
ಮೈಸೂರು (ಅ.19): ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ನಾಲ್ಕನೇ ದಿನವಾದ ಬುಧವಾರ ಯುವ ದಸರಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಯುವ ದಸರಾಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ಡಾ.ಶಿವರಾಜಕುಮಾರ್ ಅವರು ತಮ್ಮ ‘ಘೋಸ್ಟ್’ ಚಿತ್ರದ ಡೈಲಾಗ್ ಹೇಳಿ, ಆಕಾಶವೆ ಬೀಳಲಿ ಮೇಲೆ ನಾ ನಿನ್ನ ಕೈಬಿಡೇನು..., ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ ಹಕ್ಕಿಯಾ ನೋಡಿದೆ... ಹಾಡುಗಳನ್ನು ಹಾಡಿ ಕೆಲಕಾಲ ರಂಜಿಸಿದರು.
ಈ ವೇಳೆ, ನಡೆದ ಸ್ಯಾಂಡಲ್ ವುಡ್ ನೈಟ್ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಫಿದಾ ಆದರು. ಈ ಮಧ್ಯೆ, ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾ ಅಂಗವಾಗಿ ಆಯೋಜಿಸಿರುವ ಶೈಕ್ಷಣಿಕ ವಸ್ತು ಪ್ರದರ್ಶನದಲ್ಲಿ ಮಕ್ಕಳ ಜ್ಞಾನ ಅನಾವರಣಗೊಂಡಿತು. ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೊತೆಗೆ, ಮೈಸೂರು ದಸರಾ ಮಹೋತ್ಸವ ಅಂಗವಾಗಿ ರಾಜ್ಯಮಟ್ಟದ ಪಂಜ ಕುಸ್ತಿ ಸ್ಪರ್ಧೆ ಕೂಡ ನಡೆಯಿತು. ಇದೇ ವೇಳೆ, ಮೈಸೂರಿನ ಅರಮನೆ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರು ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಅಪರ್ಣ ತಂಡದವರು ಭರತ ನಾಟ್ಯ ಪ್ರದರ್ಶಿಸಿದರು. ಇದಕ್ಕೂ ಮೊದಲು, ಅರಮನೆ ಆವರಣದಲ್ಲಿ ನಡೆದ ಪೊಲೀಸ್ ಬ್ಯಾಂಡ್ ವಾದ್ಯವನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಕುಟುಂಬ ಸಮೇತರಾಗಿ ವೀಕ್ಷಿಸಿದರು. ಅಲ್ಲದೆ, ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು. ಈ ಮಧ್ಯೆ, ಬುಧವಾರ ಬೆಳಗ್ಗೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ದಸರಾ ಕವಿಗೋಷ್ಠಿ ಉಪ ಸಮಿತಿಯಿಂದ ಮಹಿಳಾ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.
ನನ್ನ ಬಗ್ಗೆ ತೀರ್ಪು ನೀಡಲು ಕಟೀಲ್, ಎಚ್ಡಿಕೆ ನ್ಯಾಯಾಧೀಶರೆ?: ಡಿಕೆಶಿ
ಮಾವುತರ, ಕಾವಾಡಿಗಳ ಮಕ್ಕಳಿಗೆ ಬಟ್ಟೆ ಖರೀದಿಗೆ 1 ಲಕ್ಷ ರೂ. ನೀಡಿದ ಶಿವಣ್ಣ: ಈ ಮಧ್ಯೆ, ಅರಮನೆಗೆ ಭೇಟಿ ನೀಡಿದ ನಟ ಶಿವರಾಜಕುಮಾರ್, ಮಾವುತರು ಹಾಗೂ ಕಾವಾಡಿಗಳ ಮಕ್ಕಳಿಗೆ ಬಟ್ಟೆ ಖರೀದಿಗೆ 1 ಲಕ್ಷ ರು. ನೆರವು ನೀಡಿದರು. ಆನೆಗಳ ಬಿಡಾರಕ್ಕೆ ಒಂದು ಸುತ್ತು ಹಾಕಿ, ಮಾವುತರು ಹಾಗೂ ಕಾವಾಡಿಗಳನ್ನು ಮಾತನಾಡಿಸಿದರು. ಗೀತಾ ಶಿವರಾಜ್ ಕುಮಾರ್, ಸಚಿವ ಮಧು ಬಂಗಾರಪ್ಪ, ಮಾಜಿ ಶಾಸಕ ಗೋ. ಮಧುಸೂದನ್, ಡಿಡಿಪಿಐ ಎಚ್.ಕೆ. ಪಾಂಡು ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ