ಎಸ್ಸಿ-ಎಸ್ಟಿ ಗುತ್ತಿಗೆ ಮೀಸಲು ಗೊಂದಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

By Kannadaprabha NewsFirst Published Nov 23, 2022, 3:41 AM IST
Highlights
  • ಎಸ್ಸಿ-ಎಸ್ಟಿಗುತ್ತಿಗೆ ಮೀಸಲು ಗೊಂದಲ: ಸರ್ಕಾರಕ್ಕೆ ನೋಟಿಸ್‌
  • ಕಾಮಗಾರಿಗಳ ಪ್ಯಾಕೇಜ್‌ ಮೊತ್ತಕ್ಕೆ ಮಿತಿ ಹೇರಿದ ಪ್ರಕರಣದಲ್ಲಿ ಹೈಕೋರ್ಟ್ ನೋಟಿಸ್‌

ಬೆಂಗಳೂರು (ನ.23) : ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ‘ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ’ಯ ಕಾಮಗಾರಿಗಳ ಪ್ಯಾಕೇಜ್‌ ಮೊತ್ತಕ್ಕೆ ಮಿತಿ ಹೇರಿರುವ ವಿಚಾರ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿದೆ. ಈ ವಿಚಾರವಾಗಿ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆ, ಆರ್ಥಿಕ ಇಲಾಖೆ ಮತ್ತು ಬಿಬಿಎಂಪಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಡಿ.13ಕ್ಕೆ ಮುಂದೂಡಿತು.

ಸರ್ಕಾರದ ಟೆಂಡರ್‌ಗಳಲ್ಲಿ 50 ಲಕ್ಷದವರೆಗಿನ ಕಾಮಗಾರಿಗಳಲ್ಲಿ ಎಸ್ಸಿ-ಎಸ್ಟಿಗುತ್ತಿಗೆದಾರರಿಗೆ ಶೇ.24ರಷ್ಟುಮೀಸಲಾತಿ ನೀಡಿ 2017ರಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಆದರೆ, ‘ನಗರದ ವಿವಿಧ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳ ಪ್ಯಾಕೇಜ್‌ಗೆ ಮಿತಿ ಹೇರಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅಮೃತ ನಗರೋತ್ಥಾನ ಹಂತ-4ಕ್ಕೆ 145 ಕೋಟಿ ಮಂಜೂರು: ಸಚಿವ ಎಂಟಿಬಿ ನಾಗರಾಜ್‌

ಈ ಯೋಜನೆಯಡಿ ಬಿಬಿಎಂಪಿಗೆ 6 ಸಾವಿರ ಕೋಟಿ ರು. ಅನುದಾನ ನೀಡಿ ಕಾಮಗಾರಿಗಳಿಗೆ ಟೆಂಡರ್‌ ಕರೆಯಲು ಪ್ಯಾಕೇಜ್‌ ಮೊತ್ತ 10 ಕೋಟಿ ರು. ನಿಗದಿಪಡಿಸಲಾಗಿದೆ. ರಾಜ್ಯದ ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೆ 3,885 ಕೋಟಿ ಅನುದಾನ ನೀಡಿ ನಗರಸಭೆ ವ್ಯಾಪ್ತಿಯಲ್ಲಿ 1 ಕೋಟಿ, ಪುರಸಭೆ ವ್ಯಾಪ್ತಿಯಲ್ಲಿ 50 ಲಕ್ಷ ಹಾಗೂ ಪಟ್ಟಣ ಪಂಚಾಯಿತಿಗಳಿಗೆ 25 ಲಕ್ಷ ರು. ತಾಲೂಕು ಮಟ್ಟದ ಕಾಮಗಾರಿಗಳಿಗೆ 1 ಕೋಟಿ ರು. ಪ್ಯಾಕೇಜ್‌ ಮೊತ್ತ ನಿಗದಿಪಡಿಸಲಾಗಿದೆ. ಇದರಿಂದ ಎಸ್ಸಿ-ಎಸ್ಟಿಗುತ್ತಿಗೆದಾರರು ಕಾಮಗಾರಿಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅಲ್ಲದೆ, ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಬಿಬಿಎಂಪಿ, ನಗರಸಭೆ, ಪುರಸಭೆ ಹಾಗೂ ತಾಲೂಕು ಮಟ್ಟಕ್ಕೆ ಮೊತ್ತಕ್ಕೆ ಮಿತಿ ಹೇರಿ ಮತ್ತು ಪ್ಯಾಕೇಜ್‌ ನಿಗದಿಪಡಿಸಿ 2022ರ ಜ.14 ಮತ್ತು ಮೇ 11ರಂದು ಹೊರಡಿಸಿರುವ ಸುತ್ತೋಲೆಗಳನ್ನು ರದ್ದುಪಡಿಸಬೇಕು. ಟೆಂಡರ್‌ ಕರೆಯಲು ಹಾಗೂ ಪ್ಯಾಕೇಜ್‌ ಮೊತ್ತ 50 ಲಕ್ಷ ಮೀರದಂತೆ ಮಾರ್ಗಸೂಚಿ ರೂಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಯೋಜನೆಯಡಿ ಅ.4ರಂದು ಕರೆಯಲಾಗಿರುವ ಅಲ್ಪಾವಧಿ ಟೆಂಡರ್‌ಗಳನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

 

ಸಿಎಂ ನಗರೋತ್ಥಾನ ಯೋಜನೆ: 299 ಸ್ಥಳೀಯ ಸಂಸ್ಥೆಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ಅಸ್ತು

click me!