
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಅ.15): ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಮಾತಿದೆ. ಅಂತೆಯೇ ಕೋಟೆನಾಡು ಚಿತ್ರದುರ್ಗದಲ್ಲಿ ರಾಜೀವ ಗಾಂಧಿ ಆಶ್ರಯ ಯೋಜನೆಯಡಿ ಅರ್ಜಿ ಸಲ್ಲಿಸಿದರೂ ಸಿಗದೆ ಕಂಗಾಲಾದ ಬಡ ಕುಟುಂಬಗಳದು ಇದೇ ಆಗಿದೆ. ರಾಜೀವ ಗಾಂಧಿ ಆಶ್ರಯ ಯೋಜನೆಯಡಿ ಬಾರಿ ಗೋಲ್ಮಾಲ್ ಆರೋಪ ಕೇಳಿಬಂದಿದೆ. ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಮನೆ ನೀಡುವ ಬದಲಾಗಿ, ಅಕ್ರಮವಾಗಿ ಹಣಕ್ಕೆ ಮನೆ ಮಾರಾಟ ಮಾಡಿದ್ದಾರೆಂಬ ಆರೋಪ ಮಾಜಿ ಶಾಸಕರ ವಿರುದ್ಧ ಕೇಳಿ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ನೋಡಿ ಹೀಗೆ ಉದ್ಘಾಟನೆ ಭಾಗ್ಯವೇ ಕಾಣದೇ ಪಾಳುಬಿದ್ದ ಮನೆ. ಅರ್ಧಕ್ಕೆ ನಿಂತಿರೊ ಮನೆ ಕಟ್ಟಡದ ಕಾಮಗಾರಿ. ಈ ದೃಶ್ಯಗಳು ಕಂಡುಬಂದಿದ್ದು, ಚಿತ್ರದುರ್ಗ ನಗರದ ಆಶ್ರಯ ಬಡವಣೆಯಲ್ಲಿ. ಹೌದು, ರಾಜೀವ್ ಗಾಂಧಿ ಆಶ್ರಯ ಯೋಜನೆಯಡಿ 400 ಕ್ಕು ಅಧಿಕ ಮನೆಗಳು ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಮಂಜೂರಾಗಿದ್ವು. ಹೀಗಾಗಿ ಅವುಗಳಲ್ಲಿ 124 ಜನ ಅರ್ಹ ಫಲಾನುಭವಿಗಳು ನಗರಸಭೆಯಿಂದ ಮನೆಯ ಹಕ್ಕು ಪತ್ರಗಳನ್ನು ವಿತರಿಸಿದ್ದಾರೆ. ಆದರೆ ಹಕ್ಕುಪತ್ರ ಪಡೆದ ಆಶ್ರಯ ಯೋಜನೆಯ ನಿಗದಿತ ನಂಬರಿನ ಮನೆಗಳಲ್ಲಿ ಈಗಾಗಲೇ ಬೇರೆಯವರು ವಾಸವಾಗಿದ್ದಾರೆ. ಹೀಗಾಗಿ ಅವರನ್ನು ಖಾಲಿ ಮಾಡಿಸಿ ಅರ್ಹ ಫಲಾನುಭವಿಗಳಿಗೆ ಮನೆ ವಿತರಿಸಬೇಕಾದ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಕೇವಲ ಹಕ್ಕು ಪತ್ರ ಕೊಟ್ಟು ಕೈತೊಳೆದು ಕೊಂಡಿದ್ದಾರೆ.
ಮುಂಡರಗಿ ಲೇಔಟ್: ಅಶ್ರಯ ಮನೆಗಳ ಹಂಚಿಕೆ ವಿಚಾರಕ್ಕೆ ಬಿಜೆಪಿ-ಕಾಂಗ್ರೆಸ್ ಹಗ್ಗ ಜಗ್ಗಾಟ
ಇದರಿಂದಾಗಿ ಅರ್ಹ ಫಲಾನುಭವಿಗಳು ಮನೆ ಸಿಗಲಾರದೇ ಪರದಾಡುವಂತಾಗಿದೆ. ಅಲ್ಲದೇ ಹಕ್ಕುಪತ್ರ ಪಡೆಯಲು ಸರ್ಕಾರ ನಿಗದಿಪಡಿಸಿದ್ದ ಹಣ ಕಟ್ಟಿರೋ ಫಲಾನುಭವಿಗಳಿಗೆ ಅತ್ತ ಹಣವೂ ಇಲ್ಲ, ಇತ್ತ ಮನೆಯೂ ಇಲ್ಲ ಎಂಬಂತಾಗಿದೆ. ಜೊತೆಗೆ ನಗರಸಭೆ ಅಧಿಕಾರಿಗಳು ಹಾಗು ಮಾಜಿ ಶಾಸಕ ತಿಪ್ಪಾರೆಡ್ಡಿ ಶಾಮೀಲಾತಿಯಲ್ಲಿ ಈ ಗೋಲ್ಮಾಲ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿದ್ರೆ ಅಕ್ರಮ ಬಯಲಾಗಲಿದೆ ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಇನ್ನು ಆಶ್ರಯ ಯೋಜನೆ ಮನೆಗೆ ಸಾಲಸೋಲ ಮಾಡಿ,ವಂತಿಕೆ ಹಣ ಕಟ್ಟಿದವರು ಈಗ ಪರಿತಪಿಸುವಂತಾಗಿದೆ. ನಿರ್ಗತಿಕರಿಗೆ ವಾಸಿಸಲು ಮನೆ ಇಲ್ಲ.ಅತ್ತ ಹಣವೂ ಇಲ್ಲದಂತಾಗಿದೆ.ಈ ಬಗ್ಹೆ ಹಲವು ಬಾರಿ ಮಾಜಿ ಶಾಸಕರು, ಹಾಗು ಅಧಿಕಾರಿಗಳಬಳಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಹೀಗಾಗಿ ಕೂಡಲೇ ಸೂಕ್ತ ತನಿಖೆ ನಡೆಸಿ ಅರ್ಹ ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿ ಮನೆ ಭಾಗ್ಯ ಕಲ್ಪಿಸುವಂತೆ ವಂಚಿತ ಫಲಾನುಭವಿಗಳು ಒತ್ತಾಯಿಸಿದ್ದಾರೆ.
ಯಾದಗಿರಿ ನಗರಸಭೆಯಲ್ಲಿ ಭಾರೀ ಗೋಲ್ಮಾಲ್ ಆರೋಪ: ಅಕ್ರಮ ಬಯಲಿಗೆಳೆದ ಪೌರಾಯುಕ್ತರಿಗೆ ಜೀವ ಬೆದರಿಕೆ !
ಒಟ್ಟಾರೆ ರಾಜೀವ್ ಗಾಂಧಿ ಯೋಜನೆಯಡಿ ನಿರ್ಮಾಣ ಮಾಡಿರುವ ಆಶ್ರಯ ಮನೆವಿತರಣೆಯಲ್ಲಿ ಬಾರಿ ಗೋಲ್ಮಾಲ್ ನಡೆದಿದೆ. ಆದ್ರೆ ನೂತನ ಶಾಸಕ ವೀರೇಂದ್ರ ಪಪ್ಪಿ ಗಮನಕ್ಕೆ ಈ ವಿಚಾರ ಬಂದರೂ ಸಹ ಮೌನ ವಹಿಸಿರೋದು ವಿಪರ್ಯಾಸ. ಇನ್ನಾದ್ರು ಸಂಬಂಧಪಟ್ಟವರು ಅರ್ಹ ಫಲಾನುಭವುಗಳಿಗೆ ನ್ಯಾಯ ಒದಗಿಸಲು ಮುಂದಾಗ್ತಾರ ಅನ್ನೋದನ್ನ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ