
ಉಡುಪಿ (ಸೆ.2): ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಾಸೋತ್ಸವದ ಸಮಾರೋಪ ಸಮಾರಂಭದಲ್ಲಿ ಸಂಸ್ಕೃತ ಭಾಷೆಯಲ್ಲಿ ಮಾತನಾಡಿದ ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಭಾಷಣ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮತ್ತು ವಿರೋಧಕ್ಕೆ ಕಾರಣವಾಗಿದೆ.
ಸಂಸ್ಕೃತ ಎಲ್ಲ ಭಾಷೆಗಳ ತಾಯಿ, ಉಳಿದೆಲ್ಲಾ ಭಾಷೆಗಳು ಪ್ರಾದೇಶಿಕ ಭಾಷೆಗಳು. ಆದರೇ ಸಂಸ್ಕೃತ ವಿಶ್ವಭಾಷೆಯೂ ಹೌದು, ದೇವಭಾಷೆಯೂ ಹೌದು, ಪರಲೋಕದ ಭಾಷೆಯೂ ಹೌದು. ಸ್ವರ್ಗ ಲೋಕಕ್ಕೆ ಹೋಗಬೇಕಾದರೆ ಸಂಸ್ಕೃತ ಕಲಿಯಬೇಕು. ಸಂಸ್ಕೃತ ಪವಿತ್ರ, ಶ್ರೇಷ್ಠ, ಪಾವನ ವಿಶ್ವಭಾಷೆ. ದೇವರ ಎಲ್ಲಾ ಶ್ಲೋಕಗಳು ಪೂಜೆಗಳು ಸಂಸ್ಕೃತ ಭಾಷೆಯಲ್ಲಿ ನಡೆಯುತ್ತದೆ ಎಂದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ, ಸ್ವಾಮೀಜಿಯ ಈ ಹೇಳಿಕೆಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
ಬೆಂಗಳೂರಿನಲ್ಲಿ ನಿಷೇಧಿತ ಪಿಓಪಿ ಗಣೇಶ ಮೂರ್ತಿ ಭರ್ಜರಿ ಮಾರಾಟ, ಕ್ರಿಮಿನಲ್ ಕೇಸ್ ಎಚ್ಚರಿಕೆ ಲೆಕ್ಕಕ್ಕೇ ಇಲ್ಲ!
ಅಷ್ಟಮಿಯ ಸಮಾರೋಪ ಭಾಷಣದಲ್ಲಿ ಮಾತನಾಡಿದ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು, ಒಂದು ತಿಂಗಳುಗಳ ಕಾಲ ನಡೆದ ಶ್ರೀ ಕೃಷ್ಣ ಮಹಾಸ್ವೋತ್ಸವವನ್ನು ದೇವರಿಗೆ ಅರ್ಪಣೆ ಮಾಡಿದ್ದೇವೆ. ಸಂಸ್ಕೃತ ಒಂದು ವಿಶ್ವ ಭಾಷೆ..ದೇವ ಭಾಷೆ. ದೇವರ ಕಾರ್ಯಕ್ರಮದಲ್ಲಿ ದೇವ ಭಾಷೆಯನ್ನೇ ಬಳಸುತ್ತೇವೆ. ಸರ್ವ ಭಾಷೆಗಳಿಗೆ ಮೂಲ ಸಂಸ್ಕೃತ. ಎಲ್ಲ ಭಾಷೆಗಳ ತಾಯಿ ಸಂಸ್ಕೃತ. ತುಳು ಕನ್ನಡ ಮಲಯಾಳಂ ಹಿಂದಿ, ತಮಿಳು, ತೆಲುಗು ಭಾಷೆಗಳು ಹುಟ್ಟಿಕೊಂಡಿರುವುದೇ ಸಂಸ್ಕೃತದಿಂದ ಕೇವಲ ಭಾರತೀಯ ಭಾಷೆಗಳಿಗೆ ಮಾತ್ರ ಸಂಸ್ಕೃತ ಮೂಲವಲ್ಲ. ಆಂಗ್ಲ ಭಾಷೆಗಳಿಗೂ ಮೂಲ ಸಂಸ್ಕೃತವೇ. ಪಿತಾದಿಂದ ಫಾದರ್, ಮದರ್ ಹುಟ್ಟಿಕೊಂಡಿದೆ. ಸಮಗ್ರವು ಸಂಸ್ಕೃತ ಭಾಷೆಯಿಂದ ಹುಟ್ಟಿಕೊಂಡಿದೆ. ಸಂಸ್ಕೃತ ಭಾಷೆಯನ್ನು ಹೊರತುಪಡಿಸಿ ಇತರ ಭಾಷೆಗಳು ಪ್ರಾದೇಶಿಕ ಭಾಷೆಗಳಾಗಿವೆ.
ಕರ್ನಾಟಕದಲ್ಲಿ ಕನ್ನಡ, ದೇಶದಲ್ಲಿ ಹಿಂದಿ, ವಿದೇಶದಲ್ಲಿ ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆ. ಸಂಸ್ಕೃತ ಭಾಷಾ ಅಂತರ್ಲೋಕೀಯ ಭಾಷೆ. ದೇವಲೋಕದಲ್ಲಿ ವ್ಯವಹರಿಸುವುದು ಸಂಸ್ಕೃತ ಭಾಷೆಯಲ್ಲಿ ಸಂಸ್ಕೃತ ದೇವ ಭಾಷೆ. ಸಂಸ್ಕೃತ ಭಾಷೆ ತಿಳಿಯದಿದ್ದರೆ ದೇವಲೋಕಕ್ಕೆ ವೀಸಾ ಸಿಗುವುದಿಲ್ಲ. ಸ್ವರ್ಗ ಲೋಕಕ್ಕೆ ಹೋಗಬೇಕಾದರೆ ಸಂಸ್ಕೃತ ಕಲಿಯಬೇಕು. ಸಂಸ್ಕೃತ ಪವಿತ್ರ ಶ್ರೇಷ್ಠ ಪಾವನ ವಿಶ್ವಭಾಷೆ. ದೇವರ ಎಲ್ಲಾ ಶ್ಲೋಕಗಳು ಪೂಜೆಗಳು ಸಂಸ್ಕೃತ ಭಾಷೆಯಲ್ಲಿ ನಡೆಯುತ್ತದೆ. ಒಂದು ತಿಂಗಳುಗಳ ಕಾಲ ನಡೆದ ಶ್ರೀ ಕೃಷ್ಣ ಮಹಾಸ್ವೋತ್ಸವವನ್ನು ದೇವರಿಗೆ ಅರ್ಪಣೆ ಮಾಡಿದ್ದೇವೆ. ಶ್ರೀಕೃಷ್ಣನ ಮಹೋತ್ಸವದ ಸಂದರ್ಭದಲ್ಲಿ ದೇವ ಭಾಷೆ ಸಂಸ್ಕೃತದಲ್ಲಿ ನಾನು ಮಾತನಾಡಿದೆ ಎಂದಿದ್ದಾರೆ.
ಅಮ್ಮನ ತವರಿಗೆ ಬಂದು ಕೃಷ್ಣನ ಆಶೀರ್ವಾದ ಪಡೆದ ಜೂ. ಎನ್ಟಿಆರ್, ಸಾಥ್ ಕೊಟ್ಟ ರಿಷಭ್ ಶೆಟ್ಟಿ
ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯವಹಿಸಿದ್ದರು. ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ, ವಿದಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಸಚಿವ ಪ್ರಮೋದ್ ಉಪಸ್ಥಿತರಿದ್ದರು. ವಿದ್ವಾನ್ ಗೋಪಾಲಾಚಾರ್ಯರು ಕಾರ್ಯಕ್ರಮ ಸಂಯೋಜಿಸಿದರು, ವಿದ್ವಾನ್ ರಘೋತ್ತಮ ಆಚಾರ್ಯರು ರಾಜ್ಯಪಾಲರನ್ನು, ಗಣ್ಯರನ್ನು ಸ್ವಾಗತಿಸಿದರು.
ಗೀತೆ ಎಲ್ಲ ವೇದ, ಉಪನಿಷತ್ಗಳ ಸಾರ: ಆರೀಫ್ ಖಾನ್:
ಇನ್ನು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು, ನಮಗೆ ಲಭಿಸಿರುವ ಸಂಪತ್ತನ್ನು ಬೇರೆಯವರೊಂದಿಗೆ ಹಂಚಿಕೊಳ್ಳದೆ ಅನುಭವಿಸುವುದು ಬೇರೆಯವರ ಸಂಪತನ್ನು ಕದ್ದಷ್ಟೇ ಅನೈತಿಕವಾದುದು ಎಂದು ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಇದು ಭಗವದ್ಗೀತೆಯ ಅತ್ಯುತ್ತಮ ಸಂದೇಶವಾಗಿದೆ ಎಂದರು.
ಭಗವದ್ಗೀತೆ ಎಲ್ಲ ವೇದಗಳ ಮತ್ತು ಉಪನಿಷತ್ಗಳ ಸಾರವಾಗಿದೆ. ಅದರ ಅಧ್ಯಯನದಿಂದ ಭಾರತೀಯ ಎಲ್ಲ ಸಾಹಿತ್ಯದ ಅಧ್ಯಯನದ ಲಾಭ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಪುತ್ತಿಗೆ ಶ್ರೀಗಳ ಕೋಟಿ ಗೀತಾ ಯಜ್ಞ ಶ್ಲಾಘನೀಯ ಎಂದವರು ಹೇಳಿದರು.
ಗೀತೆಯ ಶ್ಲೋಕಗಳನ್ನು ನಿರ್ಗರಳವಾಗಿ ಉದ್ದರಿಸಿದ ಆರೀಫ್ ಮೊಹಮ್ಮದ್ ಖಾನ್ ಅವರು, ನಾವು ಯಾವ ಧರ್ಮದಲ್ಲಿ ಹುಟ್ಟಬೇಕು ಎಂಬುದು ದೇವರ ನಿರ್ಧಾರ, ಆದರೆ ಈ ಭೂಮಿಯಲ್ಲಿ ಹುಟ್ಟಿದ ಮೇಲೆ ನಮ್ಮ ಕರ್ತವ್ಯಗಳನ್ನು ಮಾಡುವುದಷ್ಟೇ ನಮ್ಮ ಕೆಲಸ, ಇದನ್ನೇ ಕೃಷ್ಣ ಗೀತೆಯಲ್ಲಿ ಪುರುಷಾರ್ಥ ಎಂದು ಹೇಳಿದ್ದಾನೆ. ಆದ್ದರಿಂದ ನಮ್ಮ ಗಳಿಕೆಯಲ್ಲಿ ಸ್ವಲ್ಪವನ್ನು ಬಡವರಿಗೆ, ಅನಾಥರಿಗೆ, ಅಸಹಾಯಕರಿಗೆ, ತುಳಿತಕ್ಕೊಳಗಾದವರಿಗೆ ನೀಡೋಣ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ