
ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದೆ. ಐಪಿಸಿ ಸೆಕ್ಷನ್ 376(2)(k) ಅತ್ಯಾ1ಚಾರ ಅಪರಾಧಕ್ಕೆ ಜೀವಾವಧಿ ಶಿಕ್ಷೆಯಾಗಿದೆ. ಈ ಮೂಲಕ ಜೀವನ ಪರ್ಯಂತ ಜೈಲಿನಲ್ಲೇ ಇರುವ ಶಿಕ್ಷೆ ಪ್ರಕಟವಾಗಿದೆ. 376(2)(n) ಸೆಕ್ಷನ್ ಗೆ ಜೀವಾವಧಿ. 354 ಗೆ 3 ವರ್ಷ, 354(b) 3 ವರ್ಷ ಕಠಿಣ ಕಾರಗೃಹ ಶಿಕ್ಷೆ, ಒಟ್ಟು 11.5 ಲಕ್ಷ ದಂಡ ಜೊತೆಗೆ ಒಟ್ಟು ವಿಧಿಸಲಾದ ದಂಡದ ಮೊತ್ತದಲ್ಲಿ ₹11,25,000 ಅನ್ನು ಪೀಡಿತೆಗೆ ಪರಿಹಾರವಾಗಿ ನೀಡಲು ಕೋರ್ಟ್ ಆದೇಶ ಹೊರಬಿದ್ದಿದೆ. ಈ ಮೂಲಕ ಪ್ರಜ್ವಲ್ ರೇವಣ್ಣಗೆ ಬಹುದೊಡ್ಡ ಶಿಕ್ಷೆಯಾಗಿದೆ.
ಕೆ ಆರ್ ನಗರದ ಮನೆಗೆಲಸದವಳ ಮೇಲಿನ ಅತ್ಯಾ1ಚಾರ ಪ್ರಕರಣದ ವಿಚಾರಣೆ ನಡೆಸಿ ಶುಕ್ರವಾರ ದೋಷಿ ಎಂದು ಪ್ರಕಟಿಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಮಧ್ಯಾಹ್ನ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ. ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಈ ಆದೇಶ ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(n) ಮತ್ತು 376(2)(k) ಅಡಿಯಲ್ಲಿ ಆರೋಪಗಳು ದಾಖಲಾಗಿದೆ. ಈ ಕಲಂಗಳು ನಿರಂತರ ಅತ್ಯಾ1ಚಾರ ಮತ್ತು ನೌಕರಿ ಮಾಡುತ್ತಿರುವ ಮಹಿಳೆಯ ಮೇಲೆ ನಡೆದ ಅತ್ಯಾ1ಚಾರಕ್ಕೆ ಸಂಬಂಧಪಟ್ಟದ್ದಾಗಿದೆ. ಮೊದಲ ಪ್ರಕರಣದಲ್ಲಿ ಮಾತ್ರವೇ ಪ್ರಜ್ವಲ್ ವಿರುದ್ಧ ತೀರ್ಪು ಪ್ರಕಟಗೊಂಡಿದ್ದು, ಇನ್ನೂ ಮೂರು ಪ್ರಕರಣಗಳು ಇದೇ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇನ್ನು ಈ ಮೂರು ಪ್ರಕರಣದ ಒಂದು ಪ್ರಕರಣದಲ್ಲಿ ಪ್ರಜ್ವಲ್ ತಂದೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ವಿರುದ್ಧ ಕೂಡ ಆರೋಪ ಇದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ.
ಇದಕ್ಕೂ ಮುನ್ನ ಬೆಳಗ್ಗೆ ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆಯಿತು. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸಾರ್ವಜನಿಕ ವಕೀಲರಾದ ಬಿ.ಎನ್. ಜಗದೀಶ್ ಮತ್ತು ಎಸ್ಪಿಪಿ ಅಶೋಕ್ ನಾಯಕ್ ತಮ್ಮ ವಾದವನ್ನು ಮಂಡಿಸಿದರು. ಇನ್ನು ಇದೇ ಸಮಯದಲ್ಲಿ ಕೋರ್ಟ್ನಲ್ಲಿ ಅಪರಾಧಿ ಪ್ರಜ್ವಲ್ ರೇವಣ್ಣ ಹಾಜರಾರಿದ್ದರು. ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಸ್ವತಃ ಪ್ರಜ್ವಲ್ ಮತ್ತು ಅವರ ಪರ ವಕೀಲರು ಕೂಡ ಮನವಿ ಮಾಡಿದ್ದರು. ಇನ್ನು ತೀರ್ಪು ಹಿನ್ನಲೆ ಕೋರ್ಟ್ ನಲ್ಲಿ ವಕೀಲರು ಕಿಕ್ಕಿರಿದು ತುಂಬಿದ್ದರು.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ವಿರುದ್ಧವಾಗಿ ಪ್ರಜ್ವಲ್ ರೇವಣ್ಣ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಹೈಕೋರ್ಟ್ ಈ ತೀರ್ಪಿಗೆ ತಾತ್ಕಾಲಿಕ ತಡೆ ನೀಡಿದರೆ, ಉಳಿದ ಮೂರು ಪ್ರಕರಣಗಳಲ್ಲಿ ಜಾಮೀನಿಗಾಗಿ ಅವರು ಮುಂದಿನ ಕಾನೂನು ಹೋರಾಟ ನಡೆಸಬಹುದು.
ಆದರೆ ಹೈಕೋರ್ಟ್ ಕೂಡ ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದರೆ, ಆಗ ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಮಾರ್ಗ ಮಾತ್ರ ಉಳಿಯುತ್ತದೆ. ಆದರೆ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನು ಸಮರ್ಥಿಸಿದರೆ, ಆಗ ಅವರು ವಿಧಿಸಲಾದ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ