಂತೆ ಒಟ್ಟು 12 ಜಾತಿಗಳನ್ನು ಪರಿಶಿಷ್ಟ ಪಂಗಡಗಳ ವರ್ಗಕ್ಕೆ ಸೇರ್ಪಡೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿರುವುದು ಸ್ವಾಗತಾರ್ಹ. ಆಮೂಲಕ ಸಮುದಾಯಗಳ ಬಹುದಿನಗಳ ಬೇಡಿಕೆ ಈಡೇರಿಸಿದಂತಾಗಿದ್ದು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

— B.S.Yediyurappa (@BSYBJP)
click me!