
ಕಲಾವಿದ ಎನ್.ಕೆ.ರಾಮಕೃಷ್ಣ ಅವರೂ ಬಂದು ಕಪ್ಪಣ್ಣ ಅವರಿಗೆ ಬೇಗ ಭಾಷಣ ಮುಗಿಸಿ ಎಂದರೂ ಪ್ರಯೋಜನವಾಗಲಿಲ್ಲ. ನಿರೂಪಕಿಯೂ ಬಂದು ಕಪ್ಪಣ್ಣ ಅವರನ್ನು ‘ಎಚ್ಚರಿಸಿದರೂ’ ಯಾವುದೇ ಉಪಯೋಗವಾಗಲಿಲ್ಲ. ಇದರಿಂದ ಉಮಾಶ್ರೀ ಅವರು ನಾಲ್ಕನೇ ಬಾರಿ ಕಪ್ಪಣ್ಣ ಅವರ ಬಳಿ ಬಂದು ಜೋರಾಗಿ ಅದೇನು ಹೇಳಿದರೋ ಏನೋ, ತಟ್ಟನೆ ಮಾತು ನಿಲ್ಲಿಸಿದ ಕಪ್ಪಣ್ಣ, ‘ಇನ್ನು ಮಾತು ಮುಂದುವರೆಸಿದರೆ ತಲೆ ಮೇಲೇ ಹೊಡೆಯುತ್ತಾರೆ’ ಎಂದು ಹೇಳುತ್ತಾ ಮಾತಿಗೆ ಬ್ರೇಕ್ ಹಾಕಿದರು.
ಕೆಲ ಸಾರಿ ಅತಿ ಉತ್ಸಾಹದಿಂದ ಗಂಭೀರವಾದ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರೂ ಸಮಯ, ಸಂದರ್ಭ ಗಮನಿಸದೆ ಅತಿಯಾಗಿ ಭಾಷಣ ಮಾಡುತ್ತಿದ್ದರೆ ಏನಾಗುತ್ತದೆ, ಬೇರೆ ಏನೂ ಆಗುವುದಿಲ್ಲ... ‘ಮಾತು ಮುಂದುವರೆಸಿದರೆ ತಲೆ ಮೇಲೆ ಹೊಡೆಯುತ್ತಾರೆ’ ಅಷ್ಟೇ.
ಹೀಗಂತ ಹೇಳಿದ್ದು ಬೇರೆ ಯಾರೂ ಅಲ್ಲ, ನಾಡಿನ ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ. ಇಂತಹ ಮಾತನ್ನು ತಮಗೆ ಹೇಳಿಕೊಂಡ ಪ್ರಸಂಗ ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ಹೊನ್ನಾರು ರಂಗೋತ್ಸವ’ ಕಾರ್ಯಕ್ರಮದಲ್ಲಿ ನಡೆಯಿತು.
ರಂಗಕರ್ಮಿಗಳ ಪ್ರೀತಿ, ಒತ್ತಾಸೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಜತೆಗೆ ಹಲವು ರಂಗಭೂಮಿಯಿಂದ ಬೆಳೆದ ಅನೇಕರು ಗಣ್ಯರು ಆಗಮಿಸಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ನಾಟಕ ನೋಡಲು ಸಾಕಷ್ಟು ಪ್ರೇಕ್ಷಕರು ಆಸೀನರಾಗಿದ್ದರು.
ಇಂತಹ ರಂಗೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತು ಆರಂಭಿಸಿದ ಕಪ್ಪಣ್ಣ ಅವರು, ನಾಡಿನಲ್ಲಿ ರಂಗಭೂಮಿ ಚಟುವಟಿಕೆ, ರೆಫರ್ಟರಿಗಳ ಕಾರ್ಯ, ಸರ್ಕಾರದ ಪ್ರೋತ್ಸಾಹಗಳ ಬಗ್ಗೆ ಭಾಷಣ ಶುರು ಮಾಡತೊಡಗಿದರು.
10 ನಿಮಿಷವಾದರೂ ಕಪ್ಪಣ್ಣ ಮಾತಿಗೆ ವಿರಾಮ ಹೇಳಲಿಲ್ಲ. ಮುಖ್ಯಮಂತ್ರಿಗಳು ಬೇರೆ ಕಾರ್ಯಕ್ರಮಕ್ಕೆ ತೆರಳಬೇಕಿದ್ದರಿಂದ ನಟಿ ಉಮಾಶ್ರೀ ಅವರು ಕಪ್ಪಣ್ಣ ಅವರ ಬಳಿ ಬಂದು ಬೇಗ ಭಾಷಣ ಮುಗಿಸಿ ಎಂದು ಹೇಳಿದರೂ ಇದು ಯಾವುದೇ ‘ಎಫೆಕ್ಟ್’ ಉಂಟು ಮಾಡಲಿಲ್ಲ. ಕಪ್ಪಣ್ಣ ಮಾತಿನ ‘ಓಟ’ ಮುಂದುವರೆದಿತ್ತು. ಕೆಲ ಹೊತ್ತು ಸುಮ್ಮನಿದ್ದ ಉಮಾಶ್ರೀ ಮತ್ತೆ ಕಪ್ಪಣ ಅವರ ಹತ್ತಿರ ಬರುವುದು ಬೇಗ ಮಾತು ಮುಗಿಸಿ ಎಂದು ಹೇಳುವುದು ಅದಕ್ಕೆ ಕಪ್ಪಣ್ಣ ‘ಕ್ಯಾರೇ’ ಎನ್ನದೇ ಮಾತು ಮುಂದುವರೆಸುವುದು ನಡೆದೇ ಇತ್ತು.
ಕಲಾವಿದ ಎನ್.ಕೆ.ರಾಮಕೃಷ್ಣ ಅವರೂ ಬಂದು ಕಪ್ಪಣ್ಣ ಅವರಿಗೆ ಬೇಗ ಭಾಷಣ ಮುಗಿಸಿ ಎಂದರೂ ಪ್ರಯೋಜನವಾಗಲಿಲ್ಲ. ನಿರೂಪಕಿಯೂ ಬಂದು ಕಪ್ಪಣ್ಣ ಅವರನ್ನು ‘ಎಚ್ಚರಿಸಿದರೂ’ ಯಾವುದೇ ಉಪಯೋಗವಾಗಲಿಲ್ಲ. ಇದರಿಂದ ಉಮಾಶ್ರೀ ಅವರು ನಾಲ್ಕನೇ ಬಾರಿ ಕಪ್ಪಣ್ಣ ಅವರ ಬಳಿ ಬಂದು ಜೋರಾಗಿ ಅದೇನು ಹೇಳಿದರೋ ಏನೋ, ತಟ್ಟನೆ ಮಾತು ನಿಲ್ಲಿಸಿದ ಕಪ್ಪಣ್ಣ, ‘ಇನ್ನು ಮಾತು ಮುಂದುವರೆಸಿದರೆ ತಲೆ ಮೇಲೇ ಹೊಡೆಯುತ್ತಾರೆ’ ಎಂದು ಹೇಳುತ್ತಾ ಮಾತಿಗೆ ಬ್ರೇಕ್ ಹಾಕಿದರು. ಕಾರ್ಯಕ್ರಮದ ನಂತರ ‘ಶರ್ಮಿಷ್ಠೆ’ ನಾಟಕ ಪ್ರದರ್ಶನ ನೋಡಲು ಟಿಕೆಟ್ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಕಲಾಭಿಮಾನಿಗಳೂ ನಿಟ್ಟುಸಿರುಬಿಟ್ಟರು.
ತಂತ್ರಜ್ಞಾನದ ಆರ್ಭಟ ಶುರುವಾದ ನಂತರ ಸಭೆ, ಸಮಾರಂಭ, ಮೀಟಿಂಗು ಮುಂತಾದವುಗಳು ಈಗ ಆನ್ಲೈನ್ ಮೂಲಕ ನಡೆಯುವುದೇ ಹೆಚ್ಚು. ಎಲ್ಲೋ ಕೂತು ಮತ್ತೊಂದು ಕಡೆಯ ಕಾರ್ಯಕ್ರಮ ಉದ್ಘಾಟಿಸುವುದು ಮಾಮೂಲಿಯಾಗಿದೆ. ಆದರೆ ಕೆಲ ಸಾರಿ ಈ ತಂತ್ರಜ್ಞಾನ ಕೈಕೊಟ್ಟರೆ ಮುಜುಗರಕ್ಕೆ ಒಳಗಾಗುವುದು ಅಷ್ಟೇ ನಿಜ.
ಈ ರೀತಿ ಮುಜುಗರಕ್ಕೆ ಒಳಗಾದ ಪ್ರಸಂಗ ಇತ್ತೀಚೆಗೆ ಕೋಲಾರದ ವೇಮಗಲ್ನಲ್ಲಿ ನಡೆದ ಟಾಟಾ-ಏರ್ಬಸ್ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ನಡೆಯಿತು.
ಪ್ರಧಾನಿ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಫ್ರಾನ್ಸ್ ರಕ್ಷಣಾ ಸಚಿವರು ಆನ್ಲೈನ್ನಲ್ಲಿ ಕಾಯಿಸಿದ ಪ್ರಸಂಗ ಜರುಗಿತು!
ಅಂದು ಹೆಲಿಕಾಪ್ಟರ್ ಘಟಕ ಉದ್ಘಾಟನೆ ಕಾರ್ಯಕ್ರಮ ಮಧ್ಯಾಹ್ನ 3.45ಕ್ಕೆ ನಿಗದಿಯಾಗಿತ್ತು. ಪ್ರಧಾನಿ ಮತ್ತು ಫ್ರಾನ್ಸ್ ಅಧ್ಯಕ್ಷರು ಮುಂಬೈನಿಂದ ಆನ್ಲೈನ್ ಮೂಲಕ ಭಾಗವಹಿಸಬೇಕಿತ್ತು. ಎಂದಿನಂತೆ 3.45ರ ವೇಳೆಗೆ ರಕ್ಷಣಾ ಸಚಿವರು ಆಗಮಿಸಿ ವೇದಿಕೆ ಎದುರು ಕುಳಿತರು. ಪ್ರಧಾನಿ ಮತ್ತು ಫ್ರಾನ್ಸ್ ಅಧ್ಯಕ್ಷರು ಆನ್ಲೈನ್ ಮೂಲಕ ಉದ್ಘಾಟಿಸಬೇಕಿತ್ತು. ಇನ್ನೇನು ಘಟಕ ಉದ್ಘಾಟನೆಯಾಗುತ್ತದೆ ಎಂದು ಹಲವು ಬಾರಿ ಆಯೋಜಕರು ಘೋಷಣೆ ಮಾಡುತ್ತಲೇ ಇದ್ದರು. ಆದರೆ, ಉದ್ಘಾಟಕರು ಮಾತ್ರ ಪರದೆಯಲ್ಲಿ ಕಾಣಿಸುತ್ತಿರಲಿಲ್ಲ.
ಕಾದು ಕಾದು ಸಾಕಾಗಿ ಘಟಕದ ವೀಕ್ಷಣೆ ಮಾಡಲೆಂದು ರಕ್ಷಣಾ ಸಚಿವರು ಮತ್ತು ಇತರ ಕೇಂದ್ರ, ರಾಜ್ಯ ಸಚಿವರು ವೇದಿಕೆಯಿಂದ ಹೊರಟು ಬಿಟ್ಟರು. ಅವರು ಹೊರಟ ಕೆಲವೇ ನಿಮಿಷಗಳಲ್ಲಿ ಪ್ರಧಾನಿ ಮತ್ತು ಫ್ರಾನ್ಸ್ ಅಧ್ಯಕ್ಷರು ಆನ್ಲೈನ್ ಮೂಲಕ ಸ್ಕ್ರೀನ್ ಮೇಲೆ ಪ್ರತ್ಯಕ್ಷರಾದರು. ಅತ್ತ ಉತ್ಪಾದನಾ ಘಟಕ ನೋಡಲು ತೆರಳಿದ್ದ ರಕ್ಷಣಾ ಸಚಿವರು ಬರುವವರೆಗೆ ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರು ಕೆಲ ಕಾಲ ಕಾಯುತ್ತಾ ಕೂರಬೇಕಾಯಿತು. ಬರುವುದು ವಿಳಂಬವಾದ ಕಾರಣ ಪ್ರಧಾನಿಯವರು ಭಾಷಣ ಆರಂಭಿಸಿದರು. ಇತ್ತ ಬೆಂಗಳೂರಿನಲ್ಲಿ ಮತ್ತೊಂದು ಕಾರ್ಯಕ್ರಮವಿದ್ದ ಕಾರಣ ಇಬ್ಬರು ರಕ್ಷಣಾ ಸಚಿವರು, ಪ್ರಧಾನಿಯವರ ಭಾಷಣ ಪೂರ್ಣಗೊಳ್ಳುವುದಕ್ಕೆ ಕಾಯದೆ, ಅಲ್ಲಿಂದ ಹೊರಟೇ ಬಿಟ್ಟರು!
ಇತ್ತೀಚೆಗೆ ಮಹಾ ಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಶಿವನಿಗೆ ಬಿಲ್ಪಪತ್ರೆ ಅರ್ಪಿಸುವುದು ಮುಖ್ಯ. ಹೀಗಾಗಿ ಮೈಸೂರಿನಲ್ಲಿ ಮಾವಿನ ಸೊಪ್ಪಿನ ಜೊತೆಗೆ ಬಿಲ್ಪಪತ್ರೆ ಮಾರಾಟ ಮಾಡುತ್ತಿದ್ದವನ ಬಳಿ ತೆರಳಿದ ಬಡಾವಣೆಯ ಐದಾರು ನಿವಾಸಿಗಳು ಬಿಲ್ಪಪತ್ರೆ ಖರೀದಿಸಿ ಮನೆಗೆ ಕೊಂಡೊಯ್ದರು. ‘ಮಾವಿನ ಸೊಪ್ಪಿನ ಜೊತೆಗೆ ಬಿಲ್ಪಪತ್ರೆ ಕೂಡ ತಂದಿರುವೆ’ ಎಂದು ಹೇಳಿದಾಗ ಮನೆಯಲ್ಲಿರುವ ಹಿರಿಯರಿಗೆ ಖುಷಿ. ಪೂಜೆಗಾಯಿತು ಎಂದು ಚೀಲ ತೆರೆದು ನೋಡುತ್ತಿದ್ದಂತೆ ಅಯ್ಯೋ ಶಿವನೇ ಎನ್ನುವ ಸರದಿ ಅವರದು! ಯಾಕೆಂದ್ರೆ ಚೀಲದಲ್ಲಿದ್ದದ್ದು ಬಿಲ್ಪಪತ್ರೆಯಲ್ಲ ! ಅದೇ ಮಾದರಿಯ ಬೇರೊಂದು ಸೊಪ್ಪು!. ಈ ಸೊಪ್ಪನ್ನು ಬಿಲ್ಪಪತ್ರೆ ಎಂದು ಮಾರಿದವನದ್ದು ತಪ್ಪೋ, ಅದೇ ಬಿಲ್ವಪತ್ರೆ ಎಂದು ಖರೀದಿಸಿ ಮನೆಗೆ ತೆಗೆದುಕೊಂಡು ಹೋದವನ ತಪ್ಪೋ? ಗೊತ್ತಿಲ್ಲ. ಆದರೆ... ಇದಕ್ಕೇ ಹೇಳೋದು ಮನೆಯಲ್ಲಿ ಹಿರಿಯರು ಇರಬೇಕೆಂದು...!
ರೈಲ್ ಬರ್ತಾ ಇದೆ, ಕಾರ್ ತೆಗೀರಿ...
ಮೈಸೂರಿನ ಕೆಆರ್ಎಸ್ ರಸ್ತೆಯಲ್ಲಿ ರೈಲ್ವೆ ಹಳಿಗಳ ಪಕ್ಕವೇ ಹೋಟೆಲ್ ಒಂದಿದೆ. ಕಳೆದ ವಾರ ಅಲ್ಲಿ ವಿವಾಹ ಆರತಕ್ಷತೆ ನಡೆಯುತ್ತಿತ್ತು. ಹೆಚ್ಚಿನ ಮಂದಿ ಕಾರಿನಲ್ಲಿ ಬಂದಿದ್ದರಿಂದ ವಾಹನ ನಿಲುಗಡೆಗೆ ಸ್ಥಳ ಇರಲಿಲ್ಲ. ಆಗ ಒಬ್ಬ ಅಸಾಮಿ ತನ್ನ ಕಾರನ್ನು ರೈಲ್ವೇ ಗೇಟ್ ಒಳಗೆ, ಹಳಿಗಳ ಬಳಿ ಇದ್ದ ಜಾಗದಲ್ಲಿ ನಿಲುಗಡೆ ಮಾಡಿ ಹೋದ. ಇದನ್ನು ನಂತರ ಗಮನಿಸಿದ ಕಾವಲುಗಾರನಿಗೆ ಪೀಕಲಾಟ ಶುರುವಾಯಿತು. ‘ರೈಲು ಗಾಡಿ ಬರ್ತಾ ಇದೆ. ಯಾರು ಹಳಿ ದಾಟಬೇಡಿ’ ಎಂಬ ಸಂದೇಶ ಹಾಕುವ ಬದಲು ಆತ ಕಾರು ತೆಗೆಸಲು ಪರದಾಡಿದ. ಕೊನೆಗೆ ಪಕ್ಕದ ಹೋಟೆಲ್ನಲ್ಲಿ ನಡೆಯುತ್ತಿದ್ದ ಆರತಕ್ಷತೆಗೆ ಬಂದವರದು ಎಂದು ತಿಳಿದು, ಅಲ್ಲಿಗೆ ಹೋಗಿ ಮೈಕ್ನಲ್ಲಿ ಕಾರಿನ ನಂಬರ್ ಅನೌನ್ಸ್ ಮಾಡಿಸಿ, ಗಡಿಬಿಡಿಯಲ್ಲಿ ಕಾರನ್ನು ಅಲ್ಲಿಂದ ತೆಗೆಸಿದ! ಕಾರು ಮಾಲೀಕನನ್ನು ರೈಲ್ವೆ ಹಳಿಗಳ ಪಕ್ಕ ಯಾಕೆ ನಿಲ್ಲಿಸಿದೆ ಎಂದು ಕೇಳಿದರೆ ರೈಲು ಹೋಗೋದು ಹಳಿಗಳ ಮೇಲೆ, ಪಕ್ಕದಲ್ಲಿ ಜಾಗ ಇತ್ತು, ನಿಲ್ಲಿಸಿದೆ ಎಂದು ರೈಲ್ ಬಿಟ್ಟಾಗ ಕಾವಲುಗಾರ ಸುಸ್ತು!. ಅಂತೂ ಇಂತೂ ರೈಲು ಬರುವುದರೊಳಗೆ ಕಾರು ತೆಗೆಸಿ ಬದುಕಿದೆಯಾ ಬಡಜೀವವೇ ಎಂದುಕೊಂಡ ಕಾವಲುಗಾರು.
-ಸಿದ್ದು ಚಿಕ್ಕಬಳ್ಳೇಕೆರೆ
ಮಂಜುನಾಥ ನಾಗಲೀಕರ್
-ಅಂಶಿ ಪ್ರಸನ್ನಕುಮಾರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ