ಉತ್ತರ, ಪೂರ್ವ ದಿಕ್ಕಿನತ್ತ ಮಿಡತೆ ಸೈನ್ಯ: ಕರ್ನಾಟಕದಲ್ಲಿ ದಾಳಿ ಸಾಧ್ಯತೆ ಕ್ಷೀಣ!

By Kannadaprabha NewsFirst Published May 28, 2020, 8:03 AM IST
Highlights

ರಾಜ್ಯಕ್ಕೆ ಮಿಡತೆ ದಾಳಿ ಸಾಧ್ಯತೆ ಕ್ಷೀಣ| ಉತ್ತರ, ಪೂರ್ವ ದಿಕ್ಕಿನತ್ತ ಹೊರಟ ಮಿಡತೆಗಳು| ಕೃಷಿ ಇಲಾಖೆ ಆಯುಕ್ತರ ಹೇಳಿಕೆ

ಬೆಂಗಳೂರು(ಮೇ.28): ಮಹಾರಾಷ್ಟ್ರದ ನಾಗ್ಪುರಕ್ಕೆ ದಾಳಿ ಮಾಡಿದ್ದ ಮಿಡತೆಗಳ ದಂಡು ಎರಡು ವಿಭಾಗವಾಗಿದ್ದು ಉತ್ತರ ಮತ್ತು ಪೂರ್ವ ದಿಕ್ಕಿನತ್ತ ಪ್ರಯಾಣ ಬೆಳೆಸಿವೆ. ಹಾಗಾಗಿ ದಕ್ಷಿಣದಲ್ಲಿರುವ ರಾಜ್ಯದ ಗಡಿ ಜಿಲ್ಲೆಗಳತ್ತ ಬರುವ ಸಾಧ್ಯತೆ ಕಡಿಮೆಯಾಗಿದೆ. ಆದರೂ ಕೂಡ ಎಲ್ಲಾ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್‌ ಕುಮಾರ್‌ ದೀಕ್ಷಿತ್‌ ತಿಳಿಸಿದ್ದಾರೆ.

ಬುಧವಾರ ರಾಜ್ಯದ ಮೇಲೆ ಮಿಡತೆಗಳ ದಾಳಿ ನಿಯಂತ್ರಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ, ಕಂದಾಯ, ಪೊಲೀಸ್‌ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆ ನಡೆಸಲಾಗಿದೆ. ಬೀದರ್‌, ಯಾದಗಿರಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದ್ದು ಮಿಡತೆ ದಾಳಿ ನಿಯಂತ್ರಿಸಲು ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಶೃಂಗೇರಿಗೆ ಲಗ್ಗೆ ಇಟ್ ಲಕ್ಷಾಂತರ ಮಿಡತೆ ಹಿಂಡು

ಬೀದರ್‌ ಜಿಲ್ಲಾಧಿಕಾರಿಯವರು ಬೀದರಿನಿಂದ ಉತ್ತರಕ್ಕೆ ಇರುವ ಮಹಾರಾಷ್ಟ್ರದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಮಿಡತೆಗಳು ಯಾವ ದಿಕ್ಕಿನತ್ತ ಪ್ರಯಾಣಿಸುತ್ತಿವೆ ಎಂಬುದರ ಮಾಹಿತಿ ಕಲೆಹಾಕಲಾಗುತ್ತಿದೆ. ಮಹಾರಾಷ್ಟ್ರದ ಕೃಷಿ ಆಯುಕ್ತ ಸುಹಾಸ್‌ ದೀವ್‌್ಸ ಅವರು ನೀಡಿರುವ ಮಾಹಿತಿಯಂತೆ ನಾಗ್ಪುರಕ್ಕೆ ಬಂದಿದ್ದ ಮಿಡತೆಗಳ ಗುಂಪು ಎರಡು ಗುಂಪಾಗಿ ವಿಭಾಗವಾಗಿದ್ದು, ಒಂದು ಭಾಗ ಮಧ್ಯಪ್ರದೇಶದ ಕಡೆಗೆ ವಾಪಸ್‌ ಆಗಿದೆ. ಮತ್ತೊಂದು ಭಾಗ ನಾಗ್ಪುರದಿಂದ ಇನ್ನೂ ಪೂರ್ವಕ್ಕೆ ಇರುವ ಮಹಾರಾಷ್ಟ್ರದ ಭಂಡಾರ ಜಿಲ್ಲೆಗೆ(ಬೀದರ್‌ನಿಂದ 512 ಕಿ.ಮೀ ದೂರ) ಹೋಗಿದೆ. ಆದ್ದರಿಂದ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಕಡಿಮೆ ಆಗಿದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು.

ಮರಗಳ ಮೇಲೆ ದಾಳಿ:

ಮಿಡತೆಗಳ ವರ್ತನೆ ವಿಚಿತ್ರವಾಗಿರುವುದನ್ನು ಮಹಾರಾಷ್ಟ್ರದ ಅಧಿಕಾರಿಗಳು ಗುರುತಿಸಿದ್ದಾರೆ. ಮಿಡತೆಗಳು ಹೆಚ್ಚಾಗಿ ಜಾಲಿಮರದ ಎಲೆಗಳು, ಬೇವಿನ ಮರದ ಹಸಿ ಎಲೆಗಳು ಮತ್ತು ಬಿದಿರಿನ ಎಲೆಗಳನ್ನು ಹೆಚ್ಚಾಗಿ ತಿನ್ನುತ್ತಿವೆ. ಹೀಗಾಗಿ ಅರಣ್ಯದ ಮೇಲೆ ದಾಳಿ ಮಾಡುವ ಸಾಧ್ಯತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಒಂದು ವೇಳೆ ಅರಣ್ಯದ ಮೇಲೆ ಮಿಡತೆ ಹಾವಳಿ ಹೆಚ್ಚಾದರೆæ ‘ಕ್ಲೋರೊಪೈರೋಫಾಸ್ಟ್‌ ’ ಕೀಟನಾಶಕ ಸಿಂಪಡಿಸಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎಂದು ತಿಳಿಸಿದರು.

ಮಿಡತೆಗಳ ಈ ಮಹಾಪಯಣ ಮಾರಕ, ತಡೆಗಟ್ಟುವುದು ಹೇಗೆ?

ಮಿಡತೆ ದಾಳಿ ಸಾಧ್ಯತೆ ಕಡಿಮೆ ಇದ್ದರೂ ಮುನ್ನೆಚ್ಚರಿಕೆ ವಹಿಸುವಂತೆ ಮಹಾರಾಷ್ಟ್ರ ಗಡಿಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾಡಾಗಲಿ, ಕಾಡಾಗಲಿ ಎಲ್ಲಾದರು ಸರಿ ಮಿಡತೆ ದಾಳಿ ಮಾಡಿದರೆ ಔಷಧಿ ಸಿಂಪಡಿಸಿ ನಿಯಂತ್ರಿಸಲು ನಾವು ಸಿದ್ಧರಿದ್ದೇವೆ.

-ಬ್ರಿಜೇಶ್‌ ಕುಮಾರ್‌ ದೀಕ್ಷಿತ್‌, ಕೃಷಿ ಅಯುಕ್ತ

click me!