
ನಾಗಪುರ (ಏ.15): ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿಯ ಹಿಂಡಲಗಾ ಜೈಲಿನಿಂದಲೇ 100 ಕೋಟಿ ರು. ಸುಲಿಗೆ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರಿಂದ ವಿಚಾರಣೆಗೆ ಒಳಪಟ್ಟಿರುವ ಕುಖ್ಯಾತ ಭೂಗತ ಪಾತಕಿ ಜಯೇಶ್ ಪೂಜಾರಿ ಅಲಿಯಾಸ್ ಶಹೀರ್ ಶಾಕೀರ್ (35), ಕರ್ನಾಟಕ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರ ಹತ್ಯೆಗೂ ಸಂಚು ರೂಪಿಸಿದ್ದ ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.
ಅಲ್ಪಸಂಖ್ಯಾತರ ವಿರುದ್ಧ ಈಶ್ವರಪ್ಪ ಬಹಿರಂಗವಾಗಿಯೇ ನೀಡುತ್ತಿದ್ದ ಹೇಳಿಕೆಗಳಿಂದ ಆಕ್ರೋಶಗೊಂಡಿದ್ದ ನಿಷೇಧಿತ ಪಿಎಫ್ಐ ಕಾರ್ಯಕರ್ತನೂ ಆಗಿರುವ ಜಯೇಶ್, ಈಶ್ವರಪ್ಪ ಹತ್ಯೆಗೆ ತನ್ನ ಬೆಂಬಲಿಗರಿಗೆ ಸುಪಾರಿ ನೀಡಿದ್ದ. ವಿವಿಧ ಪ್ರಕರಣಗಳಲ್ಲಿ ಜಯೇಶ್ನನ್ನು ವಿಚಾರಣೆಗೆ ಒಳಪಡಿಸಿರುವ ನಾಗಪುರ ಪೊಲೀಸರಿಗೆ ಈಶ್ವರಪ್ಪ ಅವರ ಹತ್ಯೆಯ ಮಾಹಿತಿ ಮಾಹಿತಿ ಸಿಕ್ಕಿದ್ದು, ಅವರು ಜಯೇಶ್ನ ಎಲ್ಲಾ ದುಷ್ಕೃತ್ಯಗಳ ಕುರಿತು ಎನ್ಐಎಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್ಐಎನ ತಂಡವೊಂದು ನಾಗಪುರಕ್ಕೆ ಆಗಮಿಸಿದ್ದು, ಮಾಹಿತಿ ಕಲೆ ಹಾಕುತ್ತಿದೆ. ಜೊತೆಗೆ ಅದು ಈಶ್ವರಪ್ಪ ಹತ್ಯೆ ಸಂಚಿನ ಕುರಿತ ಪ್ರಕರಣಗಳನ್ನು ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಸರ್ಕಾರ ರಚನೆ: ಸಚಿವ ಮುರುಗೇಶ್ನಿರಾಣಿ
‘ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಸಂಘಟನೆ, ಪಿಎಫ್ಐಗೆ ಬೆಂಬಲ ನೀಡಿದ್ದು, ಜಯೇಶ್ ಮೂಲಕ ಭಾರತದಲ್ಲಿ ದುಷ್ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ. ಇದಕ್ಕೆಂದೇ ಆತನಿಗೆ ಮಾಸಿಕ 4 ಲಕ್ಷ ರು. ಹಣ ಪಾವತಿ ಮಾಡುತ್ತಿದೆ. ಈ ಹಣ ಬಳಸಿಕೊಂಡು ಜಯೇಶ್ ಮತ್ತು ಆತನ ಸಂಗಡಿಗರು ಹಿಂಡಲಗಾ ಜೈಲಿನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿ, ಬಳಕೆ, ಮಾಹಿತಿ ಹಂಚಿಕೆ, ವಿಡಿಯೋ ಚಾಟ್ ಮತ್ತಿತರೆ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದಾರೆ. ಜೊತೆಗೆ ಜೈಲಿನಿಂದ ಹೊರಗೆ ಇರುವ ತಮ್ಮ ಬೆಂಬಲಿಗ ಮೂಲಕವೂ ದುಷ್ಕೃತ್ಯಗಳನ್ನು ನಡೆಸುತ್ತಿದ್ದಾರೆ’ ಎಂಬ ವಿಷಯ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಆಘಾತಕಾರಿ ಸಂಗತಿ: ನನ್ನ ಹತ್ಯೆಗೆ ಸ್ಕೆಚ್ ಹಾಕಿರುವ ಆಘಾತಕಾರಿ ಸಂಗತಿ ಗೊತ್ತಾಗಿದೆ. ಈ ಬಗ್ಗೆ ರಾಜ್ಯದ ಗೃಹ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರು ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಹಿಂದೆ ನನಗೆ ಕೊಲೆ ಬೆದರಿಕೆ ಬಂದಾಗ ಸಿದ್ದರಾಮಯ್ಯ ಸರ್ಕಾರ ಭದ್ರತೆ ನೀಡಿತ್ತು. ನನ್ನ ಹಿಂದುತ್ವದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.
ಯಾರು ಈ ಜಯೇಶ್ ಪೂಜಾರಿ?: ಕೇರಳ ಮೂಲದ ಜಯೇಶ್ 7ನೇ ತರಗತಿಗೆ ಶಾಲೆ ಬಿಟ್ಟಿದ್ದ. 12ನೇ ವಯಸ್ಸಿನಲ್ಲೇ ಮನೆ ಬಿಟ್ಟ ಈತ 2004ರಲ್ಲಿ ಮುಂಬೈನಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ. ಈ ನಡುವೆ 2007ರಲ್ಲಿ ಬೆಂಗಳೂರಲ್ಲಿ ವಾಹನ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ಬಳಿಕ ಪೋಷಕರು ಜಾಮೀನು ನೀಡಿ ಬಿಡುಗಡೆ ಮಾಡಿಸಿದ್ದರು. ಬಳಿಕ ಈತ ತವರಿಗೆ ತೆರಳಿದ್ದ ವೇಳೆ ತನ ಮಾವನ ಮಗ ಮತ್ತು ಸೊಸೆ ಈತ ಮತಾಂತರಗೊಂಡ ಮತ್ತು ಗ್ರಾಮದಲ್ಲಿ ನಮಾಜ್ ಮಾಡುತ್ತಿದ್ದ ವಿಷಯ ಪ್ರಶ್ನಿಸಿದ್ದಕ್ಕೆ ಅವರನ್ನು ಹತ್ಯೆಗೈದಿದ್ದ. ಹತ್ಯೆ ಬಳಿಕ ಮುಂಬೈಗೆ ಪರಾರಿಯಾಗಿ 2013ರಲ್ಲಿ ಅಲ್ಲಿ ವಿವಾಹವಾಗಿದ್ದ.
ಕೆಳಮಟ್ಟದ ರಾಜಕಾರಣದಿಂದ ನನಗೆ ಬೇಜಾರಾಗಿದೆ: ರಮೇಶ್ ಜಾರಕಿಹೊಳಿ
2012-13ರಲ್ಲಿ ಈತ ವ್ಯಕ್ತಿಯೊಬ್ಬನ ಮೂಲಕ ಪಿಡಿಎಫ್ ಸಂಘಟನೆ ಸಂಪರ್ಕಕ್ಕೆ ಬಂದಿದ್ದ. ಬಳಿಕ ಛೋಟಾ ಶಕೀಲ್ ಸೂಚನೆ ಅನ್ವಯ ಈತ ಪಿಎಫ್ಐ ಮತ್ತು ಕರ್ನಾಟಕ ಡಿಗ್ನಿಟಿ ಫೋರಂ ಪರವಾಗಿ ಕೆಲಸ ಆರಂಭಿಸಿದ್ದ. ನಂತರ 2013ರಲ್ಲಿ ಪ್ರಕರಣವೊಂದಲ್ಲಿ ಬಂಧಿತನಾಗಿದ್ದ ವೇಳೆ ಲಷ್ಕರ್ ಸಂಘಟನೆಯ ದಕ್ಷಿಣ ಭಾರತದ ಕಮಾಂಡರ್ ಕ್ಯಾ. ನಜೀರ್ ಸಂಪರ್ಕಕ್ಕೆ ಬಂದಿದ್ದ. ಹೀಗೆ ಸತತವಾಗಿ ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಕಳೆದ ಜ.14ರಂದು ಹಿಂಡಲಗಾ ಜೈಲಿನಿಂದಲೇ ದಾವೂದ್ ಇಬ್ರಾಹಿಂ ಪರವಾಗಿ ಕರೆ ಮಾಡಿ 1000 ಕೋಟಿ ರು. ಸುಲಿಗೆ ಹಣ ನೀಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ