ದಿವ್ಯಾಳ ಗಂಡನಿಗೆ, ಆರ್.ಡಿ ಅಣ್ಣನಿಗೆ ಜೈಲೇ ಗತಿ, 13 ಆರೋಪಿಗಳ ಬೇಲ್ ರಿಜೆಕ್ಟ್

By Suvarna NewsFirst Published May 11, 2022, 6:57 PM IST
Highlights

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಬಗೆದಷ್ಟು ಇನ್ನಷ್ಟು ದೊಡ್ಡದಾಗುತ್ತಿದೆ.  ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಇದುವರೆಗೂ 32 ಜನ ಆರೋಪಿಗಳನ್ನು ಬಂಧಿಸಿದೆ. ಇದರಲ್ಲಿ ಕಿಂಗ್ ಪಿನ್ ಗಳಿದ್ದಾರೆ. ಮಧ್ಯವರ್ತಿಗಳು ಇದ್ದಾರೆ. ಅಭ್ಯರ್ಥಿಗಳು ಹಾಗೂ ಸಹಾಯ ಮಾಡಿದವರೂ ಬಂಧಿತರಲ್ಲಿ ಸೇರಿದ್ದಾರೆ. 

ವರದಿ: ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್

ಕಲಬುರಗಿ (ಮೇ.11): ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ (PSI Recruitment Scam)  ಬಂಧಿತರಾಗಿರುವವರ ಪೈಕಿ 13 ಆರೋಪಿಗಳ ಜಾಮೀನು (Bail) ಅರ್ಜಿಯನ್ನು ಕಲಬುರಗಿ ನ್ಯಾಯಾಲಯ (Kalaburagi Court) ತಿರಸ್ಕರಿಸಿದೆ. ಪರಿಣಾಮ ದಿವ್ಯ ಹಾಗರಗಿಯ (Divya Hagarai ) ಪತಿ ರಾಜೇಶ್ ಹಾಗರಗಿ (Rajesh Hagaragi) ಮತ್ತು ಆರ್ ಡಿ ಪಾಟೀಲ್ (RD Patil) ಅಣ್ಣ ಮಹಾಂತೇಶ ಪಾಟೀಲ್ ಗೆ (Mahantesh Patil) ಇನ್ನು ಜೈಲೇ ಗತಿಯಾಗಿದೆ..

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಬಗೆದಷ್ಟು ಇನ್ನಷ್ಟು ದೊಡ್ಡದಾಗುತ್ತಿದೆ.  ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಇದುವರೆಗೂ 32 ಜನ ಆರೋಪಿಗಳನ್ನು ಬಂಧಿಸಿದೆ. ಇದರಲ್ಲಿ ಕಿಂಗ್ ಪಿನ್ ಗಳಿದ್ದಾರೆ. ಮಧ್ಯವರ್ತಿಗಳು ಇದ್ದಾರೆ. ಅಭ್ಯರ್ಥಿಗಳು ಹಾಗೂ ಸಹಾಯ ಮಾಡಿದವರೂ ಬಂಧಿತರಲ್ಲಿ ಸೇರಿದ್ದಾರೆ. 

ಜಾಮೀನಿಗಾಗಿ ಪರದಾಟ: ಈ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಗಳು ಜಾಮೀನು ಪಡೆದುಕೊಂಡು ಮನೆ ಸೇರಲು ತಮ್ಮ ವಕೀಲರ ಮೂಲಕ ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಆದರೆ ನ್ಯಾಯಾಲಯ ಇವರಿಗೆ ಜಾಮೀನು ನೀಡಲು ನಿರಾಕರಿಸುತ್ತಿದೆ. 

ಇಂದು 13 ಜಾಮೀನು ತಿರಸ್ಕಾರ: ಕಲಬುರಗಿಯ ಮೂರನೇ ಹೆಚ್ಚುವರಿ JMFC ಕೋರ್ಟ್ ಮತ್ತು ಕಲಬುರಗಿಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಗಳು ಒಟ್ಟು 13 ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. 

ಒಂದೆಡೆ 9 ಅರ್ಜಿ ರಿಜೆಕ್ಟ್: ಕಲಬುರಗಿಯ ಮೂರನೇ ಹೆಚ್ಚುವರಿ JMFC ಕೋರ್ಟ್ ಒಂಬತ್ತು ಆರೋಪಿಗಳ ಜಾಮೀನು ಅರ್ಜಿಯನ್ನು ಇಂದು ತಿರಸ್ಕರಿಸಿದೆ. ಅಕ್ರಮ ಮಾಡಿ ಸಿಕ್ಕಿಬಿದ್ದ ಕಿಂಗ್ ಪಿನ್ ಆರ್.ಡಿ ಪಾಟೀಲನ ಅಣ್ಣ ಮಹಾಂತೇಶ ಪಾಟೀಲ್, ಆರ್.ಡಿ ಗೆ ರಕ್ಷಣೆ ನೀಡಿದ್ದ ಮಲ್ಲಿಕಾರ್ಜುನ ಪಾಟೀಲ್, ದಿವ್ಯಾಗೆ ರಕ್ಷಣೆ ನೀಡಿದ್ದ ಮಹಾರಾಷ್ಟ್ರದ ಉದ್ಯಮಿ ಸುರೇಶ ಕಾಟೇಗಾಂವ, ಮಹಾರಾಷ್ಟ್ರದ ಕಾಳಿದಾಸ್, ದಿವ್ಯಾಳ ಕಾರ್ ಡ್ರೈವರ್ ಸದ್ದಾಂ, ಅಭ್ಯರ್ಥಿಗಳಾದ ವಿಶಾಲ, ಶಾಸಕ ಎಂ.ವೈ ಪಾಟೀಲರ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ, ಪೊಲೀಸ್ ಕಾಸ್ಟೇಬಲ್ ರುದ್ರಗೌಡ, ಮೊಬೈಲ್ ಕೊಟ್ಟು ಸಹಾಯ ಮಾಡಿದ ಶರಣಬಸಪ್ಪ ಸೇರಿ 9 ಆರೋಪಿಗಳು ಮೂರನೇ ಹೆಚ್ಚುವರಿ JMFC ಕೋರ್ಟನಲ್ಲಿ ಜಾಮಿನಿಗೆ ಅರ್ಜಿ ಸಲ್ಲಿಸಿದ್ದರು. ಈ ಎಲ್ಲಾ 9 ಆರೋಪಿಗಳ ಜಾಮೀನು‌ ಅರ್ಜಿಯನ್ನು  ನ್ಯಾಯಾಲಯ ತಿರಸ್ಕರಿಸಿದೆ. 

ಮತ್ತೊಂದೆಡೆ ನಾಲ್ವರ ಜಾಮೀನು ವಜಾ: ಇನ್ನೊಂದೆಡೆ ಇದೇ ಕಲಬುರಗಿಯ ಒಂದನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಸಹ ಐವರ ಜಾಮೀನು ಅರ್ಜಿ ತಿರಸ್ಕರಿಸಿದೆ. ಇದರಿಂದಾಗಿ ದಿವ್ಯಾ ಹಾಗರಗಿ ಪತಿ ರಾಜೇಶ ಹಾಗರಗಿ ಸೇರಿದಂತೆ ಐವರಿಗೆ ಜೈಲೂಟ ಮತ್ತೂ ಫಿಕ್ಸ ಆದಂತಾಗಿದೆ.  ಪ್ರಕರಣದ ಕಿಂಗಪಿನ್ ದಿವ್ಯಾ ಹಾಗರಗಿಯ ಪತಿ ರಾಜೇಶ ಹಾಗರಗಿ ಮತ್ತು ಅಭ್ಯರ್ಥಿಗಳಾದ ಚೇತನ ನಂದಗಾಂವ, ಅರುಣಕುಮಾರ, ಪರೀಕ್ಷಾ ಮೇಲ್ವಿಚಾರಕರಾದ ಸುಮಾ ಅವರು ಜಾಮೀನು ಕೋರಿ ಕಲಬುರಗಿಯ ಒಂದನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ಮೊರೆ ಹೋಗಿದ್ದರು. ಎರಡು ದಿನಗಳ ಹಿಂದೆಯೇ ವಾದ ವಿವಾದ ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ಇಂದು ನ್ಯಾಯಮೂರ್ತಿ ಶುಕ್ಲಾಕ್ಷ ಪಾಲನ್ ಅವರು ಎಲ್ಲಾ ನಾಲ್ವರ ಜಾಮೀನು ಅರ್ಜಿ ತಿರಸ್ಕರಿಸಿ ತೀರ್ಪು ಪ್ರಕಟಿಸಿದ್ದಾರೆ.  ಈ ಮೂಲಕ ಒಂದೆಡೆ ದಿವ್ಯಾಳ ಪತಿ ದಿವ್ಯಾ ಹಾಗರಗಿ, ಆರ್.ಡಿ ಪಾಟೀಲ್ ಅಣ್ಣ ಮಹಾಂತೇಶ ಪಾಟೀಲ್, ಉದ್ಯಮಿ ಸುರೇಶ ಕಾಟೇಗಾಂವ್ ಮತ್ತಿತರರಿಗೆ ಜೈಲೇ ಗತಿಯಾದಂತಾಗಿದೆ. 

PSI ಅಕ್ರಮ ಕೇಸ್, ವಿಚಾರಣೆ ವೇಳೆ ದಿವ್ಯಾ ಹಾಗರಗಿ ಪಶ್ಚಾತಾಪದ ಮಾತು

ಸಿಐಡಿ ವಾದ ಏನಾಗಿತ್ತು?: ಆರೋಪಿಗಳಿಗೆ ಜಾಮೀನು ಸಿಗದಿರುವುದಕ್ಕೆ ಸಿಐಡಿ ಅಧಿಕಾರಿಗಳ ಪರಿಶ್ರಮ ಕಾರಣವಾಗಿದೆ. ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ ನಂತರ ಸಿಐಡಿ ಅಧಿಕಾರಿಗಳು, ತಮ್ಮ ವಕೀಲರ ಮೂಲಕ ತಕರಾರು ಅರ್ಜಿ ಸಲ್ಲಿಸಿದ್ದರು. ಇದು ಅತ್ಯಂತ ಗಂಭೀರ ಕೃತ್ಯ. ಅಲ್ಲದೇ ಇದು ಸಂಘಟಿತ ಅಪರಾಧ. ಆರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷಿ ನಾಶಪಡಿಸಬಹುದು. ಅಷ್ಟು ಪ್ರಭಲರಿದ್ದಾರೆ. ಅವರಿಗೆ ಜಾಮೀನು ನೀಡಬೇಡಿ ಎಂದು ಸಿಐಡಿ ಕೋರ್ಟನಲ್ಲಿ ವಾದಿಸಿತ್ತು. ಇಂದಿನ ತೀರ್ಪು ಸಿಐಡಿ ವಾದಕ್ಕೆ ಮನ್ನಣೆ ಸಿಕ್ಕಂತಾಗಿದೆ.  ಇದು ಸಂಘಟಿತ ಅಪರಾಧ ಜಾಮೀನು ನೀಡಿದ್ರೆ ಸಾಕ್ಷಿ ನಾಶ ಸಾಧ್ಯತೆ ಜಾಮೀನು ನೀಡಬೇಡಿ ಎಂದು ವಾದಿಸಿತ್ತು ಸಿಐಡಿ

PSI ನೇಮಕಾತಿ ಹಗರಣ: ಕಿಂಗ್‌ಪಿನ್‌ ಆರ್‌ಡಿ ಪಾಟೀಲ್‌ಗೆ ಸಿಐಡಿ ಮತ್ತೊಂದು ಶಾಕ್‌

ಕಿನ್ ಪಿನ್ ಗಳಿಗೆ ನಡುಕ: ಇಂದು ಜಾಮೀನು ತಿರಸ್ಕೃತಗೊಂಡವರೆಲ್ಲಾ ಅಭ್ಯರ್ಥಿಗಳು, ಕಿಂಗ್ ಪಿನ್ ಗಳಿಗೆ ಸಹಾಯ ಮಾಡಿದವರಾಗಿದ್ದಾರೆ. ಇವರಿಗೇ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿರುವುದು ಪ್ರಮುಖ ಕಿಂಗ್ ಪಿನ್ ಗಳ ನಿದ್ದೆಗೆಡಿಸಿದೆ. ಸಹಾಯ ಮಾಡಿದವರಿಗೇ ಜಾಮೀನು ಸಿಗದಿರುವಾಗ ಪ್ರಮುಖ ಪಾತ್ರಧಾರಿಗಳಿಗೆ ಜಾಮೀನು ಅಸಾಧ್ಯವೇ ಸರಿ.‌ ಹಾಗಾಗಿಯೇ ಜೈಲೂಟ ತಿನ್ನುತ್ತಿರುವ ದಿಬ್ಯಾ ಹಾಗರಗಿ ಹಾಗೂ ಇತರ ಕಿಂಗ್ ಪಿನ್ ಗಳಿಗೆ ಈ ತೀರ್ಪು ನಡುವ ಹುಟ್ಟಿಸಿದೆ.

click me!