ಪುರುಷ ಸರಸ್ವತೀ ಆರ್. ಗಣೇಶ್‌ಗೆ ಕೇಂದ್ರ ಸಂಸ್ಕೃತ ವಿವಿ ಗೌರವ ಡಾಕ್ಟರೇಟ್ ಪ್ರದಾನ

By Suvarna NewsFirst Published Mar 9, 2024, 12:30 PM IST
Highlights

ಕನ್ನಡ ನಾಡಿನಲ್ಲಿ ಶತವಧಾನಿ ಎಂದೆ ನೆನಪಾಗುವ ಆರ್.ಗಣೇಶ್ ಅವರು ಮುಡಿಗೆ ಮತ್ತೊಂದು ಗರಿ ಸೇರಿದ್ದು, ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದ್ದಾರೆ. 

ನಮ್ಮ ಕನ್ನಡ ನಾಡಿನ ಹೆಮ್ಮೆಯ ಪುರುಷ ಸರಸ್ವತೀ ಅಂತಲೇ ಜನಮಾನಸದಲ್ಲಿ ಗೌರವಿಸುವ, ಬಹು ಭಾಷಾ ಪಂಡಿತರೂ, ಅನೇಕ ಶಾಸ್ತ್ರ ಕೋವಿದರೂ, ಅವಧಾನ ಕಲೆಯನ್ನು ಜೀವಂತಗೊಳಿಸಿರುವವರೂ ಆದ ಡಾ. ಶತಾವಧಾನಿ ಆರ್ ಗಣೇಶ್ ಅವರಿಗೆ ಈಗ ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ದೊರೆತಿದೆ. ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಂದ ಡಾಕ್ಟರೇಟ್ ಪುರಸ್ಕಾರ ನೀಡಲಾಯಿತು.

ಶತಾವಧಾನಿ ಡಾ. ಆರ್ ಗಣೇಶ್ ಅವರು ಮೂಲತ: ಕೋಲಾರದವರು. ಅಧ್ಯಯನ ತಪಸ್ಸಿಗಾಗೇ ಹುಟ್ಟಿದವರೇನೋ ಎನ್ನುಸುತ್ತದೆ ಅವರ ಹಿನ್ನೆಲೆಯನ್ನು ತಿಳಿದರೆ. ಬಾಲ್ಯದಿಂದಲೂ ಓದಿನಲ್ಲಿ ಆಸಕ್ತಿ. ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲ. ಲೌಕಿಕವಾಗಿ ಅವರು ಓದಲಿಕ್ಕೆ ಆಯ್ದುಕೊಂಡದ್ದು ಲೋಹಶಾಸ್ತ್ರ, ಯಂತ್ರಶಾಸ್ತ್ರಗಳನ್ನ ಆದ್ರೆ ಜೀವನಾನಂದ ಕಂಡುಕೊಂಡದ್ದು ಕಲೆಯಲ್ಲಿ, ತತ್ವದಲ್ಲಿ. ತತ್ವ ದರ್ಶನ ಅವರನ್ನು ವಿಶೇಷ ತಪಸ್ಸಿಗೆ ತೊಡಗಿಸಿತು. ಹೀಗಾಗಿ ಸಮಗ್ರ ಅಧ್ಯಯನಕ್ಕೆ ತೊಡಗಿದರು. ಅವರ ಅಧ್ಯಯನ ಕ್ಷೇತ್ರಗಳನ್ನು ಗಮನಿಸಿದರೆ ಅವರು ಓದದ ಕ್ಷೇತ್ರಗಳೇ ಇಲ್ಲ ಎನಿಸುತ್ತದೆ.  ವೇದ, ವೇದಾಂಗ, ಉಪವೇದ, ದರ್ಶನಗಳು, ಆಗಮ, ಪುರಾಣ, ಧರ್ಮಶಾಸ್ತ್ರ, ಅರ್ಥಶಾಸ್ತ್ರ, ಸೂಪಶಾಸ್ತ್ರ, ಸಾಹಿತ್ಯ ಶಾಸ್ತ್ರ, ಇತಿಹಾಸ, ಕಾವ್ಯ, ವ್ಯಾಕರಣ, ವಿಜ್ಞಾನ, ನೃತ್ಯ (Dance), ನಾಟಕ, ಯಕ್ಷಗಾನ, ತಂತ್ರಜ್ಞಾನ (Technology), ಸಂಗೀತ (Music), ಯಂತ್ರಶಾಸ್ತ್ರ, ಗಣಿತ ಶಾಸ್ತ್ರ (Maths), ಖಗೋಳ ಶಾಸ್ತ್ರ, ಕಾವ್ಯ ಮೀಮಾಂಸೆ, ಛಂದ:ಶಾಸ್ತ್ರ, ಭಾಷಾ ಮೀಮಾಂಸೆ, ದರ್ಶನ ಶಾಸ್ತ್ರ, ಧರ್ಮ ಶಾಸ್ತ್ರ, ಕಲಾ ಮೀಮಾಂಸೆ, ಇತಿಹಾಸ, ಸಸ್ಯಶಾಸ್ತ್ರ, ಭೌತ ಶಾಸ್ತ್ರ, ರಸಾಯನ ಶಾಸ್ತ್ರ, ಜ್ಯೋತಿಷ, 18 ಪುರಾಣಗಳನ್ನೂ 2 ಕ್ಕಿಂತ ಹೆಚ್ಚುಬಾರಿ ಓದಿದ್ದಾರೆ. ಬೌದ್ಧ, ಜೈನ ಅನ್ಯಮತಗಳ ಗ್ರಂಥಗಳನ್ನೂ ಅಧ್ಯಯನ ಮಾಡಿದ್ದಾರೆ. ಈ ಅಗಾಧ ಪಾಂಡಿತ್ಯಕ್ಕಾಗಿಯೇ ಅವರನ್ನು ಪುರುಷ ಸರಸ್ವತಿ ಎನ್ನುತ್ತಾರೆ.



ಜ್ಞಾನಕ್ಕೆ ಪರಿಭಾಷೆ ಶತವಧಾನಿ ಆರ್ ಗಣೇಶ್, ಸರ್ವವನ್ನೂ ಅರಿತ ಜ್ಞಾನಿಗೆ ಜನ್ಮ ದಿನದ ಶುಭಾಶಯಗಳು!

ಇವೆಲ್ಲವುಗಳ ಜೊತೆ ಅವಧಾನ ಕಲೆ ಇಂದು ಕನ್ನಡದಲ್ಲಿ ಜೀವಂತವಾಗಿದೆ ಆರ್ ಗಣೇಶರೇ ಕಾರಣ. ಇವರು ಅವಧಾನಗಳಿಂದಲೇ ಜನತೆಗೆ ಹೆಚ್ಚು ಪ್ರಸಿದ್ಧಿ.  ಸಾವಿರಾರು ಅಷ್ಟಾವಧಾನಗಳನ್ನು ನಡೆಸಿಕೊಟ್ಟಿದ್ದಾರೆ. ಇಂದು ಅವಧಾನ ಕಲೆ ಉಳಿದಿರುವುದೇ ಅವರಿಂದ ಹಾಗೂ ಅವರ ಮಿತ್ರವೃಂದದಿಂದ. ಆ ಕಲೆಯೇ ಒಂದು ಅದ್ಭುತ ವಿದ್ವಲ್ಲೀಲಾ ವಿನೋದ. ಈವರೆಗೆ ಅವರು 5 ಬಾರಿ ಶತಾವಧಾನವನ್ನು ನಡೆಸಿಕೊಟ್ಟಿದ್ದಾರೆ. ಆ ಕಾರಣದಿಂದಲೇ ಅವರಿಗೆ ಶತಾವಧಾನಿ ಎಂಬ ಬಿರುದು ಬಂದಿದೆ.

ಇಂಥ ಮಹನೀಯರಿಗೆ ಈಗ ಮತ್ತೊಂದು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ದೊರೆತಿರುವುದು ಪ್ರಶಸ್ತಿಗೇ ಒಂದು ಪೂರ್ಣತೆ ಬಂದಂತಾಗಿದೆ.

ಕಲಾರಾಧಕ ಆರ್ ಗಣೇಶ್

click me!