ವಿರೋಧಿಗಳಿಗೂ ಹೆಡಗೇವಾರ್‌ ಬಗ್ಗೆ ಪರಿಚಯಿಸಬೇಕು: ಆರ್‌ಎಸ್‌ಎಸ್‌

By Kannadaprabha NewsFirst Published Jun 12, 2022, 8:11 AM IST
Highlights

*  ಆರ್‌ಎಸ್‌ಎಸ್‌ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಅಭಿಪ್ರಾಯ
*  ಅನುವಾದಿತ ‘ರಾಷ್ಟ್ರ ತಪಸ್ವಿ ಶ್ರೀಗುರೂಜಿ’ ಕೃತಿ ಲೋಕಾರ್ಪಣೆ
*  ಇಂದು ಜಗತ್ತಿಗೇ ಆರ್‌ಎಸ್‌ಎಸ್‌ ಪರಿಚಯವಿದೆ 
 

ಬೆಂಗಳೂರು(ಜೂ.12): ಹಿಂದೂ ಸಮಾಜದಲ್ಲಿ ಹೊಸ ಚೈತನ್ಯ ತುಂಬುವ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸಂಸ್ಥಾಪಕರಾದ ಹೆಡಗೇವಾರ್‌ ಮಾಡಿದ್ದಾರೆ. ವಿರೋಧ ಮಾಡುವವರಿಗೂ ಈಗ ಹೆಡಗೇವಾರ್‌ ಪರಿಚಯವಾಗಿದೆ. ವಿರೋಧಿಗಳಲ್ಲೂ ಅರಿವು ಮೂಡಿಸುವ ಕಾರ್ಯವನ್ನು ನಾವು ಮಾಡಬೇಕು ಎಂದು ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಅಭಿಪ್ರಾಯಪಟ್ಟರು.

ರಾಷ್ಟ್ರೋತ್ಥಾನ ಸಾಹಿತ್ಯದಿಂದ ಜಯನಗರದ 4ನೇ ಬ್ಲಾಕ್‌ನಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಚಂದ್ರಶೇಖರ ಭಂಡಾರಿ ಅವರು ಕನ್ನಡಾನುವಾದ ಮಾಡಿರುವ ‘ರಾಷ್ಟ್ರ ತಪಸ್ವಿ ಶ್ರೀಗುರೂಜಿ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಕುರಿತು ಅವರು ಮಾತನಾಡಿದರು.

Latest Videos

ಹೆಗಡೆವಾರ್‌ ಇತಿಹಾಸ ಓದಿದ್ರೆ ಸಿದ್ದರಾಮಯ್ಯ ಬಿಜೆಪಿಗೆ ಬರ್ತಾರೆ: ನಿರಾಣಿ

ಇಂದು ಜಗತ್ತಿಗೇ ಆರ್‌ಎಸ್‌ಎಸ್‌ ಪರಿಚಯವಿದೆ. ಆದರೆ ಕೆಲವರು ವಿರೋಧ ಮಾಡುತ್ತಿದ್ದು ಈಗ ಅವರಿಗೆ ಹೆಡಗೇವಾರ್‌ ಬಗ್ಗೆ ಪರಿಚಯವಾಗುತ್ತಿದೆ. ಅಂತಹವರಲ್ಲೂ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ. ಸಂಘದಲ್ಲಿ ವ್ಯಕ್ತಿ ಪೂಜೆಯಿಲ್ಲ, ವ್ಯಕ್ತಿತ್ವದ ಹರಣವೂ ಇಲ್ಲ. ಒಂದು ತತ್ವವನ್ನು ಗುರುವಾಗಿ ಸ್ವೀಕರಿಸಲಾಗಿದೆ. ಇದು ಸಂಘದ ವಿಶೇಷತೆಯಾಗಿದೆ ಎಂದು ಬಣ್ಣಿಸಿದರು.

ಸಂಘದ ಸಂಘಟನೆಗಾಗಿ ಗುರೂಜಿಯವರು (ಹೆಡಗೇವಾರ್‌) ದೇಶದಲ್ಲಿ 70 ಬಾರಿ ಸಂಚರಿಸಿದ್ದಾರೆ. 1943ರಿಂದ 73ರವರೆಗೆ ಪ್ರತಿ ವರ್ಷ ಎಲ್ಲ ಪ್ರಾಂತ್ಯಗಳಲ್ಲೂ ಸಂಚರಿಸುತ್ತಿದ್ದರು. ನಿಮ್ಮ ವಿಳಾಸ ಯಾವುದು ಎಂದು ಯಾರೋ ಕೇಳಿದಾಗ, ‘ರೈಲ್ವೆ ಬೋಗಿಯೇ ನನ್ನ ಮನೆ’ ಎಂದು ಗುರೂಜಿ ಉತ್ತರಿಸಿದ್ದರು. ಇನ್ನು 3 ವರ್ಷದಲ್ಲಿ ಸಂಘಕ್ಕೆ 100 ವರ್ಷ ತುಂಬಲಿದೆ. ಸಂಘದ ಸ್ವಯಂಸೇವಕರು ನಿತ್ಯವೂ ತಾರುಣ್ಯವನ್ನು ಹೊರಸೂಸುತ್ತಿದ್ದಾರೆ ಎಂದು ವಿವರಿಸಿದರು.
ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಮಾತನಾಡಿ, ದೇಶದಲ್ಲಿ ಆರ್‌ಎಸ್‌ಎಸ್‌ನಷ್ಟುಟೀಕೆಗೆ ಒಳಗಾದ ಸಂಘ ಮತ್ತೊಂದಿಲ್ಲ. ಅಷ್ಟೇ ಅಲ್ಲ ಯಾವ ರಾಜಕೀಯ ಪಕ್ಷವೂ ಇಷ್ಟೊಂದು ಟೀಕೆಗೆ ಒಳಗಾಗಿಲ್ಲ. ಆದರೆ ಇದೆಲ್ಲವನ್ನೂ ಸಹಿಸಿಕೊಂಡು ಸಂಘ ತನ್ನ ಪಾಲಿನ ಕೆಲಸಗಳನ್ನು ಮಾಡುವತ್ತ ಚಿತ್ತ ಕೇಂದ್ರೀಕರಿಸಿದೆ ಎಂದು ಬಣ್ಣಿಸಿದರು.

ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ರಾಷ್ಟ್ರೋತ್ಥಾನ ಪರಿಷತ್‌ನ ಅಧ್ಯಕ್ಷ ಎಂ.ಪಿ.ಕುಮಾರ್‌, ಪ್ರಧಾನ ಕಾರ್ಯದರ್ಶಿ ದಿನೇಶ್‌ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.ರಾಷ್ಟ್ರೋತ್ಥಾನ ಸಾಹಿತ್ಯದಿಂದ ಜಯನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಂದ್ರಶೇಖರ ಭಂಡಾರಿ ಅವರು ಕನ್ನಡಾನುವಾದ ಮಾಡಿರುವ ‘ರಾಷ್ಟ್ರ ತಪಸ್ವಿ ಶ್ರೀಗುರೂಜಿ’ ಕೃತಿಯನ್ನು ಬಾಗಲಕೋಟೆ-ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಆರ್‌ಎಸ್‌ಎಸ್‌ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಮತ್ತಿತರರು ಹಾಜರಿದ್ದರು.

click me!