
ಬೆಂಗಳೂರು (ಏ.10): ಸರ್ಕಾರಿ ಆಸ್ಪತ್ರೆಗಳಲ್ಲಿ ದಂತ ಆರೈಕೆ ಸೇವೆ ಉತ್ತಮಪಡಿಸುವ ಸಲುವಾಗಿ ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ’ (ಪಿಎಂಜೆಎವೈ ಮತ್ತು ಸಿಎಂ ಎಆರ್ಕೆ) ಯೋಜನೆಯಡಿ ರೂಟ್ ಕೆನಾಲ್ ಚಿಕಿತ್ಸೆಯನ್ನೂ (ಆರ್ಸಿಟಿ) ಸೇರಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
ಹಲ್ಲಿನ ತಿರುಳಿನ ಸೋಂಕು ಅಥವಾ ಉರಿಯೂತಕ್ಕೆ ಚಿಕಿತ್ಸೆ ನೀಡಲು ರೂಟ್ ಕೆನಾಲ್ ಚಿಕಿತ್ಸೆ ಮಾಡಲಾಗುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ, ಸೋಂಕು ಸುತ್ತಮುತ್ತಲಿನ ಅಂಗಾಂಶಗಳಿಗೆ ಹರಡಿ, ಇತರೆ ಹಲ್ಲುಗಳಿಗೂ ಹಾನಿಯಾಗಬಹುದು. ಆದರೆ ಹೆಚ್ಚಿನ ಚಿಕಿತ್ಸಾ ವೆಚ್ಚ ಮತ್ತು ಜಾಗೃತಿ ಕೊರತೆಯಿಂದಾಗಿ ಹೆಚ್ಚಿನ ಜನ ರೂಟ್ ಕೆನಾಲ್ ಬದಲಿಗೆ ದಂತ ತೆಗೆಯುವ ವಿಧಾನವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಆರೋಗ್ಯ ಕರ್ನಾಟಕ ಯೋಜನೆಯಡಿ ಇದನ್ನು ಸೇರಿಸುವುದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಆದೇಶದ ಎರಡು ವಿಭಾಗಗಳನ್ನು ಒಳಗೊಂಡಿದ್ದು, ಮುಂಭಾಗದ ಹಲ್ಲುಗಳು ಮತ್ತು ಹಿಂಭಾಗದ ಹಲ್ಲುಗಳಿಗೆ ರೂಟ್ ಕೆನಾಲ್ ಚಿಕಿತ್ಸೆ ನೀಡುವುದನ್ನು ಸಂಕೀರ್ಣ ದ್ವಿತೀಯ ಕಾರ್ಯವಿಧಾನ (2ಬಿ)ಎಂದು ವರ್ಗೀಕರಿಸಲಾಗಿದೆ.
ಯೋಜನೆ ಜಾರಿಗೆ ನೋಡಲ್ ಏಜೆನ್ಸಿಯಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜವಾಬ್ದಾರಿ ನೀಡಿದ್ದು, ಪ್ಯಾಕೇಜ್ ದರವನ್ನು ಮುಂಭಾಗದ ಹಲ್ಲುಗಳಿಗೆ 1,360 ರು. ಮತ್ತು ಹಿಂಭಾಗದ ಹಲ್ಲುಗಳಿಗೆ 2,040 ರು. ಎಂದು ನಿಗದಿಪಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ