
ಬೆಂಗಳೂರು (ಮಾ.20) : ಕೋಮುಗಲಭೆ ಸೃಷ್ಟಿಸಲು ಹಾಗೂ ಧರ್ಮಗಳ ನಡುವೆ ದ್ವೇಷ ಬಿತ್ತಲು ಸಂಚು ರೂಪಿಸಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ನಿಷೇಧಿತ ಪಿಎಫ್ಐ (Popular Front of India)ದ 15 ಮಂದಿ ಮುಖಂಡರ ವಿರುದ್ಧ ಎನ್ಐಎ(NIA) ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಲಾಗಿದೆ. ಅದರಲ್ಲಿ, ಕರ್ನಾಟಕದ ಪಿಎಫ್ಐ ಕಾರ್ಯಕರ್ತರಿಗೆ ಕೇರಳದ ನಿವೃತ್ತ ಪೊಲೀಸರನ್ನು ಕರೆಸಿ ಶಸ್ತ್ರಾಸ್ತ್ರ ತರಬೇತಿ ಕೊಡಿಸಲಾಗುತ್ತಿತ್ತು ಎಂಬ ಆಘಾತಕಾರಿ ಸಂಗತಿಯಿದೆ.
ಕಳೆದ ಸೆಪ್ಟೆಂಬರ್ನಲ್ಲಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ(KG Halli Police station)ಯಲ್ಲಿ 19 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಈ ಪೈಕಿ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ 15 ಮಂದಿಯನ್ನು ಬಂಧಿಸಲಾಗಿತ್ತು. ಬಳಿಕ ಈ ಪ್ರಕರಣವನ್ನು ಎಸಿಪಿ ದರ್ಜೆ ಅಧಿಕಾರಿ ತನಿಖೆ ನಡೆಸುತ್ತಿದ್ದರು. ಇದೀಗ ತನಿಖೆ ಪೂರ್ಣಗೊಳಿಸಿ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ 10,196 ಪುಟಗಳ ದೋಷಾರೋಪಪಟ್ಟಿಸಲ್ಲಿಸಲಾಗಿದೆ. ಬಂಧಿತ 15 ಆರೋಪಿಗಳ ಪೈಕಿ 9 ಕಾರ್ಯಕರ್ತರ ವಿರುದ್ಧ ಯುಎಪಿಎ ಕಾಯ್ದೆ ಜಾರಿ ಮಾಡಿದ್ದು, ಉಳಿದ ಆರು ಮಂದಿ ವಿರುದ್ಧ ಐಪಿಸಿ 153ಎ ಅಡಿ ಆರೋಪಪಟ್ಟಿಸಲ್ಲಿಸಲಾಗಿದೆ.
ಮೊದಲು ದಕ್ಷಿಣ ಭಾರತ ವಶ, ನಂತರ ಉತ್ತರದ ಮೇಲೆ ದಾಳಿ: ನಿಷೇಧಿತ ಪಿಎಫ್ಐ ಸ್ಫೋಟಕ ಸಂಚು ಬಯಲು!
ಕೇರಳದಲ್ಲಿ ಪಿಎಫ್ಐ ಬಲಗೊಳಿಸಿದ ಮಾದರಿಯಲ್ಲಿ ರಾಜ್ಯದಲ್ಲಿ ಸಂಘಟನೆ ಬೆಳೆಸಲು ಆರೋಪಿಗಳು ಜಿಲ್ಲಾ ಮಟ್ಟದಲ್ಲಿ ಟಾಸ್್ಕ ಪೋರ್ಸ್ ಸಮಿತಿ ರಚಿಸಿ ಮುಸ್ಲಿಂ ಸಮುದಾಯದ ಯುವಕರನ್ನು ಸೆಳೆಯುತ್ತಿದ್ದರು. ಸಭೆಗಳಲ್ಲಿ ಕೋಮು ಗಲಭೆ, ಅನ್ಯಧರ್ಮಗಳ ವಿರುದ್ಧ ಹೋರಾಟಕ್ಕೆ ಪ್ರಚೋದಿಸುತ್ತಿದ್ದರು. ಕೇರಳ ಮತ್ತು ತಮಿಳುನಾಡು ಗಡಿ ಭಾಗದ ಅರಣ್ಯಪ್ರದೇಶಗಳಲ್ಲಿ ತರಬೇತಿ ಶಿಬಿರ ಏರ್ಪಡಿಸಿ, ಯುವಕರಿಗೆ ಶಸ್ತ್ರಾಸ್ತ್ರ ಬಳಕೆ ಸೇರಿದಂತೆ ಹಲವು ರೀತಿಯ ತರಬೇತಿ ಕೊಡಿಸುತ್ತಿದ್ದರು. ಈ ಶಿಬಿರಗಳಿಗೆ ಕೇರಳದ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಕರೆಸಿ ತರಬೇತಿ ಕೊಡಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ