BBMP: ₹5 ಕೋಟಿ ಲಂಚ ಪಡೆದು ನಕಲಿ ಪಿಐಡಿ; ದಾಖಲೆ ಸಹಿತ ಲೋಕಾಯುಕ್ತಕ್ಕೆ ಎನ್‌.ಆರ್‌.ರಮೇಶ್‌ ದೂರು

Kannadaprabha News, Ravi Janekal |   | Kannada Prabha
Published : Feb 13, 2026, 06:43 AM IST
Rs 5 Crore Bribe Scam NR Ramesh Files Lokayukta Complaint Over Fake BBMP PID Numbers

ಸಾರಾಂಶ

ಬೆಂಗಳೂರಿನ ಮಲ್ಲಸಂದ್ರದಲ್ಲಿ 10.20 ಎಕರೆ ಜಾಗಕ್ಕೆ ನಕಲಿ ಪಿಐಡಿ ಸೃಷ್ಟಿಸಿ 'ಎ' ಖಾತಾ ನೀಡಲು ಬಿಬಿಎಂಪಿ ಅಧಿಕಾರಿಗಳು ₹5 ಕೋಟಿ ಲಂಚ ಪಡೆದಿದ್ದಾರೆ ಎಂದು ಮಾಜಿ ನಾಯಕ ಎನ್.ಆರ್. ರಮೇಶ್ ಆರೋಪಿಸಿದ್ದಾರೆ. ಈ ಗಂಭೀರ ಅಕ್ರಮದ ಕುರಿತು ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಬೆಂಗಳೂರು (ಫೆ.13): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಗೆ ಸೇರಿದ ಹೆಮ್ಮಿಗೆಪುರ ವಾರ್ಡ್‌ನ ಉತ್ತರಹಳ್ಳಿ ಹೋಬಳಿ ಮಲ್ಲಸಂದ್ರದ ಗ್ರಾಮದಲ್ಲಿ ಚೆನ್ನೈ ಮೂಲದ ಕಟ್ಟಡ ನಿರ್ಮಾಣ ಸಂಸ್ಥೆಗೆ ಸೇರಿದ 10.20 ಎಕರೆ ವಿಸ್ತೀರ್ಣದ ಜಾಗಕ್ಕೆ ಅಧಿಕಾರಿಗಳು ₹5 ಕೋಟಿ ಲಂಚ ಪಡೆದು ನಕಲಿ ಪಿಐಡಿ (ಪ್ರಾಪರ್ಟಿ ಐಡೆಂಟಿಫಿಕೇಶನ್‌ ನಂಬರ್‌) ಸಂಖ್ಯೆ ಸೃಷ್ಟಿಸಿ ‘ಎ’ ಖಾತಾ ಮಾಡಿಕೊಡಲು ಮುಂದಾಗಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌.ರಮೇಶ್‌ ಈ ಆರೋಪ ಮಾಡಿದ್ದು, ಜಿಬಿಎ ಪಶ್ಚಿಮ ನಗರ ಪಾಲಿಕೆ ಆಯುಕ್ತ ಮತ್ತು ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ನೀಡಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಉತ್ತರಹಳ್ಳಿ ಹೋಬಳಿ ಮಲ್ಲಸಂದ್ರ ಗ್ರಾಮದ ಸರ್ವೆ ನಂಬರ್ 18/1ಎ4, 18/1ಎ5, 18/1ಎ6, 18/1ಎ7, 18/1ಎ8 ಮತ್ತು 18/1ಎ9ಕ್ಕೆ ಸೇರಿದ 10.20 ಎಕರೆ ಕಂದಾಯ ಸ್ವತ್ತು ಚೆನ್ನೈ ಮೂಲದ ಸಿ.ಜಿ.ಸತೀಶ್‌ ಮಾಲೀಕತ್ವದ ‘ಕ್ಯಾಸಾಗ್ರಾಂಡ್ ಲೋಟಸ್ ಪ್ರೈವೇಟ್ ಲಿಮಿಟೆಡ್’ ಎಂಬ ಕಟ್ಟಡ ನಿರ್ಮಾಣ ಸಂಸ್ಥೆಗೆ ಸೇರಿದೆ.

ಐದು ಕೋಟಿ ರು. ಲಂಚದ ಆರೋಪ:

ಈ ಸ್ವತ್ತಿಗೆ ಅಕ್ರಮವಾಗಿ ‘ಎ’ ಖಾತೆ ಮಾಡಿಕೊಡಲು ವಾರ್ಡ್‌ ಸಂಖ್ಯೆ 198ರ ಕಂದಾಯ ಪರಿವೀಕ್ಷಕ ಶಿವಕುಮಾರ್‌, ಸಹಾಯಕ ಕಂದಾಯ ಅಧಿಕಾರಿ ರಮೇಶ್ ರಾಥೋಡ್‌, ಉಪ ಆಯುಕ್ತ ಅಬ್ದುಲ್‌ ರಬ್‌ ಮತ್ತು ಜಂಟಿ ಆಯುಕ್ತೆ ಆರತಿ ಆನಂದ್‌ ಅವರು ಸ್ವತ್ತಿನ ಮಾಲೀಕ ಸಿ.ಜಿ.ಸತೀಶ್ ಅವರಿಂದ ಲಂಚ ರೂಪದಲ್ಲಿ 5 ಕೋಟಿ ರು.ಗೂ ಅಧಿಕ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಪಾಲಿಕೆಗೆ ಹತ್ತಾರು ಕೋಟಿ ರು. ನಷ್ಟ

ಬಳಿಕ ಈ 10.20 ಎಕರೆ ಪೈಕಿ 30 ಅಡಿ ವಿಸ್ತೀರ್ಣದ ಸ್ವತ್ತಿಗೆ ನಕಲಿ ಪಿಐಡಿ ಸಂಖ್ಯೆ ನೀಡಿ, ‘ಎ’ ಖಾತಾ ಮಾಡಿಕೊಟ್ಟಿದ್ದಾರೆ. ಈಗ ಮತ್ತೆ ಅದೇ ಸ್ವತ್ತಿನ 4.36 ಲಕ್ಷ ಚದರ ಅಡಿ ಮತ್ತು 40,519 ಚ.ಮೀ. ವಿಸ್ತೀರ್ಣದ ಸ್ವತ್ತಿಗೆ ತಿದ್ದುಪಡಿ ಮಾಡುವ ಸಂಬಂಧ ಟಿಪ್ಪಣಿ ಹಾಳೆಗಳನ್ನು ಸಿದ್ಧಪಡಿಸಿದ್ದಾರೆ. ಇದಕ್ಕೆ ‘ಎ’ ಖಾತಾ ಮಾಡಲು ನಮೂನೆ-ಎ ಸಿದ್ಧಪಡಿಸಿದ್ದಾರೆ. ಈ ಮೂಲಕ ನಗರ ಪಶ್ಚಿಮ ನಗರ ಪಾಲಿಕೆಗೆ ಹತ್ತಾರು ಕೋಟಿ ರು. ನಷ್ಟ ಉಂಟು ಮಾಡಿದ್ದಾರೆ. ಈ ಅಧಿಕಾರಿಗಳು ಈಗಾಗಲೇ ನೂರಾರು ನಕಲಿ ಪಿಐಡಿಗಳನ್ನು ಸೃಷ್ಟಿಸಿ, ಲಕ್ಷಾಂತರ ರು. ಲಂಚ ಪಡೆದು ಪಾಲಿಕೆಗೆ ವಂಚಿಸಿದ್ದಾರೆ ಎಂದು ಆಪಾದಿಸಿದ್ದಾರೆ.

ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ:

ಈ 10.20 ಎಕರೆ ವಿಸ್ತೀರ್ಣದ ಸ್ವತ್ತಿನ ಪೈಕಿ ಪ್ರಾರಂಭದ ಹಂತದಲ್ಲಿ 30 ಅಡಿಗಳ ವಿಸ್ತೀರ್ಣದ ಸ್ವತ್ತಿಗೆ ನಕಲಿ ಪಿಐಡಿ ಸೃಷ್ಟಿಸಿ ಬಳಿಕ ಖಾತೆ ಮಾಡಿಕೊಟ್ಟಿದ್ದು, ನಂತರ ಸಂಪೂರ್ಣ 10.20 ಎಕರೆ ವಿಸ್ತೀರ್ಣದ ಸ್ವತ್ತಿಗೆ ತಿದ್ದುಪಡಿ ಮಾಡುವ ಹೆಸರಿನಲ್ಲಿ ಖಾತಾವನ್ನು ಮಾಡಿಕೊಡುವ ಕಾನೂನು ಬಾಹಿರ ಕಾರ್ಯಕ್ಕೆ ಕೈ ಹಾಕಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜತೆಗೆ ಸೇವೆಯಿಂದಲೇ ವಜಾಗೊಳಿಸುವಂತೆ ಎನ್‌.ಆರ್‌.ರಮೇಶ್‌ ಅವರು ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಕ್ತಿ ಯೋಜನೆ ಫಲಾನುಭವಿ ಸ್ತ್ರೀಯರಿಗೆ ಸ್ಮಾರ್ಟ್‌ಕಾರ್ಡ್‌
ಎಸ್‌ಐಆರ್‌ಗೆ ಸಂಪುಟದಲ್ಲಿ ತೀವ್ರ ವಿರೋಧ - ವರದಿ ನೀಡಲು ಕಾನೂನು