ಶಿರೂರು ಗುಡ್ಡ ಕುಸಿತ ದುರಂತ: 3 ಜನ, ಲಾರಿ ತಲಾಶ್‌ ಸ್ಥಗಿತ, 13 ದಿನ ಹುಡುಕಿದರೂ ಫಲವಿಲ್ಲ

Published : Jul 29, 2024, 12:34 PM ISTUpdated : Jul 29, 2024, 02:54 PM IST
ಶಿರೂರು ಗುಡ್ಡ ಕುಸಿತ ದುರಂತ: 3 ಜನ, ಲಾರಿ ತಲಾಶ್‌ ಸ್ಥಗಿತ, 13 ದಿನ ಹುಡುಕಿದರೂ ಫಲವಿಲ್ಲ

ಸಾರಾಂಶ

ಪ್ರತಿಕೂಲ ಹವಾಮಾನದಿಂದಾಗಿ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಸಮೀಪದ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 

ಕಾರವಾರ (ಜು.29): ಪ್ರತಿಕೂಲ ಹವಾಮಾನದಿಂದಾಗಿ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಸಮೀಪದ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಗಂಗಾವಳಿ ನದಿಯ ನೀರಿನ ವೇಗ ಹೆಚ್ಚಿರುವುದು ಕಾರ್ಯಾಚರಣೆಗೆ ತೊಡಕಾಗಿದ್ದು, ನದಿಯ ವೇಗ, ನೀರು ಕಡಿಮೆಯಾದ ಮೇಲೆ ಮತ್ತೆ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ. ತೀವ್ರ ಮಳೆಗೆ ಜು.16ರಂದು ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿ, 11 ಜನರು ಕಣ್ಮರೆಯಾಗಿದ್ದರು. ಈ ಪೈಕಿ, 8 ಮಂದಿಯ ಮೃತದೇಹ ಪತ್ತೆಯಾಗಿದ್ದು, ಇನ್ನೂ ಮೂವರಿಗಾಗಿ ಶೋಧ ಕಾರ್ಯ ನಡೆದಿದೆ. 

ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಜೊತೆ ಕಾರ್ಯಾಚರಣೆಗೆ ಮಿಲಿಟರಿ ನೆರವನ್ನು ಕೂಡ ಪಡೆಯಲಾಗಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ತಂಡ, ಸ್ಥಳೀಯ ಮೀನುಗಾರರು ಕೂಡ ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, 13 ದಿನಗಳ ಸತತ ಕಾರ್ಯಾಚರಣೆ ಬಳಿಕವೂ ನಾಪತ್ತೆಯಾಗಿರುವ ಕೇರಳದ ಲಾರಿ ಚಾಲಕ ಅರ್ಜುನ್, ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕಅವರ ಪತ್ತೆಯಾಗಿಲ್ಲ. ದೊರೆತ ಎಲ್ಲ ಎಂಟೂ ಶವಗಳು ಸಮುದ್ರ, ನದಿ ತೀರದಲ್ಲಿ ಪತ್ತೆಯಾಗಿದ್ದೇ ಹೊರತು ಕಾರ್ಯಾಚರಣೆಯಿಂದ ದೊರಕಿರಲಿಲ್ಲ. ಲಾರಿ ಇದೆ ಎಂದು ಗುರುತಿಸಲಾದ ನಾಲ್ಕು ಪಾಯಿಂಟ್‌ಗಳಲ್ಲಿ ಸಾಹಸದಿಂದ ಡೈವ್ ಮಾಡಿದರೂ ಏನೂ ಪತ್ತೆಯಾಗಿಲ್ಲ.

ಗಂಗಾವಳಿ ನದಿಯಲ್ಲಿ 8 ನಾಟ್ಸ್ ವೇಗದಲ್ಲಿ ಹರಿಯುತ್ತಿರುವ ನೀರಿನಿಂದಾಗಿ ಡೈವ್ ಮಾಡುವುದು ಕಷ್ಟವಾಗಿದೆ. ಮಳೆಗಾಲವಾದ್ದರಿಂದ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗಿದ್ದು, ನದಿಯ ಆಳದಲ್ಲಿ ಯಾವುದೂ ಗೋಚರವಾಗುತ್ತಿಲ್ಲ. ಬೃಹದಾಕಾರದ ಬಂಡೆಗಳು, ಭಾರಿ ಪ್ರಮಾಣದ ಮಣ್ಣು, ಗಿಡ ಮರಗಳು ಬಿದ್ದುಕೊಂಡಿದ್ದರಿಂದ ನಾಪತ್ತೆಯಾದ ಲಾರಿಯ ಕುರುಹೂ ಸಿಗುತ್ತಿಲ್ಲ. ಹೂಳು ತುಂಬಿಕೊಂಡಿರುವುದೂ ಕಾರ್ಯಾಚರಣೆಗೆ ಕಷ್ಟವಾಗಿದೆ. ಇವೆಲ್ಲವುಗಳಿಂದಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಶಿರೂರು ಗುಡ್ಡ ಕುಸಿತ ದುರಂತ: ಇನ್ನೂ ಪತ್ತೆಯಾಗದ ಲಾರಿ, ದೇಹ

ಸದ್ಯಕ್ಕೆ ಪ್ರತಿಕೂಲ ಪರಿಸ್ಥಿತಿ ಇರುವುದರಿಂದ ಏನು ಮಾಡಲೂ ಸಾಧ್ಯವಾಗುತ್ತಿಲ್ಲ. ಮುಂದೆ ಮಳೆ ಕಡಿಮೆಯಾಗಿ ನೀರಿನ ಹರಿವಿನ ವೇಗ ಇಳಿದಲ್ಲಿ ಮತ್ತೆ ಕಾರ್ಯಾಚರಣೆ ಮುಂದುವರಿಸುತ್ತೇವೆ.
- ಮಂಕಾಳು ವೈದ್ಯ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ