
ಬೆಂಗಳೂರು, (ಆಗಸ್ಟ್ 8): 2024ರ ಲೋಕಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಮತ ಕಳ್ಳತನದ ವಿರುದ್ಧ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಎಂಬ ಘೋಷಣೆಯೊಂದಿಗೆ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಿದ್ದಾರೆ. ಚುನಾವಣಾ ಆಯೋಗ, ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ಸಂವಿಧಾನದ ‘ಒಬ್ಬರಿಗೆ ಒಂದು ಮತ’ ತತ್ವದ ಮೇಲೆ ಮೋದಿ ಸರ್ಕಾರ ದಾಳಿ ಮಾಡಿದೆ ಎಂದು ಆರೋಪಿಸಿದರು.
ಮಹಾದೇವಪುರ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ್ಳತನ: ರಾಹುಲ್ ಗಾಂಧಿ ಆರೋಪ:
ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಮಗೆ 19 ಸ್ಥಾನಗಳು ಬರುವ ನಿರೀಕ್ಷೆಯಿತ್ತು, ಆದರೆ ಕೇವಲ 9 ಸ್ಥಾನಗಳು ಮಾತ್ರ ದೊರೆತಿವೆ. ಮಹಾದೇವಪುರ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ ಕಳ್ಳತನವಾಗಿದೆ. ಪ್ರತಿ ಆರು ಮತಗಳಲ್ಲಿ ಒಂದು ನಕಲಿಯಾಗಿದೆ. ಒಬ್ಬನೇ ಮತದಾರ ಹಲವು ರಾಜ್ಯಗಳಲ್ಲಿ ಮತ ಚಲಾಯಿಸಿದ್ದಾನೆ ಎಂಬ ಸಾಕ್ಷ್ಯ ನಮ್ಮ ಬಳಿಯಿದೆ ಎಂದು ಗಂಭೀರ ಆರೋಪ ಮಾಡಿದರು.
ಮಹರಾಷ್ಟ್ರ ಚುನಾವಣೆಯಲ್ಲೂ ಮತಗಳ್ಳತನ:
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಆಶ್ಚರ್ಯ ತರಿಸಿತು. ಒಂದು ಕೋಟಿ ಹೆಚ್ಚುವರಿ ಮತಗಳು ಬಿಜೆಪಿಗೆ ಹೋಗಿವೆ. ನಮ್ಮ ಮಹಾಘಟಬಂಧನ್ಗೆ ಲೋಕಸಭೆಯಂತೆಯೇ ಮತಗಳು ಸಿಕ್ಕಿವೆ, ಆದರೆ ಹೊಸದಾಗಿ ಚಲಾಯಿಸಲಾದ ಮತಗಳೆಲ್ಲ ಬಿಜೆಪಿಗೆ ತಿರುಗಿವೆ. ನಮಗೆ ಆಗಲೇ ಸಂಶಯ ಬಂತು. ಇದು ಸಂವಿಧಾನದ ಮೇಲಿನ ದಾಳಿಯಲ್ಲವೇ? ಎಂದು ಪ್ರಶ್ನಿಸಿದರು.
ಚುನಾವಣಾ ಆಯೋಗಕ್ಕೆ ರಾಹುಲ್ ಗಾಂಧಿ ತಿರುಗೇಟು
ಒಬ್ಬನೇ ಮತದಾರ ಹಲವು ರಾಜ್ಯದಲ್ಲಿ ಮತದಾನ ಮಾಡಿದ್ದಾರೆ. ಎಲ್ಲ ಕಡೆ ಮತದಾನದ ಹಕ್ಕು ಕೊಟ್ಟಿದ್ದಾರೆ. ನನ್ನ ಹತ್ರ ಚುನಾವಣಾ ಆಯೋಗ ಡಿಕ್ಲರೇಷನ್ ಕೇಳುತ್ತಿದ್ದಾರೆ. ಆಯೋಗಕ್ಕೆ ಬಂದು ಸಾಕ್ಷಿ ಕೊಡಿ ಅಂದಿದ್ದಾರೆ. ನಾನು ಸಂವಿಧಾನದ ಮೇಲೆ ಪ್ರಮಾಣ ಮಾಡಿದ್ದೇನೆ. ನಾನು ಹೇಳಿದ್ದೆಲ್ಲ ನಿಜ. ಬಿಹಾರ ಚುನಾವಣಾ ವೆಬ್ ಸೈಟ್ ಬಂದ್ ಮಾಡಿದ್ದಾರೆ. ನಾವು ಈ ರೀತಿಯಲ್ಲಿ ಪ್ರಶ್ನೆ ಮಾಡಿದ್ರೆ ಅವರ ಮುಖವಾಡ ಕಳಚುತ್ತೆ ಅಂತ ಬಂದ್ ಮಾಡಿದ್ದಾರೆ. ಚುನಾವಣಾ ಆಯೋಗ ಡಿಜಿಟಲ್ ಪಟ್ಟಿ ಕೊಡಬೇಕು. ಸಿಸಿಟಿವಿ ಪೂಟೇಜ್ ಕೊಡಬೇಕು. ನಮಗೆ ಈ ಮಾಹಿತಿ ಕೊಟ್ಟರೆ ನಾವು ಮತಗಳ್ಳತನ ಸಾಬೀತು ಮಾಡುತ್ತೇವೆ ಎಂದು ತಿರುಗೇಟು ನೀಡಿದರು.
ಚುನಾವಣಾ ಆಯೋಗ ಜನರ ಮೇಲೆ ಆಕ್ರಮಣ ಮಾಡಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ. ನೀವು ಸಂವಿಧಾನದ ಮೇಲೆ ಆಕ್ರಮಣ ಮಾಡಿದ್ದೀರಿ. ಮತ್ತೊಮ್ಮೆ ಆಲೋಚನೆ ಮಾಡಿ. ನಮಗೆ ಸಮಯ ಹಿಡಿಯುತ್ತೆ ಆದ್ರೆ ನಿಮ್ಮನ್ನು ಬಿಡಲ್ಲ. ಎಲ್ಲರನ್ನೂ ಹಿಡಿದು ಪಾಠ ಕಲಿಸುತ್ತೇವೆ. ಇದು ಭಾರತದ ಧ್ವನಿ. ಚುನಾವಣಾ ಆಯೋಗ, ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಪ್ರಧಾನಿ ವಿರುದ್ಧವೂ ರಾಹುಲ್ ಗಾಂಧಿ ಗಂಭೀರ ಆರೋಪ:
ಪ್ರಧಾನಿ ಮೋದಿ 25 ಕ್ಷೇತ್ರಗಳಲ್ಲಿ ಕಡಿಮೆ ಅಂತರದಿಂದ ಗೆದ್ದು ಪ್ರಧಾನಿಯಾಗಿದ್ದಾರೆ. ಒಂದು ಕ್ಷೇತ್ರದಲ್ಲಿ ಮತ ಕಳ್ಳತನವನ್ನು ಸಾಬೀತು ಮಾಡಿದ್ದೇವೆ. ಡಿಜಿಟಲ್ ಸಾಕ್ಷ್ಯ ಸಿಕ್ಕರೆ ಎಲ್ಲವೂ ಬಯಲಾಗುತ್ತದೆ ಎಂದು ಮೋದಿ ವಿರುದ್ಧ ಗುಡುಗಿದ್ದಾರೆ. ಇದೇ ವೇಳೆ ಕರ್ನಾಟಕ ಸರ್ಕಾರಕ್ಕೆ ಕರೆ ನೀಡಿರುವ ರಾಹುಲ್ ಗಾಂಧಿ, ಮಹಾದೇವಪುರದಲ್ಲಿ ನಡೆದ ಮತ ಕಳ್ಳತನವು ಕರ್ನಾಟಕದ ಜನರ ವಿರುದ್ಧದ ಹೀನ ಅಪರಾಧ. ರಾಜ್ಯ ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ಜನರಿಗೆ ನ್ಯಾಯ ಕೊಡಿಸಬೇಕು ಎಂದು ತಮ್ಮದೇ ಸರ್ಕಾರವನ್ನು ಒತ್ತಾಯಿಸಿದರು.
ಸಂವಿಧಾನದ ಮೇಲೆ ದಾಳಿ ಮಾಡಿದ್ರೆ ನಾವು ನಿಮ್ಮ ಮೇಲೆ ದಾಳಿ ಮಾಡ್ತೇವೆ ಎಂದ ರಾಹುಲ್ ಗಾಂಧಿ!
ಸಂವಿಧಾನದ ಮೇಲೆ ದಾಳಿ ಮಾಡಿದರೆ ನಾವು ನಿಮ್ಮ ಮೇಲೆ ದಾಳಿ ಮಾಡುತ್ತೇವೆ. ಸಮಯ ಬಂದಾಗ ಒಬ್ಬೊಬ್ಬರನ್ನಾಗಿ ಹಿಡಿದು ಪಾಠ ಕಲಿಸುತ್ತೇವೆ. ಇದು ಭಾರತದ ಧ್ವನಿ ಎಂದು ರಾಹುಲ್ ಗಾಂಧಿ ಚುನಾವಣಾ ಆಯೋಗ ಮತ್ತು ಬಿಜೆಪಿಯನ್ನು ಎಚ್ಚರಿಸಿದ್ದಾರೆ.ಕರ್ನಾಟಕದ ಜನರಿಗೆ ನ್ಯಾಯಕ್ಕಾಗಿ ಈ ಹೋರಾಟ ಮುಂದುವರಿಯಲಿದೆ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ