
ಶಿವಮೊಗ್ಗ (ಅ.22): ಸಕ್ರೆಬೈಲು ಆನೆ ಬಿಡಾರದ 4 ಆನೆಗಳಿಗೆ ಗಾಯವಾಗಿರುವುದು ಹಾಗೂ ಬಾಲಣ್ಣ ಎಂಬುವ ಆನೆ ಸೋಂಕಿನಿಂದ ಬಳಲುತ್ತಿರುವ ಬಗ್ಗೆ ಸುದ್ದಿ ಪ್ರಕಟಗೊಂಡ ಬೆನ್ನಲ್ಲೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು ಬಾಲಣ್ಣ ಆನೆಯ ಸ್ಥಿತಿಗೆ ಕಾರಣರಾದ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಶಿಸ್ತು ಕ್ರಮದ ಶಿಫಾರಸ್ಸಿನೊಂದಿಗೆ ವಾರದೊಳಗೆ ಸಮಗ್ರ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ. ಸಕ್ರೆಬೈಲು ಬಿಡಾರದ ಬಾಲಣ್ಣ (35) ಎಂಬ ಆನೆಗೆ ಕಾಲಿನ ನೋವಿಗೆ ಕೊಟ್ಟ ಇಂಜೆಕ್ಷನ್ ಓವರ್ ಡೋಸ್ ಆಗಿ ಕಿವಿ ಕೊಳೆತು ಸೋಂಕಿನಿಂದ ನರಳುತ್ತಿದೆ. ಅಲ್ಲದೇ, ಸಾಗರ ಸೇರಿದಂತೆ ಒಟ್ಟು 4 ಆನೆಗಳು ಗಾಯದಿಂದ ಬಳಲುತ್ತಿವೆ.
ಈ ಬಗ್ಗೆ ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಪತ್ರ ಬರೆದಿದ್ದು, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿರುವ ಎಲ್ಲ ಆನೆ ಶಿಬಿರಗಳಲ್ಲಿ ಮತ್ತು ಮೃಗಾಲಯಗಳಲ್ಲಿ ಸಮರ್ಪಿತ ವೈದ್ಯಾಧಿಕಾರಿ ಇರಬೇಕು. ಸದ್ಯ ಪಶುವೈದ್ಯರ ಕೊರತೆ ಬಗ್ಗೆ ವರದಿಯಾಗಿದ್ದು, ಕೂಡಲೇ ಗುತ್ತಿಗೆ ಆಧಾರದ ಮೇಲೆ ಅಥವಾ ನಿಯೋಜನೆಯ ಮೂಲಕ ವೈದ್ಯರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದ್ದಾರೆ.
2005ರ ಪೂರ್ವದ ಮೂರು ಎಕರೆ ಒಳಗಿನ ಅರಣ್ಯ ಭೂಮಿಯಲ್ಲಿನ ಒತ್ತುವರಿದಾರರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಆದರೆ ಮೂರು ಎಕರೆಗಿಂತ ಹೆಚ್ಚಿನ ಇತ್ತೀಚಿನ ಒತ್ತುವರಿಗಳಿಗೆ ರಕ್ಷಣೆ ನೀಡಲಾಗದು ಮತ್ತು ಹೊಸ ಒತ್ತುವರಿಗೆ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ರಾಜ್ಯದ ಜನತೆಗೆ ಖಡಕ್ ಸಂದೇಶ ನೀಡಿದ್ದಾರೆ. ಉತ್ತರ ಕನ್ನಡ ಮತ್ತು ಮಲೆನಾಡಿನ ಕೆಲವು ಪ್ರದೇಶದಲ್ಲಿ ಶೇ. 80ರಷ್ಟು ಅರಣ್ಯ ಭೂಮಿ ಇರುವುದರಿಂದ ಆಭಾಗದ ನೆರೆಸಂತ್ರಸ್ತರ ಪುನರ್ವಸತಿ, ವಸತಿ ಮತ್ತು ಜೀವನೋಪಾಯಕ್ಕೆ ಅಲ್ಲಿನ ಬಡಜನರು ಅರಣ್ಯ ಭೂಮಿಯನ್ನು ಅವಲಂಬಿಸುವುದು ಅನಿವಾರ್ಯವಾಗಿತ್ತು.
ಇನ್ನೊಂದೆಡೆ ವಿವಿಧ ಯೋಜನೆಗಳಿಂದ ನಿರಾಶ್ರಿತರಾದವರ ಸಮಸ್ಯೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ಅರಣ್ಯ ಭೂಮಿಯ ಅವಶ್ಯಕತೆ ಇರುವದು ಸರ್ಕಾರದ ಗಮನದಲ್ಲಿದೆ. ಆದ್ದರಿಂದ 2005ರ ಪೂರ್ವದಿಂದ ಕೃಷಿ ಮತ್ತು ತೋಟಗಾರಿಕೆಯೊಂದಿಗೆ ಅರಣ್ಯ ಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡವರು ಆತಂಕ ಪಡುವ ಅಗತ್ಯವಿಲ್ಲ. ಸಣ್ಣ ಹಿಡುವಳಿದಾರರ ಹಿತರಕ್ಷಣೆ ಮಾಡಲಾಗುವುದು ಎಂದು ಅರಣ್ಯ ಪರಿಸರ ಈಶ್ವರ ಖಂಡ್ರೆ ತಿಳಿಸಿದ್ದಾರೆ. ತಮ್ಮನ್ನು ಭೇಟಿಯಾದ ಉತ್ತರ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ, ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ನೇತೃತ್ವದ ಜಂಟಿ ನಿಯೋಗದ ಅಹವಾಲು ಆಲಿಸಿದ ಬಳಿಕ ಅರಣ್ಯಭೂಮಿ ಸಕ್ರಮದ ಕುರಿತು ಸರ್ಕಾರದ ನಿಲುವನ್ನು ಸಚಿವರು ಸ್ಪಷ್ಟಪಡಿಸಿದರು.
ಸಾವಿರಾರು ಅರ್ಹರು ಭೂಮಿ ಹಕ್ಕಿನಿಂದ ವಂಚಿತರಾಗಿರುವ ವಿಚಾರವನ್ನು ನಿಯೋಗ ಸಚಿವರ ಗಮನ ಸೆಳೆದಿದ್ದು, ಸರ್ಕಾರದ ನಿರ್ಣಯವನ್ನು ಪರಿಶೀಲಿಸಿ ಮರುಸಮೀಕ್ಷೆಗೆ ಅಧೀಕೃತ ಆದೇಶ ಮಾಡುವುದಾಗಿ ಮತ್ತು ಅರಣ್ಯ ಹಕ್ಕುಕಾಯ್ದೆಯ ಅನುಷ್ಠಾನ ಪ್ರಕ್ರೀಯೆಯಲ್ಲಿ ಅರ್ಹರು ಭೂಮಿಯ ಹಕ್ಕಿನಿಂದ ವಂಚಿತರಾಗದಂತೆ ಅರಣ್ಯ ಇಲಾಖೆ ಸಹಕಾರ ನೀಡಲಿದೆ ಅರಣ್ಯ ಸಚಿವರು ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ