
ಬೆಂಗಳೂರು: ಅಶ್ಲೀಲ ವೀಡಿಯೋ ಮತ್ತು ಅತ್ಯಾ8ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ತೀರ್ಪು ಹೊರಬಿದ್ದಿದೆ. ಮನೆಕೆಲಸದಾಕೆ ವಿರುದ್ಧದ ಅತ್ಯಾ*ಚಾರ ಪ್ರಕರಣದಲ್ಲಿ ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ಘೋಷಿಸಿದೆ. ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಘೋಷಣೆಯಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಶನಿವಾರ ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ. ತೀರ್ಪು ಪ್ರಕಟವಾಗುತ್ತಿದ್ದಂತೆಯೇ ನ್ಯಾಯಾಲಯದಲ್ಲೇ ಪ್ರಜ್ವಲ್ ರೇವಣ್ಣ ಕಣ್ಣೀರು ಹಾಕಿದ್ದಾರೆ. ಕೇಸಿನ ತೀರ್ಪು ಹಿನ್ನೆಲೆ ಪ್ರಜ್ವಲ್ ರೇವಣ್ಣನನ್ನು ಪೊಲೀಸರು ಕೋರ್ಟ್ಗೆ ಕರೆತಂದಿದ್ದರು.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, 26 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಿದ ಬಳಿಕ, ಇಂದು ತೀರ್ಪು ಪ್ರಕಟಿಸಿದ್ದು. ದೋಷಿ ಎಂಬ ತೀರ್ಪು ಪ್ರಜ್ವಲ್ರ ಭವಿಷ್ಯದ ಜೀವನದ ಬಗ್ಗೆ ಕುಟುಂಬವನ್ನು ಆತಂಕಕ್ಕೀಡಾಗಿಸಿದೆ. ಇದೀಗ ತಂದೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ರೇವಣ್ಣ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ. ಈ ಪ್ರಕರಣವು ಕೇವಲ ನ್ಯಾಯಾಂಗ ಮಟ್ಟದಲ್ಲಿ ಮಾತ್ರವಲ್ಲದೆ, ರಾಜ್ಯದ ರಾಜಕೀಯ ಮಟ್ಟದಲ್ಲಿಯೂ ದೊಡ್ಡ ಚರ್ಚೆ ಹುಟ್ಟುಹಾಕಿತ್ತು.
ಪ್ರಜ್ವಲ್ ರೇವಣ್ಣ 2023ರ ಮೇ ತಿಂಗಳಿಂದಲೇ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ 14 ತಿಂಗಳಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದು, ಇಂದು ನ್ಯಾಯಾಲಯದ ತೀರ್ಪು ಪ್ರಕಟಿಸಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಒಟ್ಟು ನಾಲ್ಕು ಪ್ರಕರಣವಿದ್ದು, ಅದರಲ್ಲಿ ಇನ್ನೂ ಮೂರು ಪ್ರಕರಣಗಳು ಬಾಕಿ ಇವೆ. ಇಂದು ತೀರ್ಪು ಪ್ರಜ್ವಲ್ ವಿರುದ್ಧ ಬಂದಿದ್ದು, ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇಲ್ಲ. ಇನ್ನು ನಾಳೆ ತೀರ್ಪಿನ ಪ್ರಮಾಣ ಎಷ್ಟೆಂದು ಗೊತ್ತಾಗಲಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಅನೇಕ ವಿಧಿಗಳಡಿ ಕೇಸು ದಾಖಲಾಗಿ, ಗಂಭೀರ ಆರೋಪಗಳು ಹೊರಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದವು:
IPC ಸೆಕ್ಷನ್ 376 (2)(k): ಅಧಿಕಾರದ ಸ್ಥಾನದಲ್ಲಿದ್ದು ಮಹಿಳೆಯ ಮೇಲೆ ಅತ್ಯಾ8ಚಾರ.
IPC ಸೆಕ್ಷನ್ 376 (2)(n): ಪದೇಪದೆ ಅತ್ಯಾ8ಚಾರ ಎಸಗಿದ ಆರೋಪ.
ಸೆಕ್ಷನ್ 354(A): ಲೈಂಗಿಕ ಬೇಡಿಕೆ ಇಡುವುದು.
ಸೆಕ್ಷನ್ 354(B): ಮಹಿಳೆಯನ್ನು ಬಲವಂತವಾಗಿ ವಸ್ತ್ರಹೀನಗೊಳಿಸುವುದು.
ಸೆಕ್ಷನ್ 354(C): ಅಶ್ಲೀಲ ದೃಶ್ಯಗಳನ್ನು ಚಿತ್ರೀಕರಿಸುವುದು.
ಸೆಕ್ಷನ್ 506: ಜೀವ ಬೆದರಿಕೆ.
ಸೆಕ್ಷನ್ 201: ಸಾಕ್ಷ್ಯ ನಾಶ.
ಲೋಕಸಭಾ ಚುನಾವಣಾ ಸಂದರ್ಭ, ಪ್ರಜ್ವಲ್ ರೇವಣ್ಣ ಸಂಬಂಧಿಸಿದಂತೆ ಎನ್ನಲಾದ 15 ಸಾವಿರಕ್ಕೂ ಹೆಚ್ಚು ಅಶ್ಲೀಲ ಫೋಟೋ ಹಾಗೂ ವಿಡಿಯೋಗಳು ಪೆನ್ಡ್ರೈವ್ಗಳಲ್ಲಿ ಸಾರ್ವಜನಿಕವಾಗಿ ಹಂಚಿಕೆಗೊಂಡು, ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದವು. ಈ ಮೂಲಕ ಅನೇಕರ ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಬೆಳಕಿಗೆ ಬಂದವು.
ಘಟನೆ ಬಹಿರಂಗವಾದ ನಂತರ, ರಾಜ್ಯ ಸರ್ಕಾರ ತನಿಖೆಗೆ ಮುಂದಾಗಿ, ಸಂತ್ರಸ್ತ ಮಹಿಳೆಯರಿಗೆ ಭದ್ರತೆ ಹಾಗೂ ನ್ಯಾಯದ ಭರವಸೆ ನೀಡಿತ್ತು. ಈ ಭರವಸೆಯ ಹಿನ್ನೆಲೆಯಲ್ಲಿ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಅತ್ಯಾ8ಚಾರದ ಮೊದಲ ಪ್ರಕರಣ ದಾಖಲಾಗಿತ್ತು.
ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದರು. ಇವರ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಗೊಳಿಸಿ, ನಂತರದ ದಿನಗಳಲ್ಲಿ ಅವರನ್ನು ಭಾರತಕ್ಕೆ ಹಿಂತಿರುಗಿ ಬರುವಂತೆ ಮಾಡುವ ಪ್ರಕ್ರಿಯೆ ಆರಂಭವಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ