ಶಂಕಿತರ ನಿಗಾಗೆ ಖಾಸಗಿ ಹೋಟೆಲ್‌, ರೆಸಾರ್ಟ್‌ ಬಳಕೆ!

By Kannadaprabha NewsFirst Published Mar 19, 2020, 8:54 AM IST
Highlights

ಶಂಕಿತರ ನಿಗಾಗೆ ಖಾಸಗಿ ಹೋಟೆಲ್‌, ರೆಸಾರ್ಟ್‌ ಬಳಕೆ| ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲಿನ ಹೋಟೆಲ್, ರೆಸಾರ್ಟ್ ಬಳಕೆಗೆ ನಿರ್ಧಾರ

ಬೆಂಗಳೂರು[ಮಾ.19]: ರಾಜ್ಯಕ್ಕೆ ಆಗಮಿಸುವ ಪ್ರತಿಯೊಬ್ಬ ವಿದೇಶಿ ಪ್ರಯಾಣಿಕರನ್ನು ಹದಿನೈದು ದಿನಗಳ ಕಾಲ ಕಟ್ಟುನಿಟ್ಟಾಗಿ ಪ್ರತ್ಯೇಕವಾಗಿಟ್ಟು ನಿಗಾ ವಹಿಸಲಾಗುವುದು. ಇದಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲಿನ ಹೋಟೆಲ್‌ಗಳು ಹಾಗೂ ರೆಸಾರ್ಟ್‌ಗಳನ್ನು ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

"

ಪ್ರಸ್ತುತ ರೋಗ ಲಕ್ಷಣಗಳು ಕಾಣಿಸದವರನ್ನು ಮನೆಯಲ್ಲೇ ಪ್ರತ್ಯೇಕ ನಿಗಾ ವಹಿಸಲಾಗುತ್ತಿದೆ. ರೋಗ ಲಕ್ಷಣ ಗೋಚರಿಸಿದ್ದರೆ ಅವರನ್ನು ವೈದ್ಯಕೀಯ ವ್ಯವಸ್ಥೆಯೊಂದಿಗೆ ಪ್ರತ್ಯೇಕವಾಗಿಟ್ಟು ನಿಗಾ ವಹಿಸಲಾಗುತ್ತಿದೆ. ಈ ರೀತಿ ವಿದೇಶದಿಂದ ಬರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಪ್ರತ್ಯೇಕವಾಗಿಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಏರ್ಪೋರ್ಟ್‌ ಸುತ್ತಮುತ್ತಲಿನ ಸರ್ಕಾರಿ ಕಾಲೇಜು, ಖಾಸಗಿ ವೈದ್ಯಕೀಯ ಕಾಲೇಜುಗಳು ಮಾತ್ರವಲ್ಲದೆ ಖಾಸಗಿ ಹೋಟೆಲ್‌ಗಳು, ರೆಸಾರ್ಟ್‌ಗಳನ್ನೂ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದರು.

ವಿಧಾನಸೌಧ ಪ್ರವೇಶಕ್ಕೆ ಕಠಿಣ ನಿಯಮ

ವಿಧಾನಮಂಡಲ ಅಧಿವೇಶನದ ಉಭಯ ಸದನಗಳ ವೀಕ್ಷಣೆಗೆ ಬರುತ್ತಿದ್ದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಮಧ್ಯಾಹ್ನ 3 ಗಂಟೆ ಮೇಲೆ ಅವಕಾಶ ಕಲ್ಪಿಸಬೇಕು ಎಂದು ಆದೇಶಿಸಲಾಗಿದೆ. ಮಧ್ಯಾಹ್ನ 3 ಗಂಟೆಯ ಬಳಿಕವೂ ನಿರ್ದಿಷ್ಟಕಾರಣವಿಲ್ಲದೆ ಸಾರ್ವಜನಿಕರನ್ನು ಒಳ ಬಿಡಬಾರದು. ಹೆಚ್ಚು ಜನದಟ್ಟಣೆ ಉಂಟಾದರೆ ಸೋಂಕು ಬೇಗ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಆದಷ್ಟುಸಾರ್ವಜನಿಕರನ್ನು ನಿರ್ಬಂಧಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

click me!