
ಬೆಂಗಳೂರು: ಬರೋಬ್ಬರಿ 7000 ಕೋಟಿ ರೂ ಸಂಪತ್ತಿನ ಒಡೆಯ, ಚಲನಚಿತ್ರ ನಿರ್ಮಾಪಕ ಮತ್ತು ಉದ್ಯಮಿ ಕೆಜಿಎಫ್ ಬಾಬು (KGF Babu RTO raid) ಅಲಿಯಾಸ್ ಯೂಸುಫ್ ಷರೀಫ್ ಅವರಿಗೆ ಇಂದು ಬೆಳಿಗ್ಗೆ ಶಾಕ್ ಆಗಿದೆ. ಸಾರಿಗೆ ಇಲಾಖೆಯ (RTO) ಅಧಿಕಾರಿಗಳು ಅವರ ನಿವಾಸಕ್ಕೆ ದಾಳಿ ನಡೆಸಿ, ಅವರ ಬಳಿ ಇರುವ ಐಷಾರಾಮಿ ಕಾರುಗಳ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.
ಕೆಜಿಎಫ್ ಬಾಬು ಅವರ ಬಳಿ ಹಲವು ಐಷಾರಾಮಿ ಕಾರುಗಳಿವೆ. ಈ ಕಾರುಗಳಲ್ಲಿ ರೋಲ್ಸ್ ರಾಯ್ಸ್, ವೆಲ್ಪೇರ್ ಸೇರಿದಂತೆ ಇನ್ನೂ ಹಲವಾರು ದುಬಾರಿ ಕಾರುಗಳಿವೆ. ಆದರೆ ಕೆಲವು ಕಾರುಗಳ ರಸ್ತೆ ತೆರಿಗೆ (ರೋಡ್ ಟ್ಯಾಕ್ಸ್) ಪಾವತಿ ಮಾಡಿಲ್ಲ ಎಂಬ ಮಾಹಿತಿ ಆಧಾರದ ಮೇಲೆ RTO ಜಂಟಿ ಆಯುಕ್ತ ಶೋಭಾ ಅವರ ನೇತೃತ್ವದ ತಂಡ ಇಂದು ಬೆಳಗ್ಗೆ ಅವರ ಮನೆಗೆ ಭೇಟಿ ನೀಡಿತು. ಕೆಜಿಎಫ್ ಬಾಬು ಕಾರುಗಳ ಲಿಸ್ಟ್ ಸಮೇತ ಅಧಿಕಾರಿಗಳು ನಿವಾಸದ ಬಳಿಗೆ ಬಂದರು. ಆದರೆ ಕೆಜಿಎಫ್ ಬಾಬು ತನ್ನ ನಿವಾಸದ ಗೇಟ್ ತೆರೆಯದ ಹಿನ್ನೆಲೆಯಲ್ಲಿ, RTO ಅಧಿಕಾರಿಗಳು ಹೈಗ್ರೌಂಡ್ ಹೊಯ್ಸಳ ಪೊಲೀಸರ ಸಹಾಯವನ್ನು ಕೋರಿ. ನಂತರ ಗೇಟ್ ತೆರೆಯಲಾಗಿದ್ದು, ಅಧಿಕಾರಿಗಳು ಕಾರುಗಳ ಪಾರ್ಕಿಂಗ್ ಸ್ಥಳಕ್ಕೆ ಭೇಟಿ ನೀಡಿ ಪ್ರವೇಶಿಸಿದರು.
MH 11 AX 1, ರೋಲ್ಸ್ ರಾಯ್ ಮತ್ತು MH 02 BB 2 ರೋಲ್ಸ್ ರಾಯ್ ಕಾರು ಬಾಬು ಬಳಿ ಇದ್ದು, ಮಗಳ ಮಗುವಿಗಾಗಿ ಅಂದ್ರೆ ಮೊಮ್ಮಗಳಿಗಾಗಿ ವೇಲ್ಪೇರ್ ಕಾರ್ ಖರೀದಿ ಮಾಡಿದ್ದರು. ಅಮಿತಾಬಚ್ಚನ್ ಹಾಗೂ ಅಮೀರ್ ಖಾನ್ ನಿಂದ ಈ ಕಾರು ಖರೀದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಮೀರ್ ಖಾನ್ ಒಂದು ವರ್ಷ ಬಳಸಿರೋ MH 02 BB 2 ರೋಲ್ಸ್ ರಾಯ್ ಮತ್ತು ಅಮಿತಾಬಚ್ಚನ್ ಬಳಿಯಿಂದ MH 11 AX 1 ರೋಲ್ಸ್ ರಾಯ್ ಕಾರು ಪರ್ಚೇಸ್ ಮಾಡಿದ್ದು, ಟ್ಯಾಕ್ಸ್ ಕಟ್ಟಿಲ್ಲ ಎಂದು ತಿಳಿದುಬಂದಿದೆ. ಕೆಜಿಎಫ್ ಬಾಬುಗೆ ಸೆಲೆಬ್ರೆಟಿ ಬಳಸೋ ಕಾರು ಬಗ್ಗೆ ಕ್ರೇಜ್ ಹೆಚ್ಚು, ಹೀಗಾಗಿ ಅವರ ಬಳಿ ಇರುವ ಒದೊಂದು ಕಾರಿನ ಹಿಂದೆಯೂ ಒಂದೊಂದು ಕಥೆ ಇದೆ. ಮನೆಯ ಪಾರ್ಕಿಂಗ್ ನಲ್ಲಿ ಒಟ್ಟು ನಾಲ್ಕು ಐಶಾರಾಮಿ ಕಾರುಗಳು ಇದೆ. ಪ್ರತೀ ಕಾರಿನ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಯಾವಾಗ ಯಾರಿಂದ ಪರ್ಚೇಸ್ ಮಾಡಿದ್ದು…? ಯಾವ ರಾಜ್ಯದ ಕಾರು..? ಟ್ಯಾಕ್ಸ್ ಗಳನ್ನ ಪೇ ಮಾಡಿದ್ದೀರಾ ಅನ್ನೋದ್ರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಕಾರುಗಳ ಇನ್ಸ್ ರೆನ್ಸ್ ಸಹಿತ ಎಲ್ಲಾ ಮಾಹಿತಿ ಕೇಳಿದ ಅಧಿಕಾರಿಗಳಿಗೆ ದಾಖಲೆಗಳನ್ನ ಕೆಜಿಎಫ್ ಬಾಬು ನೀಡಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ ಕಾರು ಒಂದು ರಾಜ್ಯದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಚಾಲನೆ ಮಾಡಿದರೆ, ಸ್ಥಳೀಯ RTOಗೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ ಎಂಬ ನಿಯಮದ ಉಲ್ಲಂಘನೆಯ ಬಗ್ಗೆ ಪರಿಶೀಲನೆ ನಡೆಯಿತು.
“ನಾನು ಈ ಕಾರುಗಳನ್ನು ಕೇವಲ ಬೆಂಗಳೂರಲ್ಲ, ಮುಂಬೈನಲ್ಲೂ ಬಳಸುತ್ತೇನೆ. ಯಾರೋ ಕಮಿಷನರ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ನಾನು ಯಾವತ್ತೂ ಕಾನೂನಿಗೆ ಗೌರವ ನೀಡುತ್ತೇನೆ. ಈವರೆಗೆ ಯಾವುದೇ ನೋಟಿಸ್ ನನಗೆ ಬಂದಿಲ್ಲ. ಆದರೂ ಇಂದು ಅವರು ಕೇಳಿದ ದಾಖಲೆಗಳನ್ನು ನೀಡುತ್ತೇನೆ ಮತ್ತು ಇಂದೇ ತೆರಿಗೆ ಪಾವತಿಸುತ್ತೇನೆ. ನಾನು ಯಾವುದೇ ವಿಳಂಬ ಮಾಡಲಾರೆ,” ಎಂದು ಬಾಬು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ