
ವಿಜಯಪುರ (ಮೇ.28) : ಹಿಂದೂ ಸಂಸ್ಕೃತಿಯ ಒಂದು ಭಾಗ ಆಗಿರುವ ವೈದಿಕ ಸಂಸ್ಕೃತಿಯನ್ನು ಸಂಘ ಪರಿವಾರ, ಬಿಜೆಪಿ ಅನುಸರಿಸುತ್ತಿದೆ. ಇಲ್ಲಿ ಯೋಚನೆಗೆ ಅವಕಾಶವಿಲ್ಲ. ಸರ್ವಾಧಿಕಾರ ಧೋರಣೆಯೇ ಇಲ್ಲಿ ಪ್ರಧಾನವಾಗಿದೆ ಎಂದು ಖ್ಯಾತ ಚಿಂತಕ, ಮಾಜಿ ಸಂಸದ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್(Prakash ambedkar) ಹೇಳಿದರು.
ಇಲ್ಲಿನ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಭಾರತೀಯ ಪ್ರಜಾತಂತ್ರ; ಸವಾಲು ಮೀರುವ ದಾರಿಗಳು ಎಂಬ ವಿಷಯದ ಕುರಿತಾದ 9ನೇ ಮೇ ಸಾಹಿತ್ಯ ಮೇಳದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಮೋದಿ ಸರ್ಕಾರ ಹಿಂದೂ ವಿರೋಧಿ: ಅಂಬೇಡ್ಕರ್ ಮೊಮ್ಮಗ!
ಸಂಘ ಪರಿವಾರ(RSS) ಸರ್ವಾಧಿಕಾರ ಧೋರಣೆಯ ವೈದಿಕ ಸಂಸ್ಕೃತಿಯನ್ನು ಸ್ಥಾಪಿಸಿ ಸಂತ ಸಂಸ್ಕೃತಿಯನ್ನು ಕೊನೆಗಾಣಿಸಲು ಹವಣಿಸುತ್ತಿದೆ. ಧರ್ಮದ ಹೆಸರಿನಲ್ಲಿ ಕೋಮುದ್ವೇಷ ಬಿತ್ತುತ್ತಿದೆ. ಭಾರತೀಯ ಸಂವಿಧಾನದ ಮೇಲೆ ನಿತ್ಯ ಆಕ್ರಮಣ ಮಾಡುತ್ತಿದೆ ಎಂದು ಪ್ರಕಾಶ ಅಂಬೇಡ್ಕರ್ ಕಳವಳ ವ್ಯಕ್ತಪಡಿಸಿದರು.
ಹಿಂದೂ ಎಂಬ ಶಬ್ದದಲ್ಲಿ ಎರಡು ಸಂಸ್ಕೃತಿಗಳು ಅಡಕವಾಗಿವೆ. ಹಿಂದೂ ಶಬ್ದದಲ್ಲಿ ವೈದಿಕ ಸಂಸ್ಕೃತಿ ಹಾಗೂ ಸಂತ ಸಂಸ್ಕೃತಿ ಇದ್ದು, ವೈದಿಕ ಸಂಸ್ಕೃತಿ ಸರ್ವಾಧಿಕಾರ ಧೋರಣೆ ಅನುಸರಿಸಿದರೆ, ಸಂತ ಸಂಸ್ಕೃತಿ ಸಹೋದರತೆ, ಸಮಾನತೆಯನ್ನು ಅನುಸರಿಸುತ್ತದೆ. ಭಾರತೀಯ ಸಂವಿಧಾನ ಈ ಸಂತ ಸಂಸ್ಕೃತಿ ಆಧರಿಸಿ ರೂಪಿತವಾಗಿದೆ ಎಂದರು.
ಹಿಂದೂ ಸಂಸ್ಕೃತಿಯ ಒಂದು ಭಾಗವಾಗಿರುವ ವೈದಿಕ ಸಂಸ್ಕೃತಿಯನ್ನು ಬಿಜೆಪಿ, ಸಂಘ ಪರಿವಾರ ಅನುಸರಿಸುತ್ತಿದೆ. ಇಲ್ಲಿ ಯೋಚನೆಗೆ ಅವಕಾಶವಿಲ್ಲ. ಸರ್ವಾಧಿಕಾರ ಧೋರಣೆಯೇ ಇಲ್ಲಿ ಪ್ರಧಾನವಾಗಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾದ ಸಂತ ಸಂಸ್ಕೃತಿ ಚಾರ್ವಾಕದಿಂದ ಹಿಡಿದು ಪೆರಿಯಾರ ರಾಮಸ್ವಾಮಿ ಅವರವರೆಗೂ ವಿಸ್ತರಿಸಿದೆ. ಇಲ್ಲಿ ಶಾಂತಿ ಇದೆ, ಸ್ವೀಕಾರವಿದೆ, ಸಹನೆ ಇದೆ, ಸಹೋದರತೆ ಇದೆ ಹಾಗೂ ಸಮಾನತೆ ಇದೆ. ಭಾರತೀಯ ಸಂವಿಧಾನವು ಸಹ ಈ ಸಂತ ಸಂಸ್ಕೃತಿಯ ಪರಿಭಾಷೆಯಾಗಿದೆ ಎಂದರು.
ಸುಪ್ರೀಂ ಅನುಮತಿ ಬೆನ್ನಲ್ಲೇ ತಮಿಳುನಾಡಿನ 45 ಕಡೆ ಆರೆಸ್ಸೆಸ್ ಪಥಸಂಚಲನ
ವೈದಿಕ ಸಂಸ್ಕೃತಿಯಲ್ಲಿ ಮಹಿಳೆಗೆ ಗೌರವವಿಲ್ಲ. ವಿಧವೆಯಾದರೆ ಕೇಶಮುಂಡನ ಮಾಡುವ ಕೆಟ್ಟಸಂಸ್ಕೃತಿ ಅಲ್ಲಿದೆ. ಆದರೆ, ಸಂತ ಸಂಸ್ಕೃತಿಯಲ್ಲಿ ವಿಧವಾ ಪುನರ್ ವಿವಾಹಕ್ಕೆ ಅವಕಾಶವಿದೆ ಎಂದರು.
ಸಂಸದೀಯ ಪ್ರಜಾಪ್ರಭುತ್ವದ ಆಶಯಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಇಂದಿಗೂ ರಾಷ್ಟ್ರೀಯ ಪಕ್ಷಗಳು ಆಸಕ್ತಿ ವಹಿಸಿಲ್ಲ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಣ್ಣ ಸಮುದಾಯಗಳಿಗೂ ಪ್ರಾತಿನಿಧ್ಯವಿದೆ. ಆದರೆ, ಅಧ್ಯಕ್ಷ ಮಾದರಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾತಿಯತೆ ಪ್ರೋತ್ಸಾಹಿಸುವುದು ದಟ್ಟವಾಗಿದೆ. ಕೆಲವೇ ರಾಜ್ಯಗಳಲ್ಲಿ ಸೀಮಿತವಾದ ಸಮುದಾಯಗಳು ಅಧ್ಯಕ್ಷನಾಗಿ ಆಯ್ಕೆಯಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಅಧ್ಯಕ್ಷ ಮಾದರಿ ವ್ಯವಸ್ಥೆ ಸರಿಯಾದ ವ್ಯವಸ್ಥೆ ಅಲ್ಲ, ಜಾತಿ ಆಧರಿಸಿ ಟಿಕೆಟ್ ಹಂಚಿಕೆಯಾಗುತ್ತಿದೆ. ಸಣ್ಣ ಸಮುದಾಯದವರನ್ನು ನಿಮ್ಮ ವೋಟ್ಗಳಿಲ್ಲ ಎಂದು ಲೇಬಲ್ ಅಂಟಿಸಿ ಅವರನ್ನು ರಾಜಕೀಯ ವ್ಯವಸ್ಥೆಯಿಂದ ದೂರ ಇರಿಸುವ ವ್ಯವಸ್ಥೆ ದೂರವಾಗಬೇಕಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ